ಧರಣಿ ನಿರತ ರೈತರೊಂದಿಗೆ ದೂರವಾಣಿ ಮೂಲಕ ಮುಖ್ಯಮಂತ್ರಿಗಳ ಮಾತುಕತೆ ರೈತರ ಉಪವಾಸ ಸತ್ಯಾಗ್ರಹ ಅಂತ್ಯ

Share

ಹಾವೇರಿ: ಉಡಗಣಿ, ತಾಳಗುಂದ ಕೆರೆ ತುಂಬಿಸುವ ಯೋಜನೆಯ ಪೈಪ್‍ಲೈನ್ ಅಳವಡಿಸಲು ರೈತರ ಜಮೀನ ಸ್ವಾಧೀನ ವಿರೋಧಿಸಿ ಹಾಗೂ ತುಂಗಾ ಮೇಲ್ದಂಡೆ ಯೋಜನೆಯಡಿ ಭೂಮಿ ಕಳೆದುಕೊಂಡ ರೈತರ ಪರಿಹಾರ ಬಾಕಿ ಪಾವತಿಬೇಡಿಕೆ ಮುಂದುರಿಸಿ ಕಳೆದ ಹದಿನಾಲ್ಕು ದಿನಗಳಿಂದ ರಟ್ಟಿಹಳ್ಳಿಯಲ್ಲಿ ರೈತರು ಕೈಗೊಂಡಿದ್ದ ಸತ್ಯಾಗ್ರಹ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ಪ್ರಯತ್ನ ಹಾಗೂ ಮುಖ್ಯಮಂತ್ರಿಗಳು ದೂರವಾಣಿ ಮೂಲಕ ರೈತರೊಂದಿಗೆ ಮಾತನಾಡಿ ಬೇಡಿಕೆ ಈಡೇರಿಸುವ ಭರವಸೆ ಹಿನ್ನಲೆಯಲ್ಲಿ ಉಪಾವಾಸ ಅಂತ್ಯಗೊಂಡಿತು.

ಬುಧವಾರ ಗೃಹ ಸಚಿವ ಧರಣಿ ನೇತೃತ್ವ ವಹಿಸಿದ ಹಿರಿಯ ವಕೀಲರಾದ ಬಿ.ಡಿ.ಹಿರೇಮಠ ಹಾಗೂ ರೈತರೊಂದಿಗೆ ಮಾತನಾಡಿ, ತಮ್ಮ ಬೇಡಿಕೆಗಳನ್ನು ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಬೇಡಿಕೆ ಈಡೇರಿಸಲಾಗುವುದು. ಉಪವಾಸ ಸತ್ಯಾಗ್ರಹವನ್ನು ಕೈಬಿಡುವಂತೆ ಮನವಿ ಮಾಡಿಕೊಂಡರು. ಮುಂದುವರೆದು ದೂರವಾಣಿ ಮೂಲಕ ಮುಖ್ಯಮಂತ್ರಿಗಳು ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿದರು. ಉಪವಾಸ ಕೈಗೊಂಡಿದ್ದ ಹಿರಿಯ ವಕೀಲ ಹಿರೇಮಠರೊಂದಿಗೆ ಮುಖ್ಯಮಂತ್ರಿಗಳಿಗೆ ಸಂಪರ್ಕ ಕಲ್ಪಿಸಿ ಮಾತನಾಡಿಸಿರು.

ನೀರಾವರಿ ಸಚಿವರು, ಹಿರಿಯ ಅಧಿಕಾರಿಗಳೊಂದಿಗೆ ಶೀಘ್ರದಲ್ಲೇ ಸಭೆ ನಡೆಸಿ ಚರ್ಚಿಸಲಾಗುದು. ಈ ಸಭೆಗೆ ತಮ್ಮನ್ನೂ ರೈತರನ್ನು ಆಹ್ವಾನಿಸಲಾಗುವುದು ಉಪವಾಸ ಕೈಬಿಡುವಂತೆ ಮನವಿ ಮಾಡಿಕೊಂಡರು.

ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹಾಗೂ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರ ಭರವಸೆ ಹಿನ್ನಲೆಯಲ್ಲಿ ಉಪವಾಸ ಕೈಬಿಡಲಾಗುವದು. ಈ ತಿಂಗಳಾಂತ್ಯದೊಳಗೆ ರೈತರ ಸಮಸ್ಯೆ ಪರಿಹರಿಸಲು ವಕೀಲರಾದ ಹಿರೇಮಠ ತಿಳಿಸಿದರು.

