ಹೂವು ಬೆಳೆಗಾರರಿಗೆ ಪರಿಹಾರ ಧನ ನೀಡಲು ಅರ್ಜಿ ಆಹ್ವಾನ

Share

ಹಾವೇರಿ: ಕೋವಿಡ್ ಲಾಕ್‍ಡೌನ್ ಹಿನ್ನೆಲೆಯಲ್ಲಿ ನಷ್ಟ ಹೊಂದಿರುವ ಹೂವು ಬೆಳಗಾರರಿಗೆ ಸರ್ಕಾರ ಪರಿಹಾರ ಘೋಷಿಸಿದೆ. ಹಾನಿಗೊಳಗಾದ ಜಿಲ್ಲೆಯ ಹೂವಿನ ಬೆಳೆಗಾರರಿಂದ ಪರಿಹಾರ ಧನ ನೀಡಲು ಅರ್ಜಿ ಆಹ್ವಾನಿಸಲಾಗಿದೆ.

ಪ್ರತಿ ಫಲಾನುಭವಿಗೆ ಒಂದು ಹೆಕ್ಟೇರ್ ವಿಸ್ತೀರ್ಣಕ್ಕೆ ಮಿತಿಗೊಳಿಸಿ ಪರಿಹಾರ ಧನ ನೀಡಲಾಗುತ್ತಿದೆ. ಒಂದು ಹೆಕ್ಟೇರ್‍ಗೆ ರೂ.25 ಸಾವಿರ ಗರಿಷ್ಠ ಪರಿಹಾರಧನ ಘೋಷಿಸಲಾಗಿದೆ. ಪರಿಹಾರ ಪಡೆಯುವ ಫಲಾನುಭವಿಗಳು ರೈತರಾಗಿರಬೇಕು ಹಾಗೂ ಜಮೀನು ಅವರ ಹೆಸರಿನಲ್ಲಿರಬೇಕು. ಜಂಟಿ ಖಾತೆಯಾಗಿದ್ದಲ್ಲಿ ಇತರ ಖಾತೆದಾರರ ಒಪ್ಪಿಗೆ ಪತ್ರ ಪಡೆದಿರಬೇಕು (ನೋಟರಿ ದೃಢೀಕರಣ ಮಾಡಿಸುವುದು ಕಡ್ಡಾಯ). ತಂದೆ ಅಥವಾ ತಾಯಿ ಹೆಸರಿನಲ್ಲಿ ಜಮೀನು ಇದ್ದು ಅವರು ಮರಣಹೊಂದಿದ್ದಲ್ಲಿ ಮಾತ್ರ ಗ್ರಾಮ ಲೆಕ್ಕಿಗರಿಂದ ದೃಢೀಕರಿಸಿ ಕುಟುಂಬದ ಇತರ ಸದಸ್ಯರಿಂದ ಒಪ್ಪಿಗೆ ಪಡೆದು ತಮ್ಮ ಹೆಸರಿನಲ್ಲಿ ಅರ್ಜಿ ಸಲ್ಲಿಸಬೇಕು.

ಮಹಿಳೆಯ ಹೆಸರಿನಲ್ಲಿ ಖಾತೆ ಹೊಂದಿದ್ದು, ಕುಟುಂಬದ ಇತರೆ ಪುರುಷ ಸದಸ್ಯರ ಹೆಸರಿನಲ್ಲಿ ಅರ್ಜಿ ಸಲ್ಲಿಸಿದ್ದಲ್ಲಿ ಯಾವುದೇ ಕಾರಣಕ್ಕೂ ಮಾನ್ಯ ಮಾಡಲಾಗುವುದಿಲ್ಲ. ಜಮೀನು ಯಾರ ಹೆಸರಿನಲ್ಲಿದೇ ಅವರ ಹೆಸರಿನಲ್ಲಿಯೇ ಅರ್ಜಿಲ್ಲಿಸಬೇಕು. ಅರ್ಜಿಯೊಂದಿಗೆ ಆಧಾರ್ ಕಾರ್ಡ್, ಬ್ಯಾಂಕ್ ಖಾತೆ ಝರಾಕ್ಸ್ ಪ್ರತಿ ಲಗತ್ತಿಸಬೇಕು ಎಂದು ತೋಟಗಾರಿಕೆ ಇಲಾಖೆ ಉಪನಿರ್ದೇಶಕರು ತಿಳಿಸಿದ್ದಾರೆ.

ಲಾಕ್‍ಡೌನ್ ಅವಧಿಯಲ್ಲಿ ಹೂವು ಬೆಳೆ ನಷ್ಟ ಹೊಂದಿದ ರೈತರಿಗೆ ಮಾತ್ರ ಪರಿಹಾರ ಧನ ವಿತರಿಸಲಾಗುವುದು. ಅರ್ಜಿ ಸಲ್ಲಿಸಲು ಹಾಗೂ ಇತರೆ ಮಾಹಿತಿಗಾಗಿ ತಾಲ್ಲೂಕಿನ ತೋಟಗಾರಿಕೆ ಇಲಾಖೆಯನ್ನು ಸಂಪರ್ಕಿಸಿ ಎಂದು ಅವರು ತಿಳಿಸಿದ್ದಾರೆ.