ಲಾಕ್‍ಡೌನ್ ಅವಧಿಯಲ್ಲಿ ಜಿಲ್ಲೆಯ ರೈತರ ನೆರವಿಗೆ ನಿಂತ ಜಿಲ್ಲಾಡಳಿತ ಹಣ್ಣು-ತರಕಾರಿ ರಫ್ತು

Share

ಹಾವೇರಿ: ಕರೋನಾ ವೈರಸ್ ಹರಡುವಿಕೆಯ ನಿಯಂತ್ರಣಕ್ಕಾಗಿ ಲಾಕ್‍ಡೌನ್ ಜಾರಿಯಲ್ಲಿದ್ದರೂ ಜಿಲ್ಲೆಯ ರೈತರ ಸಂಕಷ್ಟಕ್ಕೆ ಸ್ಪಂದಿಸಿರುವ ಜಿಲ್ಲಾಡಳಿತ ತೋಟಗಾರಿಕೆ ಇಲಾಖೆಯ ಮೂಲಕ ರೈತರು ಬೆಳೆದಿರುವ ಹಣ್ಣು ಮತ್ತು ತರಕಾರಿ, ವಿಳ್ಯದೆಲೆಗಳನ್ನು ಹೊರ ರಾಜ್ಯ ಹಾಗೂ ಹೊರ ಜಿಲ್ಲೆಗಳ ಮಾರುಕಟ್ಟೆಗಳ ಸಂಪರ್ಕ ಸಾಧಿಸಿ ನಿರಂತರ ರಫ್ತು ಮಾಡಲು ನೆರವು ಒದಗಿಸುತ್ತಿದೆ. ಎಪ್ರಿಲ್ 4 ರಿಂದ ಈವರೆಗೆ 592.67 ಮೆಟ್ರಿಕ್ ಟನ್‍ಗೂ ಹೆಚ್ಚು ಹಣ್ಣು ಹಾಗೂ ತರಕಾರಿ ಸಾಗಾಣಿಕೆ ಮಾಡಿದೆ.

ದೆಹಲಿ, ಕಲ್ಕತ್ತ, ಪುಣೆ, ಮುಂಬೈ, ಗೋವಾ, ಉತ್ತರ ಪ್ರದೇಶ, ಆಂಧ್ರಪ್ರದೇಶ, ಬಾಗಲಕೋಟೆ, ಧಾರವಾಡ, ಬೆಂಗಳೂರು, ಶಿವಮೊಗ್ಗ, ಮಂಗಳೂರು, ಉಡುಪಿ, ಕಾರವಾರ, ಬಳ್ಳಾರಿ, ಕಂಪ್ಲಿ ಜಿಲ್ಲೆಗಳ ಮಾರುಕಟ್ಟೆಗಳಲ್ಲಿ ನಿರಂತರ ಸಂಪರ್ಕ ಸಾಧಿಸಿ ರೈತರ ಮೂಲಕ ನೆರ ಮಾರಾಟಕ್ಕೆ ವ್ಯವಸ್ಥೆ ಕಲ್ಪಿಸಿದೆ. ಸಾಗಾಣಿಕೆಗೆ ವಾಹನ ಪಾಸ್ ನೀಡಿ ಶ್ರಮವಹಿಸಿ ರೈತ ಬೆಳೆದ ಬೆಳೆಗೆ ಸೂಕ್ತ ಬೆಲೆ ಹಾಗೂ ಸಂಪರ್ಕ ಕಲ್ಪಿಸಲು ತೋಟಗಾರಿಗೆ ಇಲಾಖೆ ವ್ಯವಸ್ಥೆ ಮಾಡುತ್ತಿದೆ.

ಜಿಲ್ಲೆಯಿಂದ ಕಲ್ಕತ್ತ, ದೇಹಲಿ, ಬಾಗಲಕೋಟೆಗೆ ಈವರೆಗೆ 22 ಮೆಟ್ರಿಕ್ ಟನ್ ಶುಂಠಿಯನ್ನು, ಹುಬ್ಬಳ್ಳಿ, ಬೆಂಗಳೂರ, ಶಿವಮೊಗ್ಗ, ಕಾರವಾರ, ಕುಂದಾಪುರ, ಆಂಧ್ರಪ್ರದೇಶದ ಕಲ್ಯಾಣದುರ್ಗ, ಗೋವಾ, ಕಂಪ್ಲಿ, ಬಳ್ಳಾರಿ, ಮಂಗಳೂರಿಗೆ 181 ಮೆಟ್ರಿಕ್ ಟನ್ ಬಾಳೆಹಣ್ಣು ಹಾಗೂ ಗೋವಾ, ಕಾರವಾರ, ಉಡುಪಿಗೆ ಈವರೆಗೆ 28 ಮೆಟ್ರಿಕ್ ಟನ್ ಟೊಮ್ಯಾಟೋ ರಫ್ತು ಮಾಡಲಾಗಿದೆ.

ಕಾರವಾರ, ಬೆಂಗಳೂರಿಗೆ 22 ಮೆಟ್ರಿಕ್ ಟನ್ ಬದನೆಕಾಯಿ, ಕಾರವಾರ, ಶಿವಮೊಗ್ಗ, ಗೋವಾಗೆ ಈವರೆಗೆ 17 ಮೆಟ್ರಿಕ್ ಟನ್ ಈರುಳ್ಳಿ, ಹುಬ್ಬಳ್ಳಿ, ಕಾರವಾರ, ಬೆಂಗಳೂರ, ಮಂಗಳೂರು ಮಾರುಕಟ್ಟೆಗೆ 96.6 ಮೆಟ್ರಿಕ್ ಟನ್ ಮಾವು, ಕಾರವಾರಕ್ಕೆ 1 ಮೆಟ್ರಿಕ್ ಟನ್ ಬೆಳ್ಳುಳ್ಳಿ, ಕಲಾಸಿಪಾಳ್ಯಕ್ಕೆ 120 ಮೆಟ್ರಿಕ್ ಟನ್ ಕುಂಬಳಕಾಯಿ ಕಳುಹಿಸಲಾಗಿದೆ.