ಎಲ್ಲ ಕ್ಷೇತ್ರಗಳಲ್ಲಿ ಮಹಿಳೆಯರು ಮುಂಚೂಣಿಯಲ್ಲಿದ್ದಾರೆ: ಎಸ್.ಸಿ.ಪೀರಜಾದೆ

Share

ಹಾವೇರಿ: ನಾಲ್ಕು ಗೋಡೆಗಳ ಮಧ್ಯ ಬದುಕು ಸಾಗಿಸುತ್ತಿದ್ದ ಮಹಿಳೆಯರು ಇಂದು ಎಲ್ಲ ಕ್ಷೇತ್ರಗಳಲ್ಲೂ ಮುಂಚೂಣಿಯಲ್ಲಿದ್ದಾರೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಎಸ್.ಸಿ. ಪೀರಜಾದೆ ಹೇಳಿದರು.

ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಮಹಿಳಾ ಸಮಖ್ಯಾ ಕರ್ನಾಟಕ ಹಾವೇರಿ ಇವರ ಸಂಯುಕ್ತಾಶ್ರಯದಲ್ಲಿ ಮಂಗಳವಾರ ಜರುಗಿದ ಲಿಂಗತ್ವ ಸಮಾನತೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಗಂಡು-ಹೆಣ್ಣು ಎಂಬ ಭೇದ-ಭಾವವನ್ನು ಬುಡಸಮೇತ ಕಿತ್ತುಹಾಕಿದಾಗ ಮಾತ್ರ ನಮ್ಮ ಸಮಾಜದ ವೃದ್ಧಿ ಮತ್ತಷ್ಟು ಉತ್ತುಂಗಕ್ಕೆರಲು ಸಾಧ್ಯ. ವಿದ್ಯಾರ್ಥಿಗಳು ತಂದೆ-ತಾಯಿ, ಕಲಿಸಿದ ಗುರು ಹಾಗೂ ಸಮಾಜವನ್ನು ಗೌರವದಿಂದ ಕಾಣಬೇಕು. ಈ ಮೂರು ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ವಿದ್ಯಾರ್ಥಿ ಬದುಕು ಸಾರ್ಥಕತವಾಗುತ್ತದೆ. ನಿರಂತರ ಶ್ರಮದಿಂದ ಸಾಧನೆಯ ಮೆಟ್ಟಿಲು ಹತ್ತಲು ಸಾಧ್ಯ ಎಂದು ಹೇಳಿದರು.

ಧಾರವಾಡದ ಮಹಿಳಾ ಸಮಖ್ಯಾ ಕರ್ನಾಟಕದ ಜಿಲ್ಲಾ ಸಂಯೋಜಕಿ ಆರತಿ ಸಬರದ ಮಾತನಾಡಿ, ಶಿಕ್ಷಣದ ಮೂಲಕ ಮಹಿಳಾ ಸಮಾನತೆ, ಸಶಕ್ತತೆ ಸಾಧಿಸುವುದರ ಮೂಲಕ ಪುರುಷ ಪ್ರಧಾನ ಸಮಾಜದಲ್ಲಿ ಲಿಂಗ ಸಮಾನತೆ ಕಾಪಾಡುವುದು ಸಮಖ್ಯಾ ಕರ್ನಾಟಕದ ಮುಖ್ಯ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ 1986ರ ನೂತನ ನೀತಿಯಡಿ ಸರ್ವೆ ಮಾಡುವುದರ ಮೂಲಕ ಗ್ರಾಮೀಣ ಭಾಗದ ಮಹಿಳೆಯರಿಗೆ ಹೆಚ್ಚು ಒತ್ತು ನೀಡಲಾಯಿತು. ಬಳಿಕ ಮಹಿಳೆಯರು ಕಿಶೋರಿಯರ ಸಂಘಟನೆಗಳನ್ನು ಮಾಡಿಕೊಂಡು ಸ್ವವ್ಯಕ್ತಿತ್ವ, ಆತ್ಮ ವಿಶ್ವಾಸ ವೃದ್ಧಿಸಲಾಗುತ್ತಿದೆ. ಆರೋಗ್ಯ, ಕಾನೂನು, ಶಿಕ್ಷಣ, ಸ್ಥಳೀಯ ಸರ್ಕಾರದಲ್ಲಿ ಗ್ರಾಮೀಣ ಮಹಿಳೆಯರ ಭಾಗವಹಿಸುವಿಕೆ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ ಎಂದು ತಿಳಿಸಿದರು.

ಸಾರ್ವಜನಿಕ ಶಿಕ್ಷಣ ಇಲಾಖೆಯ ಜಿಲ್ಲಾ ಉಪಯೋಜನಾ ಸಮನ್ವಯಾಧಿಕಾರಿ ಶ್ರೀಮತಿ ಸುನಿತಾ ಕೆ.ಎಂ.ಅವರು ಮಾತನಾಡಿ, ಯುವ ಶಕ್ತಿ ಹರಿಯುತ್ತಿರುವ ನೀರು ಇದ್ದಂತೆ, ನಿಮ್ಮಲ್ಲಿರುವ ಧನಾತ್ಮಕ ಶಕ್ತಿಯನ್ನು ಹರಿಬಿಟ್ಟಾಗ ಮಾತ್ರ ದೇಶದ ಉದ್ಧಾರಕ್ಕೆ ಸಹಕಾರವಾಗುತ್ತದೆ. ಹೆಣ್ಣು-ಗಂಡು ಪ್ರಕೃತಿ ಎರಡು ಕಣ್ಣುಗಳಿದ್ದಂತೆ. ಹೆಣ್ಣು ಮಕ್ಕಳನ್ನು ಗೌರವದಿಂದ ಕಾಣಬೇಕು, ಅಕ್ಕ–ತಂಗಿ- ತಾಯಿಯಂತೆ ಭಾವಿಸಬೇಕು ಎಂದು ಹೇಳಿದರು.

ಮಹಿಳಾ ಯೋಜನೆಗಳ ಕುರಿತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ ತೇಜಸ್ವಿನಿ ಕೊಂಡಿ ಅವರು ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಮಹಿಳಾ ಸಮಖ್ಯಾ ಕರ್ನಾಟಕ ಜಿಲ್ಲಾ ಸಮಯೋಜಕಿ ರೇಣುಕಾ ತ್ರಿಪಾಠಿ, ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಐ.ಡಿ.ಕೊರಗರ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮಲ್ಲಿಕಾರ್ಜುನ ಉಪಸ್ಥಿತರಿದ್ದರು. ಬಸವರಾಜ ಸ್ವಾಗತಿಸಿದರು. ಸುನಂದಾ ಕಾರ್ಯಕ್ರಮ ನಿರೂಪಿಸಿದರು.