ಹಾವೇರಿ: ಶಿರಬಡಗಿ ಪೊಲೀಸ್ ಕಾನ್‍ಸ್ಟೇಬಲ್ ಸೇರಿದಂತೆ ಇಬ್ಬರಿಗೆ ಕೋವಿಡ್ ಸೋಂಕು ದೃಢ, ಪ್ರಕರಣ ಸಂಖ್ಯೆ 55 ಕ್ಕೆ ಏರಿಕೆ

Share

ಹಾವೇರಿ: ಜಿಲ್ಲೆಯಲ್ಲಿ ಇಬ್ಬರಿಗೆ ಶುಕ್ರವಾರ ಕೋವಿಡ್ ಸೋಂಕು ದೃಢಪಟ್ಟಿದೆ. ಬೆಂಗಳೂರಿನ ಚಾಮರಾಜಪೇಟೆಯ ಸಿಎಆರ್ ಹೆಡ್ ಕ್ವಾಟರ್ ನಲ್ಲಿ ಪೊಲೀಸ್ ಕಾನ್‍ಸ್ಟೇಬಲ್ ಆಗಿ ಕಾರ್ಯನಿವಹಿಸುತ್ತಿರುವ ಸವಣೂರ ತಾಲೂಕಿನ ಶಿರಬಡಗಿಯ 27 ವರ್ಷದ ಪುರುಷ ಹಾಗೂ ಶಿಗ್ಗಾಂವ ಪಟ್ಟಣದ ಮೆಹಬೂಬ ನಗರದ 40 ವರ್ಷದ ಮಹಿಳೆಯೋರ್ವರಿಗೆ ಇಂದು ಸೋಂಕು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಅವರು ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಈವರೆಗೆ 55 ಕೋವಿಡ್ ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು, ಈ ಪೈಕಿ 25 ಜನರು ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 30 ಪ್ರಕರಣಗಳು ಸಕ್ರಿಯವಾಗಿವೆ. ಈ ಪೈಕಿ ಓರ್ವ ಸೋಂಕಿತರು ಐ.ಸಿ.ಯು.ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಪ್ರವಾಸ ಹಿನ್ನೆಲೆ: ಇಂದಿನ ಸೋಂಕಿತರ ಪೈಕಿ 40 ವರ್ಷ ಗೃಹಿಣಿ(P-10598 ) ತನ್ನ ಗಂಡ ಮಕ್ಕಳೊಂದಿಗೆ ಶಿಗ್ಗಾಂವಿಯ ಮೆಹಬೂಬ ನಗರದ ಸ್ವಂತ ಮನೆಯಲ್ಲಿ ವಾಸಗಿದ್ದರು. ಕಿಡ್ನಿಯಲ್ಲಿ ಹರಳು ಸಮಸ್ಯೆ ಕಾರಣ ಜೂನ್ 18 ರಂದು ಹುಬ್ಬಳ್ಳಿಯ ಬಿಜಾಪುರ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದರು. ದಾಖಲಾದ ಆಸ್ಪತ್ರೆಯಲ್ಲಿ ಮಹಿಳೆಗೆ ಶಸ್ತ್ರ ಚಿಕಿತ್ಸೆ ನಡೆಸುವ ಸಿದ್ಧತೆಗಾಗಿ ಕೋವಿಡ್ -19 ಪರೀಕ್ಷೆಗೆ ಒಳಪಡುವುದು ಅಗತ್ಯವಾಗಿರುವುದರಿಂದ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಕೋವಿಡ್-19 ಪರೀಕ್ಷೆಗೆ ಒಳಪಡಿಸಿರುತ್ತಾರೆ. ನಂತರ ಪರೀಕ್ಷಾ ವರದಿ ಬರುವವರೆಗೂ ಆಸ್ಪತ್ರೆಯಿಂದ ಜೂನ್ 23 ರಂದು ಬಿಡುಗಡೆಮಾಡಿರುತ್ತಾರೆ.

