ನಾಳೆ ಪಂಚರಾಜ್ಯಗಳ ಚುನಾವಣಾ ಫಲಿತಾಂಶ;ಮತಗಟ್ಟೆ ಏಜೆಂಟ್​ರಿಗೆ ಕೊವಿಡ್​ ಟೆಸ್ಟ್​ಗಾಗಿ ಕಡ್ಡಾಯ!

Share


ಕೋಲ್ಕತ್ತ: ನಾಳೆ (ಮೇ 2) ಪಂಚರಾಜ್ಯಗಳ ಚುನಾವಣಾ ಫಲಿತಾಂಶ ಹೊರಬೀಳಲಿದೆ. ದೇಶಾದ್ಯಂತ ಕೊರೊನಾ ಎರಡನೇ ಅಲೆ ಅಪ್ಪಳಿಸುತ್ತಿರುವ ಈ ಹೊತ್ತಲ್ಲಿ ಮತಎಣಿಕೆ ನಡೆಯಲಿದ್ದು, ಯಾವುದೇ ಪಕ್ಷಗಳು ಗೆದ್ದರೂ ವಿಜಯೋತ್ಸವಕ್ಕೆ ಅವಕಾಶ ಇಲ್ಲ ಎಂದು ಈಗಾಗಲೇ ಚುನಾವಣಾ ಆಯೋಗ ಹೇಳಿದೆ.

ಅಲ್ಲದೆ, ಅಭ್ಯರ್ಥಿಯೊಂದಿಗೆ ಇಬ್ಬರು ಮಾತ್ರ ಮತ ಎಣಿಕೆ ಸ್ಥಳಕ್ಕೆ ಆಗಮಿಸಲು ಅವಕಾಶ ನೀಡಲಾಗಿದೆ. ಮತಗಟ್ಟೆ ಏಜೆಂಟ್​ಗಳು ಸೇರಿ, ಅಲ್ಲಿಗೆ ಬರುವ ಪ್ರತಿಯೊಬ್ಬರೂ ಕೊವಿಡ್ 19 ಟೆಸ್ಟ್ ಮಾಡಿಸಿಕೊಂಡು, ನೆಗೆಟಿವ್​ ವರದಿ ತರುವುದು ಕಡ್ಡಾಯ ಎಂದೂ ಚುನಾವಣಾ ಆಯೋಗ ತಿಳಿಸಿದೆ.

ಈ ಹಿನ್ನೆಲೆಯಲ್ಲಿ ಇಂದು ಪಶ್ಚಿಮಬಂಗಾಳದ ನೇತಾಜಿ ಒಳಾಂಗಣ ಕ್ರಿಡಾಂಗಣ ಮತ್ತು ಬ್ಯಾಲಿಗಂಜ್​ ಸರ್ಕಾರಿ ಶಾಲೆಗಳಲ್ಲಿ ತಪಾಸಣಾ ನಡೆಸಲಾಗುತ್ತಿದೆ. ಕೇಂದ್ರದ ಬಳಿ ಹಲವು ಅಭ್ಯರ್ಥಿಗಳು, ಅವರ ಸಹಾಯಕರು ಕೊವಿಡ್​ ತಪಾಸಣೆಗಾಗಿ ಗುಂಪುಗೂಡಿದ್ದಾರೆ. ಅದರಲ್ಲೂ ಜಿಲ್ಲಾ ಚುನಾವಣಾ ಅಧಿಕಾರಿಗಳು, ಕೊವಿಡ್ ರ್ಯಾಪಿಡ್​ ಆ್ಯಂಟಿಜನ್ ತಪಾಸಣೆಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಗುಂಪುಗೂಡುತ್ತಿದ್ದಾರೆ.

ಕೊವಿಡ್ ರಿಪೋರ್ಟ್​ನ್ನು ನಾಳೆ ಚುನಾವಣಾ ಅಧಿಕಾರಿಗಳಿಗೆ ನೀಡಿದರೆ ಮಾತ್ರ ಮತ ಎಣಿಕೆ ಕೇಂದ್ರಗಳಿಗೆ ಪ್ರವೇಶ ಸಿಗುತ್ತದೆ ಎಂದು ಜೋರಬಗನ್ ಕ್ಷೇತ್ರದ ತೃಣಮೂಲ ಕಾಂಗ್ರೆಸ್​ ಏಜೆಂಟ್ ಮಣಿಕ್ ಸಿಂಗ್ ತಿಳಿಸಿದ್ದಾರೆ.
ಹಾಗಾಗಿ ಏಜೆಂಟ್​ಗಳನ್ನು ಆಯಾ ಮತಎಣಿಕೆ ಕೇಂದ್ರಗಳಿಗೆ ಕಳಿಸುವುದಕ್ಕೂ ಮೊದಲು ಅವರ ಕೊವಿಡ್ 19 ತಪಾಸಣೆಯನ್ನು ಕಡ್ಡಾಯಗೊಳಿಸಲಾಗಿದೆ ಎಂದು ಜೋರಸಂಕೊದ ಸಂಜುಕ್ತ ಮೋರ್ಚಾ ಅಭ್ಯರ್ಥಿ ಅಜ್ಮಲ್ ಖಾನ್ ತಿಳಿಸಿದ್ದಾರೆ.

ಯಾವುದೇ ಏಜೆಂಟ್​ಗೆ ಕೊರೊನಾ ಪಾಸಿಟಿವ್​ ಬಂದರೆ ಅವರ ಬದಲಿಗೆ ಇನ್ನೊಬ್ಬರನ್ನು ಕಳಿಸುತ್ತೇವೆ ಎಂದೂ ತಿಳಿಸಿದ್ದಾರೆ. ಇದೇ ನಿರ್ಧಾರವನ್ನು ಬಹುತೇಕ ಎಲ್ಲ ಪಕ್ಷಗಳೂ ಕೈಗೊಂಡಿವೆ. ಈ ಮಧ್ಯೆ ತೃಣಮೂಲ ಕಾಂಗ್ರೆಸ್​ನಿಂದ ಸಾಧ್ಯವಾದಷ್ಟು ಎರಡೂ ಡೋಸ್ ಲಸಿಕೆ ಪಡೆದವರನ್ನೇ ಏಜೆಂಟ್​ ಆಗಿ ಕಳಿಸಲು ತೀರ್ಮಾನಿಸಲಾಗಿದೆ ಎನ್ನಲಾಗಿದೆ.