ಗೃಹ ಸಚಿವ ಬಸವರಾಜ ಬೊಮ್ಮಾಯಿ ಮಾತನಾಡಿ, ದಿಟ್ಟ ಹೋರಾಟಗಾರ ಹಿರಿಯ ವಕೀಲ ಬಿ.ಡಿ.ಹಿರೇಮಠ ಅವರು ನನಗೆ 40 ವರ್ಷದಿಂದ ಸ್ನೇಹಿತರು. ಅವರ ಹೋರಾಟದಲ್ಲಿ ನಾನು ಭಾಗಿಯಾಗಿದ್ದೇನೆ. ಹಲವು ಹೋರಾಟ ನಡೆಸಿ ಯಶಸ್ಸು ತಂದಕೊಟ್ಟ ಕೀರ್ತಿ ಅವರದ್ದಾಗಿದೆ. ಅವರು ಕಾನೂನು ತಿಳಿದವರಾಗಿದ್ದು, ನಾವು ನೀವು ಕೂಡಿ ಸಮಸ್ಯೆ ಬಗೆ ಹರಿಸೋಣ ಎಂದು ಮನವಿ ಮಾಡಿಕೊಳ್ಳಲಾಗಿದೆ. ಅವರ ಪ್ರಮುಖ ಬೇಡಿಕೆಗಳಾದ ತುಂಗಾ ಮೇಲ್ದಂಡೆ ಯೋಜನೆಯಡಿ ರೈತರಿಗೆ ಬಾಕಿ ಇರುವ ಪರಿಹಾರ ಪಾವತಿ ಹಾಗೂ ಉಡಗಣಿ- ತಾಳಗುಂದ ಕೆರೆ ತುಂಬುವ ಯೋಜನೆಯ ಪೈಪ್ ಅಳವಡಿಕೆ ಪರ್ಯಾಯ ಮಾರ್ಗದಲ್ಲಿ ಅಳವಡಿಸಲು ಸಲಹೆ ನೀಡಿದ್ದಾರೆ. ಬೇಡಿಕೆಗಳನ್ನು ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗುವುದು. ಬೆಂಗಳೂರಿನಲ್ಲಿ ಅಧಿಕಾರಿಗಳ ಸಭೆ ನಡೆಸಿ ಈ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲಾಗುವುದು ಎಂದು ತಿಳಿಸಿದರು.

ಉಡತಣಿ-ತಾಳಗುಂದ ಯೋಜನೆಗೆ ರೈತರ ಜಮೀನಿನಲ್ಲಿ ಪೈಪ್ ಅಳವಡಿಸುವ ಬದಲು ಸರ್ಕಾರಿ ಜಮೀನನಲ್ಲಿ ಪೈಪ್‍ಲೈನ್ ಅಳವಡಿಸಿ ನೀರು ತೆಗೆದುಕೊಂಡು ಹೋಗಲು ರೈತರ ಯಾವುದೇ ತಕರಾರು ಇರುವುದಿಲ್ಲ ಹಾಗೂ ತುಂಗಾ ಮೇಲ್ದಂಡೆ ಯೋಜನೆಯಲ್ಲಿ ಭೂಮಿ ಕಳೆದುಕೊಂಡ ತಾಲೂಕಿನ ರೈತರಿಗೆ ಬಾಕಿ ಇರುವ ₹ 154 ಕೋಟಿ ಹಣವನ್ನು ಶೀಘ್ರವೇ ಪಾವತಿಮಾಡಬೇಕು ಎಂಬ ಎರಡು ಬೇಡಿಕೆಗಳನ್ನು ಇಟ್ಟಿದ್ದಾರೆ. ಕೆರೆ ತುಂಬಿಸುವ ಯೋಜನೆಗೆ ಈಗಿರುವ ಮಾರ್ಗಬದಲಿಸಿ ಪರ್ಯಾಯ ಮಾರ್ಗದಲ್ಲಿ ಪೈಪ್ ಅಳವಡಿಸುವ ಕುರಿತಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ತಾಂತ್ರಿಕ ವಿಷಯವಾಗಿರುವುದರಿಂದ ಎರಡುಮೂರು ದಿನದಲ್ಲಿ ಅಧ್ಯಯನಮಾಡಿ ವರದಿ ನೀಡುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಪರ್ಯಾಯ ಮಾರ್ಗದಲ್ಲಿ ಸಾಧ್ಯವಾದರೆ ಪೈಪ್ ಅಳವಡಿಸಲಾಗುವುದು ಎಂದು ಹೇಳಿದರು.