ಆಸ್ಪತ್ರೆಯಿಂದ ಹೊರಟ ಮಹಿಳೆ ಹುಬ್ಬಳ್ಳಿ ಇಸ್ಲಾಂಪುರದಲ್ಲಿ ಇರುವ ತಮ್ಮ ಸಂಬಂಧಿಕರ ಮನೆಯಲ್ಲಿ ಉಳಿದು ಜೂನ್ 25 ರಂದು ಕೆ.ಎಸ್.ಆರ್.ಟಿ. ಬಸ್ ಮೂಲಕ ಮರಳಿ ಶಿಗ್ಗಾಂವಗೆ ಪ್ರಯಾಣಿಸಿರುತ್ತಾರೆ. ಶಿಗ್ಗಾಂವ ನಗರದಲ್ಲಿ ಇಳಿದು ಆಟೋ ಮೂಲಕ ಮೆಹಬೂಬ ನಗರದ ತನ್ನ ಮನೆಗೆ ಹಿಂದಿರುಗಿರುತ್ತಾರೆ. ಸದರಿ ಮಹಿಳೆಗೆ ಕೋವಿಡ್ ಪಾಸಿಟಿವ್ ಇರುವ ಬಗ್ಗೆ ಲ್ಯಾಬ್ ವರದಿ ಹಿನ್ನೆಲೆಯಲ್ಲಿ ಇಂದು ಬೆಳಿಗ್ಗೆ ಕೋವಿಡ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಸದರಿ ಮಹಿಳೆಯ ಪತಿಯನ್ನು ಪ್ರಾಥಮಿಕ ಸೋಂಕಿತರೆಂದು ಗುರುತಿಸಲಾಗಿದೆ.

ಸವಣೂರು ತಾಲೂಕು ಶಿರಬಡಗಿಯ 27 ವರ್ಷದ (P-10599 ) ಸೋಂಕಿತನು ಬೆಂಗಳೂರಿನ ಚಾಮರಾಜಪೇಟೆಯ ಸಿಎಆರ್ ಹೆಡ್ ಕ್ವಾಟರ್‍ನಲ್ಲಿ ಪೊಲೀಸ್ ಕಾನ್‍ಸ್ಟೇಬಲ್ ಆಗಿ ಕಾರ್ಯನಿವಹಿಸುತ್ತಿದ್ದು, ಜೂನ್ 22 ರಂದು ಸರ್ಕಾರದ ನಿರ್ದೇಶನದಂತೆ ಸ್ವಾಬ್ ಪರೀಕ್ಷೆಗೆ ಒಳಗಾಗಿರುತ್ತಾನೆ. ಈ ಸಮಯದಲ್ಲಿ ಶಿರಬಡಗಿಯಲ್ಲಿ ತನ್ನ ತಾಯಿ ದೈವಾಧೀನರಾದ ಪ್ರಯುಕ್ತ ಅದೇ ರಾತ್ರಿ 11 ಗಂಟೆಗೆ ಬೆಂಗಳೂರಿನಿಂದ ಕೆ.ಎಸ್.ಆರ್.ಟಿ. ಬಸ್ ಮೂಲಕ ಹೊರಟು ಹಾವೇರಿಗೆ ಬೆಳಿಗ್ಗೆ 11 ಗಂಟೆಗೆ ಬಂದಿರುತ್ತಾನೆ. ಹಾವೇರಿಯಿಂದ ಸವಣೂರಿಗೆ ಕೆ.ಎಸ್.ಆರ್.ಟಿ.ಸಿ.ಬಸ್ ಮೂಲಕ ಪ್ರಯಾಣಿಸಿ ಸವಣೂರ ಬಸ್ ನಿಲ್ದಾಣದಿಂದ ತನ್ನ ಊರಿನವರ ಬೈಕ್‍ನಲ್ಲಿ ಶಿರಬಡಗಿ ಗ್ರಾಮಕ್ಕೆ ತಲುಪಿ ತನ್ನ ತಾಯಿಯ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿ ಅದೇ ಗ್ರಾಮದ ತನ್ನ ಮನೆಯಲ್ಲಿ ಉಳಿದಿರುತ್ತಾನೆ.

ಜೂನ್ 26 ರಂದು ಈ ಕಾನ್‍ಸ್ಟೇಬಲ್‍ಗೆ ಬೆಂಗಳೂರ ಲ್ಯಾಬ್‍ನಿಂದ ದೂರವಾಣಿ ಕರೆಮಾಡಿ ಕೋವಿಡ್ ಪಾಸಿಟಿವ್ ಇರುವುದಾಗಿ ತಿಳಿಸಿ ಮುಂದಿನ ಚಿಕಿತ್ಸೆಗಾಗಿ ಹಾವೇರಿಯ ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲಾಗುವಂತೆ ಸೂಚನೆ ನೀಡಿದ್ದಾರೆ. ಈ ಸೋಂಕಿತನನ್ನು ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಿಕೊಳ್ಳಲಾಗಿದೆ. ಆತನೊಂದಿಗೆ ಪ್ರಾಥಮಿಕ ಸಂಪರ್ಕದಲ್ಲಿದ್ದ 11 ಜನರನ್ನು ಕ್ವಾರಂಟೈನ್‍ನಲ್ಲಿ ಇರಿಸಲಾಗಿದೆ.

