‘ಚಿತ್ರ ಸಂಗಮ’ ಆನ್ಲೈನ್ ವಿನೂತನ ಪ್ರಯತ್ನ: ಎಂ. ಮಹೇಶ್ವರ್ ರಾವ್

Share

ಬೆಂಗಳೂರು: ಕನ್ನಡ ಚಿತ್ರಗಳನ್ನು ಕರ್ನಾಟಕ ಚಲನಚಿತ್ರ ಅಕಾಡೆಮಿ ತನ್ನ ಅಧಿಕೃತ ಜಾಲತಾಣದಲ್ಲಿ ಪ್ರೇಕ್ಷಕರ ವೀಕ್ಷಣೆಗೆ ಅನುಕೂಲವಾಗವಂತೆ ಚಿತ್ರ ಸಂಗಮ ಮೂಲಕ ನೀಡುತ್ತಿದ್ದು ವಾರ್ತಾ ಮತ್ತು ಸಾರ್ವಜಕನಿಕ ಸಂಪರ್ಕ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಂ.ಮಹೇಶ್ವರ ರಾವ್ ಅವರು ಇಂದು ಚಿತ್ರ ಸಂಗಮ ಆನ್ಲೈನ್ಚ ಚಲನಚಿತ್ರೋತ್ಸವವನ್ನು ಜೂಮ್ ಸಮ್ಮೇಳನ ಮುಖಾಂತರ ಉದ್ಘಾಟಿಸಿದರು.

ಚಿತ್ರ ಸಂಗಮ ಉದ್ಘಾಟಸಿ ಮಾತನಾಡಿದ ಅವರು, ಕನ್ನಡ ಚಿತ್ರಗಳನ್ನು ಜಾಗತಿಕ ಮಟ್ಟದಲ್ಲಿ ಪರಿಚಯಿಸುವ ಹಾಗೂ ಈ ಮೂಲಕ ಕನ್ನಡದ ಚಿತ್ರ ಸಂಸ್ಕೃತಿಯನ್ನು ಜಗತ್ತಿನಾದ್ಯಂತ ಪಸರಿಸುವ ಕರ್ನಾಟಕ ಚಲನಚಿತ್ರ ಅಕಾಡೆಮಿಯ ವಿನೂತನ ಪ್ರಯತ್ನ ಶ್ಲಾಘನೀಯ ಎಂದರು.

ಕನ್ನಡ ಚಿತ್ರರಂಗದ ಈವರೆಗಿನ ಸಾಧನೆ ಅಪಾರ. ಕನ್ನಡ ಚಿತ್ರೋದ್ಯಮದಿಂದ ಜಗತ್ತಿನ ಶ್ರೇಷ್ಠ ಚಿತ್ರಗಳು ನಿರ್ಮಾಣವಾಗಿವೆ. ಬೇರೆ ಬೇರೆ ಕಾರಣಗಳಿಂದ ಅವುಗಳಲ್ಲಿ ಕೆಲವು ಶ್ರೇಷ್ಠ ಚಿತ್ರಗಳಿಗೆ ಮನ್ನಣೆ ಸಿಗದಿರಬಹುದು. ಆದರೆ ಅಕಾಡೆಮಿ ಈ ವಿನೂತನ ಪ್ರಯತ್ನ ಚಿತ್ರರಂಗವನ್ನು ಹೊಸ ದಿಕ್ಕಿಗೆ ಕೊಂಡೊಯ್ಯುವ ಎಲ್ಲ ಸಾಧ್ಯತೆಗಳು ಇವೆ. ಅಕಾಡೆಮಿಯ ಈ ಎಲ್ಲ ಪ್ರಯತ್ನಕ್ಕೆ ಸರ್ಕಾರ ಪೂರಕವಾಗಿ ಸ್ಪಂದಿಸುತ್ತದೆ. ಈ ಮೂಲಕ ಚಿತ್ರೋದ್ಯಮವನ್ನು ಪ್ರೋತ್ಸಾಹಿಸುತ್ತಿದೆ ಎಂದು ಅವರು ಹೇಳಿದರು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯಕ್ತ ಡಾ.ಪಿ.ಎಸ್.ಹರ್ಷ ಮಾತನಾಡಿ, ಕರ್ನಾಟಕ ಚಲನಚಿತ್ರ ಅಕಾಡೆಮಿಯ ಈ ವಿನೂತನ ಪ್ರಯತ್ನ ಮಹತ್ವದ ಮೈಲಿಗಲ್ಲು. ಅಕಾಡೆಮಿ ಆಶಯವೇ ಚಿತ್ರ ಪ್ರೇಕ್ಷಕರಿಗೆ ಗುಣಾತ್ಮಕ ಚಿತ್ರಗಳನ್ನು ವೀಕ್ಷಿಸಲು ವೇದಿಕೆಯನ್ನು ಸೃಷ್ಟಿಸುವುದು. ಈ ಪ್ರಯತ್ನದಲ್ಲಿ ಅಕಾಡೆಮಿಯು ಕ್ರಿಯಾಶೀಲವಾಗಿ ಮುಂದಡಿ ಇಟ್ಟಿದೆ. ಇದನ್ನು ಈಗಾಗಲೇ ಪ್ರತಿ ವರ್ಷ ಆಚರಿಸುವ ಈವರೆಗಿನ 12 ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ತೋರಿಸಿದೆ ಎಂದರು.

