ಎಸ್ಸೆಸ್ಸೆಲ್ಸಿ ಪರೀಕ್ಷೆ ವೇಳೆ ನಕಲು ಮಾಡಿಸಲು ಯತ್ನ: ಐವರ ವಿರುದ್ಧ ಪ್ರಕರಣ ದಾಖಲು

Share

ಹಾವೇರಿ: ಜಿಲ್ಲೆಯ ಹಿರೇಕೆರೂರು ಪಟ್ಟಣದ ಸಂಗಮೇಶ್ವರ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರಕ್ಕೆ ಗುರುವಾರ ಅಕ್ರಮವಾಗಿ ಪ್ರವೇಶ ಮಾಡಿ, ನಕಲು ಮಾಡಿಸಲು ಪ್ರಯತ್ನ ಮಾಡಿದ ಆರೋಪದ ಮೇಲೆ ನಾಲ್ವರು ಶಿಕ್ಷಕರು ಹಾಗು ಓರ್ವ ಮೇಲ್ವಿಚಾರಕನ ವಿರುದ್ಧ ಪ್ರಕರಣ ದಾಖಲಾಗಿದೆ.

ಶಿಕ್ಷಕರಾದ ಜಗದೀಶ ಶಿವಪ್ಪನವರ, ಮನೋಹರ ಬಿ.ಆರ್., ಗುತ್ತೆಪ್ಪ ಬಾಳಂಬೀಡ ಹಾಗೂ ಶಿವಯೋಗಿ ರಾಗಿ ಬಂಧನಕ್ಕೆ ಒಳಗಾದವರು.

ನಾಲ್ವರು ಶಿಕ್ಷಕರು ಪರೀಕ್ಷಾ ಕೇಂದ್ರದಲ್ಲಿ ಕರ್ತವ್ಯದ ಮೇಲೆ ಇದ್ದವರಲ್ಲ. ಈ ವೇಳೆ ದಿಢೀರ್‌ ಭೇಟಿ ನೀಡಿದ ಹಿರೇಕೆರೂರ ತಹಶಿಲ್ದಾರ ಆರ್. ಎಚ್. ಭಾಗವಾನ್ ಅವರನ್ನು ಕಂಡು ಈ ಶಿಕ್ಷಕರು ಓಡಿ ಹೋಗಲು ಯತ್ನಿಸಿದ್ದಾರೆ. ತಕ್ಷಣ ಅವರನ್ನು ತಡೆದು ವಿಚಾರಣೆ ನಡೆಸಿದಾಗ, ಅವರ ಬಳಿ ದ್ವಿತೀಯ ಭಾಷಾ ಪತ್ರಿಕೆಗೆ ಸಂಬಂಧಿಸಿದ ನಕಲು ಚೀಟಿಗಳು ಇದ್ದವು. ಹಾಗಾಗಿ ಅವರನ್ನು ಪೊಲೀಸರ ವಶಕ್ಕೆ ಒಪ್ಪಿಸಿ, ಪ್ರಕರಣ ದಾಖಲಿಸುವಂತೆ ತಹಶೀಲ್ದಾರ್‌ ಅವರು ಸೂಚಿಸಿದ್ದಾರೆ.

ನಕಲು ಮಾಡಲು ಸಹಕರಿಸಿದ ಆರೋಪದ ಮೇಲೆ ಪರೀಕ್ಷಾ ಕೇಂದ್ರದ ಮೇಲ್ವಿಚಾರಕ ನಾಗರಾಜ ಸುಂಕಾಪುರ ಅವರ ವಿರುದ್ಧವೂ ಪ್ರಕರಣ ದಾಖಲಾಗಿದೆ.