ಸಹ ಪ್ರಯಾಣಿಕರ ಸ್ವಯಂ ಪರೀಕ್ಷೆಗೆ ಮನವಿ: ಜೂನ್ 25 ರಂದು ಹುಬ್ಬಳ್ಳಿಯಿಂದ ಶಿಗ್ಗಾಂವಗೆ (P-10598 ) ಸೋಂಕಿತ ಮಹಿಳೆ ಪ್ರಯಾಣಿಸಿದ ಬಸ್ಸಿನ ಚಾಲಕ ಹಾಗೂ ನಿರ್ವಾಹಕರ ವಿವರ ನೀಡಿ ಸದರಿಯವರನ್ನು ಕ್ವಾರಂಟೈನ್‍ಲ್ಲಿ ಇರಿಸಲು ಕೆ.ಎಸ್.ಆರ್.ಟಿ.ಸಿ. ಡಿಸಿ ಅವರಿಗೆ ಪತ್ರ ಬರೆಯಲಾಗಿದೆ. ಈ ಬಸ್ಸಿನಲ್ಲಿ ಪ್ರಯಾಣಿಸಿದ ಪ್ರಯಾಣಿಕರು ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತ ಕೋವಿಡ್ ತಪಾಸಣೆಗೆ ಒಳಗಾಗುವಂತೆ ಕೋರಲಾಗಿದೆ.

ಜೂನ್ 22 ರಂದು ಬೆಂಗಳೂರಿನಿಂದ ಹಾವೇರಿಗೆ ಹಾಗೂ ಹಾವೇರಿಯಿಂದ ಸವಣೂರಿಗೆ (P-10599 ) ಸೋಂಕಿತನು ಪ್ರಯಾಣಿಸಿದ ಬಸ್ಸಿನ ಬಸ್ ಚಾಲಕ, ನಿರ್ವಾಹಕರನ್ನು ಕ್ವಾರಂಟೈನ್‍ನಲ್ಲಿ ಇರಿಸಲು ಕೆ.ಎಸ್. ಆರ್.ಟಿ.ಸಿ. ಡಿಸಿ ಅವರಿಗೆ ಪತ್ರ ಬರೆಯಲಾಗಿದೆ. ಈ ಬಸ್ಸಿನಲ್ಲಿ ಪ್ರಯಾಣಿಸಿದ ಪ್ರಯಾಣಿಕರು ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತ ಕೋವಿಡ್ ತಪಾಸಣೆಗೆ ಒಳಗಾಗುವಂತೆ ಕೋರಲಾಗಿದೆ.

ಸೋಂಕಿತರ ನಿವಾಸವಿರುವ 100 ಮೀಟರ್ ಪ್ರದೇಶವನ್ನು ಕಂಟೈನ್‍ಮೆಂಟ್ ಜೋನ್ ಎಂದು ಘೋಷಿಸಲಾಗಿದೆ ಹಾಗೂ ಶಿಗ್ಗಾಂವ ಮೆಹಬೂಬ ನಗರದ 200 ಮೀ. ಪ್ರದೇಶವನ್ನು ಹಾಗೂ ಶಿರಬಡಗಿ ಗ್ರಾಮವನ್ನು ಸಂಪೂರ್ಣವಾಗಿ ಬಫರ್ ಜೋನ್ ಆಗಿ ಘೋಷಿಸಲಾಗಿದೆ. ಇನ್ಸಿಡೆಂಟ್ ಕಮಾಂಡರ್ ಆಗಿ ಸವಣೂರ ಹಾಗೂ ಶಿಗ್ಗಾಂವ ತಹಶೀಲ್ದಾರ ಅವರನ್ನು ಸಂಬಂಧಿಸಿದ ಪ್ರದೇಶಕ್ಕೆ ನೇಮಕ ಮಾಡಲಾಗಿದೆ.