ಗುಂಡೇನಹಳ್ಳಿ ಸಿಆರ್​ಪಿಎಫ್ ಯೋಧ ವೀರ ಮರಣ

Share

ಹಾವೇರಿ: ಜಿಲ್ಲೆಯ ಬ್ಯಾಡಗಿ ತಾಲೂಕಿನ ಗುಂಡೇನಹಳ್ಳಿ ಗ್ರಾಮದ ಯೋಧ ಶಿವಲಿಂಗೇಶ್ವರ ವೀರಭದ್ರಗೌಡ್ರ ಪಾಟೀಲ (26) ಜಮ್ಮು ಕಾಶ್ಮೀರದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ವೀರ ಮರಣ ಹೊಂದಿದ್ದಾರೆ.
ಕಳೆದ 6 ವರ್ಷಗಳಿಂದ ಜಮ್ಮು ಕಾಶ್ಮೀರ ಸೇನಾಪಡೆಯ ಸಿಆರ್​ಪಿಎಫ್ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿದ್ದ ಶಿವಲಿಂಗೇಶ್ವರ, ಕಳೆದ ವಾರ ಜಮ್ಮು ಕಾಶ್ಮೀರದ ಪುಲ್ವಾಮದಲ್ಲಿ ಜರುಗಿದ ಸರ್ಚ್ ಆಪರೇಶನ್ ಕಾರ್ಯ ನಡೆಸುತ್ತಿದ್ದಾಗ ಗಾಯಗೊಂಡ ಅವರನ್ನು ದೆಹಲಿಯ ಆರ್.ಆರ್. ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ. ಶಿವಲಿಂಗೇಶ್ವರ ತಂದೆ ವೀರಭದ್ರಗೌಡ್ರ ಪಾಟೀಲ ಕೂಡ ನಿವೃತ್ತ ಯೋಧರಾಗಿದ್ದಾರೆ.
ಅಂತ್ಯಕ್ರಿಯೆಗೆ ಸಿದ್ಧತೆ: ಯೋಧನ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಗ್ರಾಮದಲ್ಲಿ ನೀರವ ಮೌನ ಆವರಿಸಿದೆ. ಹುಟ್ಟೂರಿನಲ್ಲಿ ವೀರಯೋಧನ ಪಾರ್ಥಿವ ಶರೀರಕ್ಕಾಗಿ ಕಾಯುತ್ತಿದ್ದಾರೆ. ದೆಹಲಿಯಿಂದ ಹೆಲಿಕಾಪ್ಟರ್ ಮೂಲಕ ಗೋವಾಕ್ಕೆ ಬರಲಿದ್ದು, ಅಲ್ಲಿಂದ ಮೇ 27ರಂದು ಬೆಳಗ್ಗೆ 8 ಗಂಟೆಗೆ ಹಾವೇರಿ ಜಿಲ್ಲಾಧಿಕಾರಿ ಕಾರ್ಯಾಲಯಕ್ಕೆ ತಲುಪಿ, ಪಾರ್ಥಿವ ಶರೀರದ ಮೆರವಣಿಗೆ ನಡೆಯಲಿದೆ. ಬಳಿಕ ಸ್ವಗ್ರಾಮದಲ್ಲಿ ಸರ್ಕಾರಿ ಗೌರವದೊಂದಿಗೆ ಅಂತ್ಯ ಸಂಸ್ಕಾರ ಜರುಗಲಿದೆ ಎಂದು ತಹಸೀಲ್ದಾರ್ ಕೆ. ಗುರುಬಸವರಾಜ ತಿಳಿಸಿದ್ದಾರೆ.