ವರ್ಷಾಂತ್ಯದಲ್ಲಿ ಶಿಗ್ಗಾಂವ, ಸವಣೂರು ಏತ ನೀರವಾರಿ ಯೋಜನೆ ಪೂರ್ಣಗೊಳಿಸಲು ಸೂಚನೆ: ಗೃಹ ಸಚಿವ ಬಸವರಾಜ ಬೊಮ್ಮಾಯಿ

Share

ಹಾವೇರಿ: ಜಿಲ್ಲೆಯ ಶಿಗ್ಗಾಂವ ಹಾಗೂ ಸವಣೂರ ಏತ ನೀರಾವರಿ ಯೋಜನೆಗಳ ಬಾಕಿ ಕಾಮಗಾರಿಗಳನ್ನು ಈ ವರ್ಷಾಂತ್ಯದೊಳಗೆ ಪೂರ್ಣಗೊಳಿಸಲು ಕರ್ನಾಟಕ ನೀರವಾರಿ ನಿಗಮದ ಅಭಿಯಂತರುಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಅವರು ಸೂಚಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶನಿವಾರ ಶಿಗ್ಗಾಂವ-ಸವಣೂರ ಏತ ನೀರವಾರಿ ಯೋಜನೆಯ ಬಾಕಿ ಉಳಿದ ಕಾಮಗಾರಿಗಳು, ಪೈಪ್‍ಲೈನ್ ಅಳವಡಿಕೆ, ಭೂಸ್ವಾಧೀನ ಕಾರ್ಯ, ಪರಿಹಾರ ವಿತರಣೆ ಕುರಿತಂತೆ ಅಭಿಯಂತರರುಗಳೊಂದಿಗೆ ಸಭೆ ನಡೆಸಿ ಈ ವರ್ಷದ ನವಂಬರ ಒಳಗೆ ಕಾಮಗಾರಿ ಮುಗಿಸಿ ನೀರು ತುಂಬಿಸುವ ಟ್ರಯಲ್ ಆರಂಭಿಸಬೇಕು. ಇದರಿಂದ ಮುಂದಿನ ವರ್ಷದಲ್ಲಿ ಪೂರ್ಣ ಪ್ರಮಾಣದಲ್ಲಿ ಕೆರೆ ತುಂಬಲು ಅನುಕೂಲವಾಗಲಿದೆ ಎಂದು ತಿಳಿಸಿದರು.

ಹತ್ತಿಮತ್ತೂರ ಸೇರಿದಂತೆ, ಕಡಕೋಳ, ಕಡಿವಾಳ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಅಳವಡಿಸಿರುವ ಪೈಪ್‍ಗಳನ್ನು ಬದಲಾಯಿಸಿ ಹೆಚ್ಚುವರಿ ಪ್ರಮಾಣದ ಪೈಪ್‍ಗಳನ್ನು ಅಳವಡಿಸಬೇಕು. ಈ ಪೈಪ್ ಅಳವಡಿಕೆ ಕುರಿತಂತೆ ಅಂದಾಜು ಪತ್ರಿಕೆಯನ್ನು ತ್ವರಿತವಾಗಿ ಅನುಮೋದನೆಗೆ ಕಳುಹಿಸಿಕೊಡಬೇಕು. ಈಗ ಅಳವಡಿಸಿರುವ ಪೈಪ್‍ಗಳನ್ನು ಸಣ್ಣ ಕೆರೆಗಳಿಗೆ ನೀರು ತುಂಬಿಸಲು ಅಳವಡಿಸುವಂತೆ ಸೂಚನೆ ನೀಡಿದರು.

ಬಾಕಿ ಉಳಿದಿರುವ ಹೆಡ್‍ವರ್ಕ್ ಕಾಮಗಾರಿಗಳು, ಜಾಕ್‍ವೆಲ್ ಪಂಪ್‍ಗೌಸ್ ಕಾಮಗಾರಿಗಳು, ಇಂಟಲ್ ಕೆನಾಲ್ ಸಬ್‍ಸ್ಟೇಷನ್, ರೇಜಿಂಗ್ ಮೇನ್, ಗ್ರಾವಿಟಿ ಮೇನ್ ಹಾಗೂ ಚೇಂಬರ್ಸ್ ನಿರ್ಮಾಣ, ಪೈಪ್ ಲೈನ್ ಅಳವಡಿಕೆ ಪ್ರಗತಿ ಹಾಗೂ ಭೂಸ್ವಾಧೀನ ಪ್ರಕ್ರಿಯೆ, ಪರಿಹಾರ ನೀಡಿಕೆ ಕುರಿತಂತೆ ಅಧಿಕಾರಿಗಳಿಂದ ಮಾಹಿತಿ ಪಡೆದ ಸಚಿವರು ತ್ವರಿತವಾಗಿ ಎಲ್ಲ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲು ಸೂಚನೆ ನೀಡಿದರು.