ಕುಡುಕರ ತಾಣವಾದ ಹೊಸರಿತ್ತಿ ಬಸ್ ನಿಲ್ದಾಣ!
ಹಾವೇರಿ: ಸದಾ ಜನಜಂಗುಳಿಯಿಂದ ಕೂಡಿರಬೇಕಾದ ತಾಲೂಕಿನ ಹೊಸರಿತ್ತಿ ಗ್ರಾಮದ ಬಸ್ ನಿಲ್ದಾಣ ಹಾಗೂ ಆವರಣ ಅಕ್ಷರಶಃ ಕುಡುಕರ ತಾಣವಾಗಿ ಮಾರ್ಪಟ್ಟಿದೆ. ಇದು ಕೇವಲ ಹೆಸರಿಗಷ್ಟೇ ಬಸ್ ನಿಲ್ದಾಣ ಎಂಬತಾಗಿದೆ.
ದಶಕದ ಹಿಂದೆ ಲಕ್ಷಾಂತರ ರೂ. ವೆಚ್ಚದಲ್ಲಿನಿರ್ಮಿಸಿದ ಬಸ್ ನಿಲ್ದಾಣ ಅವ್ಯವಸ್ಥೆಯ ಕಥೆ ಇದು. ನಿಲ್ದಾಣದಲ್ಲಿ ಕುಡುಕರು ಮದ್ಯ ಕುಡಿದು ಬಿಸಾಕಿರುವ ಬಾಟಲಿ ಹಾಗೂ ಪ್ಯಾಕಿಟ್ ಗಳು ಪ್ರಯಾಣಿಕರನ್ನು ಅಸಹ್ಯ ಪಡುವಂತೆ ಮಾಡುತ್ತಿವೆ. ಮಹಿಳೆಯರಂತೂ ಇತ್ತ ಸುಳಿಯುವಂತಿಲ್ಲ. ಬಸ್ ನಿಲ್ದಾಣದ ಬಳಿಯ ದೇವಸ್ಥಾನದ ಕಟ್ಟೆ ಮೇಲೆ ಕುಳಿತು ಬಸ್ ಹಿಡಿಯಬೇಕಾದ ಸ್ಥಿತಿ ಇದ್ದರೂ ಅಧಿಕಾರಿಗಳು ಇತ್ತ ಗಮನಿಸಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಗ್ರಾಮದಲ್ಲಿ ಕೊರೊನಾ ಆಂತಕ ಒಂದಡೆಯಾದರೆ ಸಾರಾಯಿ ಮಾರಾಟ ಅವ್ಯಾಹತವಾಗಿ ನಡೆಯುತ್ತಿದೆ ಎಂಬುದಕ್ಕೆ ಬಸ್ ನಿಲ್ದಾಣದಲ್ಲಿರುವ ಖಾಲಿ ಸಾರಾಯಿ ಪೌಚ್ ಹಾಗೂ ಉಪಯೋಗಿಸಿ ಎಸೆದ ಗ್ಲಾಸ್, ನೀರಿನ ಪೌಚ್ಗಳೇ ಸಾಕ್ಷಿ. ಇದಕ್ಕೆ ಕಡಿವಾಣ ಹಾಕಬೇಕಾದ ಸ್ಥಳೀಯ ಆಡಳಿತ ಮತ್ತು ಸಾರಿಗೆ ಇಲಾಖೆ ಸಂಪೂರ್ಣ ನಿರ್ಲಕ್ಷ್ಯ ತೊರುತ್ತಿದ್ದಾರೆ ಎಂಬುವುದು ಜನರ ಆರೋಪ.
ನೆಗಳೂರ, ಕೊಡಬಾಳ, ಅಕ್ಕೂರ ಹಂದಿಗನೂರ, ಸವಣೂರ, ಲಕ್ಷ್ಮೇಶ್ವರ ಮಾರ್ಗಗಳಿಗೆ ಹೊಗುವ ಪ್ರಯಾಣಿಕರು ಹೊಸರಿತ್ತಿ ಬಸ್ ನಿಲ್ದಾಣದಿಂದ ಬೇರೆಡೆಗೆ ತೆರಳಬೇಕು. ಆದರೆ ಬಸ್ ನಿಲ್ದಾಣದ ಅವ್ಯವಸ್ಥೆ ನೋಡಿ ಪ್ರಯಾಣಿಕರು ಹಿಡಿಶಾಪ ಹಾಕುವಂತಾಗಿದೆ.
ಈಗಲಾದರೂ ಸಾರಿಗೆ ಇಲಾಖೆ ಬಸ್ ನಿಲ್ದಾಣದ ಅವ್ಯವಸ್ಥೆ ಯನ್ನು ಸರಿಪಡಿಸು ವಂತಾಗಲಿ. ಸ್ಥಳೀಯ ಆಡಳಿತ ಬಸ್ ನಿಲ್ದಾಣದಲ್ಲಿ ಮದ್ಯ ಸೇವನೆ ವಿರುದ್ಧ ಕ್ರಮ ತೆಗೆದುಕೊಂಡು ದಂಡ ವಿಧಿಸುವಂತಾಗಲಿ ಎಂಬುಹುದು ನಮ್ಮ ಆಶಯ.
ನಮ್ಮ ಗ್ರಾಮದಿಂದ ಜಿಲ್ಲಾ ಕೇಂದ್ರಕ್ಕೆ ತೆರಳಲು ನಾವು ಹೊಸರಿತ್ತಿ ಮಾರ್ಗದ ಮೂಲಕವೇ ಸಂಚರಿಸಬೇಕಾಗಿದೆ. ಆದರೆ ಇಲ್ಲಿಯ ಬಸ್ ನಿಲ್ದಾಣದಲ್ಲಿ ಕುಳಿತು ಕೊಳ್ಳಲು ಸರಿಯಾದ ಆಸನ ವ್ಯವಸ್ಥೆಯಿಲ್ಲ ಶೌಚಾಲಯ ಅವ್ಯವಸ್ಥೆ ಯಾಗಿದೆ. ಶೀಘ್ರವಾಗಿ ಸಂಬಂಧಪಟ್ಟ ಅಧಿಕಾರಿಗಳು ಬಸ್ ನಿಲ್ದಾಣದ ಅವ್ಯವಸ್ಥೆ ಕಡೆಗೆ ಗಮನ ಹರಿಸಿ ತಪ್ಪಿತಸ್ಥರ ವಿರುದ್ದ ಕಾನೂನು ಕ್ರಮ ಜರುಗಿಸಲಿ. – ಲೋಕೇಶ ಕುಬಸದ ಕೋಡಬಾಳ ಗ್ರಾಮಸ್ಥ.
ವಿಶೇಷ ವರದಿ: ಗುರುಶಾಂತಸ್ವಾಮಿ ಹಿರೇಮಠ