ಇತ್ತೀಚಿನ ಕೊರೊನಾ ಅವಘಡದ ಸಂದರ್ಭದಲ್ಲಿ ಆನ್ಲೈನ್ ಉತ್ಸವಗಳು ಪ್ರಚಲಿತವಾಗಿದ್ದು ಅನಿವಾರ್ಯವಾಯೂ ಆಗಿವೆ. ಇಂತಹ ಕ್ರಿಯಾಶೀಲ ಪ್ರಯತ್ನವನ್ನು ಇಲಾಖೆ ಸಂಪೂರ್ಣವಾಗಿ ಬೆಂಬಲಿಸುತ್ತದೆ. ಇದು ಸಾಮಾಜಿಕ ಜಾಲತಾಣಗಳ ವಿವಿಧ ವೇದಿಕೆಗಳ ಮೂಲಕ ಜಗತ್ತಿನ ಎಲ್ಲ ಮೂಲೆಗಳಿಗೆ ತಲುಪಿಸುವ ಪ್ರಯತ್ನ ಅಕಾಡೆಮಿಯಿಂದ ಆಗಬೇಕು ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನೀಲ್ ಪುರಾಣಿಕ್ ಅವರು, ಕನ್ನಡದ ಅತ್ಯಂತ ಶ್ರೇಷ್ಠ ಚಿತ್ರಗಳನ್ನ ಜನರ ಬಳಿಗೆ ಕೊಂಡೊಯ್ಯುವ ಪ್ರಯತ್ನವೇ ಚಿತ್ರ ಸಂಗಮ. ಪ್ರತಿ ವಾರ ಮೂರು ಚಿತ್ರಗಳನ್ನು ನಮ್ಮ ಜಾಲತಾಣದಲ್ಲಿ ಜೋಡಿಸಿದ್ದು ನವೆಂಬರ್ ತಿಂಗಳ ನಾಲ್ಕು ವಾರವೂ ವಿವಿಧ ಚಿತ್ರಗಳನ್ನು ಚಿತ್ರ ಪ್ರೇಮಿಗಳಿಗೆ ವೀಕ್ಷಿಸುವ ಅವಕಾಶ ಕಲ್ಪಿಸಲಾಗಿದೆ. ಅಕಾಡೆಮಿಯಿಂದ ಆನ್ಲೈನ್ ಚಿತ್ರೋತ್ಸವದ ಮೊದಲ ಪ್ರಯತ್ನ ಇದಾಗಿದ್ದು ಮುಂದಿನ ದಿನಗಳಲ್ಲಿ ಪ್ರಾದೇಶಿಕ ಭಾಷಾ ಚಿತ್ರಗಳು, ಕಿರು ಚಿತ್ರಗಳು ಹೀಗೆ ಜಗತ್ತಿನ ಶ್ರೇಷ್ಠ ಕನ್ನಡ ಚಿತ್ರಗಳನ್ನು ಕೊಡಲಾಗುವುದು ಎಂದು ತಿಳಿಸಿದರು.

ಮೊದಲ ವಾರ ಕನ್ನಡದ ಶ್ರೇಷ್ಠ ಚಿತ್ರಗಳಾದ ಹಾಗೂ ಕನ್ನಡದ ನಾಡು ನುಡಿ, ಭಾಷೆಗೆ ಒತ್ತು ನೀಡಿ ನಿರ್ಮಿಸಿರುವ ಇಮ್ಮಡಿ ಪುಲಿಕೇಶಿ, ಕಥಾ ಸಂಗಮ, ಒಂದಾನೊಂದು ಕಾಲದಲ್ಲಿ ಚಿತ್ರಗಳು ವೀಕ್ಷಣೆಗೆ ಲಭ್ಯವಿದ್ದು, ಕರ್ನಾಟಕ ಚಲನಚಿತ್ರ ಅಕಾಡೆಮಿ ಜಾಲತಾಣ ( https://kcainfo.in ) ಇಲ್ಲಿ “ಚಿತ್ರ ಸಂಗಮ” ವಿಭಾಗವನ್ನು ಕ್ಲಿಕ್ಕಿಸಿ ನೋಂದಣಿ ಮಾಡುವ ಮೂಲಕ ಚಿತ್ರಗಳನ್ನು ಸಾರ್ವಜನಿಕರು ವೀಕ್ಷಿಸಬಹುದಾಗಿದೆ.

ಹಿಮಂತರಾಜು ಜಿ. ಶ್ರೀರಾಜ್ ಗುಡಿ, ಅಕಾಡೆಮಿಯ ಎಲ್ಲ ಸದಸ್ಯರು ಜೂಮ್ ಸಮ್ಮೇಳನದಲ್ಲಿ ಭಾಗವಹಿಸಿದ್ದರು.