ಹೆಚ್ಚಿದ ಅಂತರ್ಜಲ; ಬೋರ್ವೆಲ್ನಲ್ಲಿ ಉಕ್ಕಿದ ನೀರು
ಹಾವೇರಿ: ಕಳೆದೊಂದು ವಾರದಿಂದ ಜಿಲ್ಲೆಯಲ್ಲಿ ಸುರಿಯುತ್ತಿರುವ ಧಾರಾಕಾರವಾಗಿ ಮಳೆಯಿಂದಾಗಿ ಅಂತರ್ಜಲ ಮಟ್ಟ ವೃದ್ಧಿಯಾಗಿದ್ದು, ಸವಣೂರು ತಾಲೂಕಿನ ಮಂತ್ರೋಡಿ ಗ್ರಾಮದ ಸರಕಾರಿ ಪ್ರೌಢ ಶಾಲೆಯಲ್ಲಿ ನೀರಿಲ್ಲದೆ ಬತ್ತಿ ಹೋಗಿದ್ದ ಬೋರ್ವೆಲ್ನಲ್ಲಿ ನೀರು ಸತತವಾಗಿ ಉಕ್ಕಿ ಹರಿಯುತ್ತಿದೆ.
ಕಳೆದ ವರ್ಷಗಳಲ್ಲಿ ಮಳೆ ಕೊರತೆಯಿಂದ ಕೆಲವೆಡೆ ಬೋರ್ವೆಲ್ಗಳು ಬತ್ತಿದ್ದವು. ಹೊಸದಾಗಿ ಕೊರೆದ ಬಾವಿಗಳು ಕೆಲವೇ ದಿನಗಳಲ್ಲಿ ಬತ್ತಿಹೋಗುತ್ತಿದ್ದು, ಕೃಷಿಗೆ ರೈತರು ಹರಸಾಹಸ ಮಾಡಬೇಕಿತ್ತು. ಆದರೆ ಈಗ ಸತತವಾಗಿ ಮಳೆ ಸುರಿಯುತ್ತಿದ್ದು, ಹಳ್ಳಕೊಳ್ಳ, ಕೆರೆಕಟ್ಟೆಗಳು ತುಂಬಿವೆ. ಜಿಲ್ಲೆಯ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಹಲವು ಸೇತುವೆಗಳು ಸಂಪೂರ್ಣ ಮುಳುಗಡೆಯಾಗಿವೆ.
ಕೃಷಿ ಜಮೀನಿಗೆ ನದಿ ನೀರು ನುಗ್ಗಿದ್ದು, ಸಾವಿರಾರು ಹೆಕ್ಟೇರ್ ಜಮೀನು ಜಲಾವೃತಗೊಂಡಿದೆ.