ಸಮಾಜದಲ್ಲಿ ಎಲ್ಲರಿಗೂ ಬದುಕುವ ಹಕ್ಕಿದೆ: ನ್ಯಾಯಾಧೀಶೆ ಲಕ್ಷ್ಮೀ ಎನ್.ಗರಗ

Share

ಹಾವೇರಿ: ಸಮಾಜದಲ್ಲಿ ಎಲ್ಲರಿಗೂ ಬದುಕುವ ಹಕ್ಕಿದೆ, ಎಲ್ಲರೂ ಗೌರವಯುತವಾಗಿ ಬದುಕುವುದು ಮುಖ್ಯ ಎಂದು  ಎಂದು ಪ್ರಧಾನ ಸಿವ್ಹಿಲ್ ನ್ಯಾಯಾಧೀಶೆ ಲಕ್ಷ್ಮೀ ಎನ್.ಗರಗ  ಹೇಳಿದರು.

ನಗರದ ಡಿ ದೇವರಾಜ್ ಅರಸು ಭವನದಲ್ಲಿ ಮಂಗಳವಾರ ನಡೆದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯವಾದಿಗಳ ಸಂಘ, ಅಭಿಯೋಜನಾ ಇಲಾಖೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಪೊಲೀಸ್ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ, ದೇವದಾಸಿ ಪುನರ್ವಸತಿ ಯೋಜನೆ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಸಾಗಾಣಿಕೆ ಹಾಗೂ ವಾಣಿಜ್ಯಕ ಲೈಂಗಿಕ ಶೋಷಣೆ ಸಂತ್ರಸ್ಥರ ಯೋಜನೆ 2015 ಮತ್ತು ಸಮಾಜದ ಅಂಚಿನಲ್ಲಿರುವ ಲಿಂಗತ್ವ ಅಲ್ಪಸಂಖ್ಯಾತರು ಮತ್ತು ದೇವದಾಸಿ ಮಹಿಯರಿಗೆ ಕಾನೂನು ಅರಿವು ಮತ್ತು ನೆರವು  ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪ್ರತಿ ಮನುಷ್ಯ ಹುಟ್ಟಿನಿಂದ ಹಿಡಿದು ಸಾಯುವವರೆಗೂ ಅವನ ಜನನ ಮತ್ತು ಮರಣ ದಾಖಲಾತಿಗಳೊಂದಿಗೆ ಕಾನೂನು ಹುಟ್ಟುತ್ತದೆ. ಪ್ರತಿಯೊಬ್ಬ ನಾಗರಿಕನಿಗೂ ಕಾನೂನು ತಿಳುವಳಿಕೆ ಅವಶ್ಯಕ. ಈ ಉದ್ದೇಶದಿಂದಲೇ ಕಾನೂನು ಪ್ರಾಧಿಕಾರ ರಚನೆಯಾಗಿದೆ. ತಮ್ಮ ಸಮಸ್ಯೆಗಳನ್ನು ಅರ್ಜಿ ನೀಡುವುದರ ಮೂಲಕ ಇಲ್ಲಿ ಪರಿಹಾರ ಪಡೆಯಬಹುದು ಎಂದು ಅವರು ಹೇಳಿದರು.

ಮಕ್ಕಳಿಗೆ 14 ವರ್ಷದವರೆಗೆ ಕಡ್ಡಾಯ ಶಿಕ್ಷಣ ಒದಗಿಸಬೇಕು. ಶಿಕ್ಷಣವೂ ಮನುಷ್ಯನನ್ನು ಶ್ರೇಷ್ಠತೆಯೆಡೆಗೆ ಕೊಂಡೊಯ್ಯುತ್ತದೆ.ಬಾಲ ಕಾರ್ಮಿಕ ಕಾಯ್ದೆ ಪ್ರಕಾರ 14 ವರ್ಷದ ಮಕ್ಕಳಿಗೆ ಕೆಲಸ ನೀಡಿದರೆ, ಅಥವಾ ಮಕ್ಕಳು ಕೆಲಸ ಮಾಡಿದರೆ ಅದು ಅಪರಾಧವಾಗುತ್ತದೆ. ಬಾಲ್ಯವಿವಾಹ ಮಾಡಿದರೆ, ಅದರಲ್ಲಿ ಭಾಗಿಯಾದವರಿಗೂ ಶಿಕ್ಷೆಯಿದೆ. ಎಂದು ಅವರು ಹೇಳಿದರು.

ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಅವರು ಮಾತನಾಡಿ, ಸಮಾಜದಲ್ಲಿ ದೇವದಾಸಿ ಮಹಿಳೆಯರು, ಲೈಂಗಿಕ ಕಾರ್ಯಕರ್ತರು, ಲಿಂಗತ್ವ ಅಲ್ಪಸಂಖ್ಯಾತರು ಸಹ  ಘನತೆಯಿಂದ ಜೀವಿಸಬಹುದು. ಕಳ್ಳ ಸಾಗಾಣೆಯಿಂದ ಕಾಣೆಯಾದ ಮಕ್ಕಳನ್ನು ಲೈಂಗಿಕ ಕೆಲಸ ಹಾಗೂ ಭಿಕ್ಷಾಟನೆಗೆ, ಕಾರ್ಮಿಕ ಕೆಲಸಕ್ಕೆ ಬಳಸಿಕೊಳ್ಳುತ್ತಾರೆ. ಇಂತಹ ಪ್ರಕರಣಗಳು ದಾಖಲಾದ ತಕ್ಷಣವೇ ತನಿಖೆ ಆರಂಭಿಸಿ ಕ್ರಮಕೈಗೊಳ್ಳುತ್ತೇವೆ ಎಂದು ಹೇಳಿದರು.

ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಜಿಲ್ಲಾ ಸಮಾಲೊಚಕ ಮಾಂತೇಶ್.ಎಂ.ಬಾರ್ಕಿ  ಅವರು  ಮಾತನಾಡಿ, ಲೈಂಗಿಕ ಕಾರ್ಯಕರ್ತೆಯರಿಗೆ, ಲಿಂಗತ್ವ ಅಲ್ಪಸಂಖ್ಯಾತರಿಗೆ ಹಾಗೂ ಮಾಜಿ ದೇವದಾಸಿಯರಿಗೆ ಹಾಗೂ ವಿವಿಧ ಸಮುದಾಯದ ಸಾಮಾನ್ಯ ಮಹಿಳೆಯರಿಗೆ ಚೇತನ, ಧನಶ್ರೀ, ಉದ್ಯೋಗಿನಿ ಒಳಗೊಂಡಂತೆ ಸರ್ಕಾರದ ಯೋಜನೆಗಳ ಕುರಿತಂತೆ ವಿವರಿಸಿ ಬಡ್ಡಿ ರಹಿತ ಸಾಲ ಹಾಗೂ ಸಹಾಯಧನ ಯೋಜನೆಯಡಿ 50 ಸಾವಿರ ರೂ. ನೆರವು ಒದಗಿಸಲಾಗುವುದು. ಈ ಯೋಜನೆ ಬಳಸಿಕೊಂಡು ಸ್ವಂತ ಬದುಕು ರೂಪಿಸಿಕೊಳ್ಳಲು ಕರೆ ನೀಡಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ರಾಮಕೃಷ್ಣ ಪಡಗಣ್ಣವರ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಹಿಳಾ ಶಕ್ತಿ ಕೇಂದ್ರ ಯೋಜನೆಯ ಮಹಿಳಾ ಕಲ್ಯಾಣಾಧಿಕಾರಿ ಭಾಗ್ಯ ಗುಬ್ಬೇರ್ ಹಾಗೂ ಪೊಲೀಸ್ ದೂರು ಪ್ರಾಧಿಕಾರದ ರಚನೆ ಮತ್ತು ಮಹತ್ವದ ಕುರಿತು ಶಹರ ಪೊಲೀಸ್ ಠಾಣೆಯ ಎ.ಎಸ್.ಐ. ಪಿ.ಜಿ ನಂದಿ ಉಪನ್ಯಾಸ ನೀಡಿದರು.

ಕಾರ್ಯಕ್ರಮದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕೆ.ಶ್ರೀವಿದ್ಯಾ, ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಭಿವೃದ್ಧಿ ನಿರೀಕ್ಷಕಿ ಮಂಜುಳಾ ಮರ್ದಿ, ಯೋಜನಾ ಅನುಷ್ಠಾನಾಧಿಕಾರಿ ಮಂಜುನಾಥ ಪವಾಡಿ, ಮತ್ತಿತರರು ಇದ್ದರು.