ಮನೆಯಿಂದ ಅನಗತ್ಯ ಹೊರಬರಬೇಡಿ: ಪ್ರಧಾನಿ ಮೋದಿ ಮನವಿ

Share




ನವದೆಹಲಿ: ದೇಶದಾದ್ಯಂತ ಕೋವಿಡ್‌ ಪ್ರಕರಣಗಳ ತೀವ್ರ ಹೆಚ್ಚಳ, ವೈದ್ಯಕೀಯ ಆಮ್ಲಜನಕ ಮತ್ತು ಕೋವಿಡ್‌ ತಡೆ ಲಸಿಕೆ ಕೊರತೆಯ ಹಿನ್ನೆಲೆಯಲ್ಲಿ ಅವರು ದೇಶವನ್ನು ಉದ್ದೇಶಿಸಿ ಮಂಗಳವಾರ ರಾತ್ರಿ 8.45ಕ್ಕೆ ಮಾತನಾಡಿದರು.

ದೇಶದಲ್ಲಿ ವೈದ್ಯಕೀಯ ಆಮ್ಲಜನಕದ ಕೊರತೆ ತಲೆದೋರಿದೆ. ಅದೊಂದು ದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ. ಈ ಸವಾಲು ಎದುರಿಸಲು ಸಂಬಂಧಪಟ್ಟ ಎಲ್ಲರೂ ಜತೆಯಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಅವರು ವಿವರಿಸಿದರು.
ಈಗ ದೇಶವು ಕೋವಿಡ್‌ ವಿರುದ್ಧ ದೊಡ್ಡ ಹೋರಾಟ ನಡೆಸುತ್ತಿದೆ. ಹಾಗಿದ್ದರೂ ಇತ್ತೀಚಿನ ದಿನಗಳಲ್ಲಿ ಕೈಗೊಂಡ ನಿರ್ಧಾರಗಳಿಂದ ಪರಿಸ್ಥಿತಿ ಸುಧಾರಿಸಲಿದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.

ಕಳೆದ ವರ್ಷಕ್ಕೆ ಹೋಲಿಸಿದರೆ ಈಗಿನ ಪರಿಸ್ಥಿತಿ ಭಿನ್ನವಾಗಿದೆ. ಕಳೆದ ವರ್ಷ ನಮಗೆ ಕೋವಿಡ್‌ ಬಗ್ಗೆ ಹೆಚ್ಚಿನ ತಿಳಿವಳಿಕೆ ಇರಲಿಲ್ಲ. ಈಗ ಹಾಗಲ್ಲ; ಜತೆಗೆ, ಈಗ ಲಸಿಕೆ ಇದೆ. ಪಿಪಿಇ ಕಿಟ್‌ ಮತ್ತು ಇತರ ವೈದ್ಯಕೀಯ ಸಲಕರಣೆಗಳು ಲಭ್ಯ ಇವೆ ಎಂದು ಅವರು ಹೇಳಿದರು.

ಕೋವಿಡ್‌ ವಿರುದ್ಧದ ಹೋರಾಟದಲ್ಲಿ ನಿರಂತರವಾಗಿ ಕೆಲಸ ಮಾಡುತ್ತಿರುವ ವೈದ್ಯರು, ಆರೋಗ್ಯ ಕಾರ್ಯಕರ್ತರು ಮತ್ತು ಔಷಧ ತಯಾರಿಕೆ ಕ್ಷೇತ್ರವನ್ನು ಅವರು ಶ್ಲಾಘಿಸಿದರು.