ಕೆರೆ ತುಂಬಿಸುವ ಯೋಜನೆಗೆ 10 ಮೀಟರ್ ಭೂ ಸ್ವಾಧೀನಪಡಿಸಿಕೊಂಡು ಪೈಪ್ ಅಳವಡಿಕೆ ರಸ್ತೆ ನಿರ್ಮಾಣ ಮಾಡುವ ಗೊಂದಲವಿತ್ತು. ಈಗ ಈ ಯೋಜನೆಯ ಸ್ವರೂಪವನ್ನು ಬದಲಾಯಿಸಿ ಕೇವಲ ನಾಲ್ಕು ಮೀಟರ್ ಮಾತ್ರ ತೆಗೆದುಕೊಳ್ಳಲಾಗುವುದು. ರಸ್ತೆ ನಿರ್ಮಿಸುವುದಿಲ್ಲ. ಆದ್ಯಾಗ್ಯೂ ರೈತರ ಬೇಡಿಕೆಯಂತೆ ಪರ್ಯಾಯ ಮಾರ್ಗದಲ್ಲಿ ಪೈಪ್ ಅಳವಡಿಸುವ ಕುರಿತಂತೆ ತಾಂತ್ರಿಕ ಪರಿಶೀಲನೆಗೆ ಸೂಚಿಸಲಾಗಿದೆ. ಮೂರ್ನಾಲ್ಕು ದಿನಗಳಲ್ಲಿ ಈ ಕುರಿತಂತೆ ವರದಿ ಬರಲಿದೆ ಎಂದು ತಿಳಿಸಿದರು.

ತುಂಗಾ ಮೇಲ್ದಂಡೆ ಯೋಜನೆಯಡಿ ಅಲ್ಪ ಪರಿಹಾರ ಪಡೆದ ರೈತರು 28ಎ ದಲ್ಲಿ ಹೆಚ್ಚುವರಿ ಪರಿಹಾರ ಪಾವತಿಗೆ ಬಾಕಿ ಇರುವ ರೈತರಿಗೆ ಹಣ ಪಾವತಿಗೆ ಬೇಡಿಕೆ ಸಲ್ಲಿಸಲಾಗಿದೆ. ಭೂಸ್ವಾಧೀನ ಪರಿಹಾರ ಬಹಳ ದಿನಗಳಿಂದ ಇದೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲಾಗುವುದು. ರೆಗ್ಯೂಲರ್ ಭೂಸ್ವಾಧೀನ ಹಾಗೂ ವಿಷಯನ್ನು ಕಾನೂನಾತ್ಮಕವಾಗಿ ಪರಿಶೀಲಿಸಿ ಕ್ರಮ ಕೈಗೊಳ್ಳಬೇಕಾಗುತ್ತದೆ. ಹಿರಿಯ ಅಧಿಕಾರಿಗಳೊಂದಿಗೆ ಡಿ.21 ರಂದು ಸಭೆ ನಡೆಸಿ ಚರ್ಚಿಸಲಾಗುವುದು. ಮುಖ್ಯಮಂತ್ರಿಗಳೊಂದಿಗೆ ಚಿರ್ಚಿಸಿ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲಾಗುವುದು ಎಂದರು.

ಸರ್ಕಾರ ಸಕಾರಾತ್ಮಕ ಚಿಂತನೆ ಮಾಡುತ್ತದೆ. ರೈತರ ಪರವಾಗಿ ಮುಖ್ಯಮಂತ್ರಿಗಳು ಇದ್ದಾರೆ. ಈ ಕುರಿತಂತೆ ಹೋರಾಟಗಾರರಾದ ಬಿ.ಡಿ.ಹಿರೇಮಠ ಜೊತೆಗೆ ಮುಖ್ಯಮಂತ್ರಿಗಳನ್ನು ಮಾತನಾಡಿಸುತ್ತೇನೆ. ಪ್ರಾಮಾಣಿಕವಾಗಿ ಸಮಸ್ಯೆ ಇತ್ಯರ್ಥಪಡಿಸಲಾಗುವುದು ಎಂದು ತಿಳಿಸಿದರು.