ರಾಜ್ಯ ಮಟ್ಟದ ಜಾನಪದ ಜಾತ್ರೆ: ಕಲಾ ಜಾಥಾ ಉದ್ಘಾಟಿಸಿ ಜೊಡೆತ್ತಿನ ಬಂಡಿ ಓಡಿಸಿದ ಶಾಸಕ ನೆಹರು ಓಲೇಕಾರ

Share

ಹಾವೇರಿ: ರಾಜ್ಯ ಮಟ್ಟದ ಜಾನಪದ ಜಾತ್ರೆ ಅಂಗವಾಗಿ ನಗರದಲ್ಲಿಂದು ಬೃಹತ್ ಕಲಾಜಾಥಾ ನಡೆಯಿತು. ಮುರುಘಾಮಠದ ಆವರಣದಲ್ಲಿ ಕಲಾಜಾಥಾಕ್ಕೆ ಚಾಲನೆ ನೀಡಿದ ಶಾಸಕ ನೆಹರು ಓಲೇಕಾರ ಜೊಡೆತ್ತಿನ ಬಂಡಿ ಓಡಿಸುವುದರ ಮೂಲಕ ಎಲ್ಲರ ಗಮನ ಸೆಳೆದರು.

ಜಿಲ್ಲಾಡಳಿತ ಜಿಲ್ಲಾ ಪಂಚಾಯತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಆಯೋಜಿಸಲಾದ ಜಾನಪದ ಜಾತ್ರೆಯ ಮೆರವಣಿಗೆಯಲ್ಲಿ 18ಕ್ಕೂ ಹೆಚ್ಚು ಕಲಾ ತಂಡಗಳು, ಯುವಕ ಸಂಘಗಳು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿ ದೇಶಿ ಪರಂಪರೆಯ ವೈಭವವನ್ನು ಸಾರಿಸಿದರು.

ಪಾರಂಪರಿಕ ಕಹಳೆ ವಾದ್ಯಗಳನ್ನು ಊದುವುದರೊಂದಿಗೆ ಆರಂಭಿಸಲಾದ ಜಾನಪದ ಜಾತ್ರೆಯ ಮೆರವಣಿಗೆಯುದ್ಧಕ್ಕೂ ವೈವಿಧ್ಯಮಯ ದೇಶಿ ವಾದ್ಯಗಳ ನಿನಾದಾ, ಜನಪದ ಕುಣಿತಗಳು, ಕೋಲಾಟ, ಡೊಳ್ಳು ಕುಣಿತ, ಕರಡಿಮಜಲು, ಹೆಜ್ಜೆಮೇಳ, ನಂದಿಕೋಲು ಕುಣಿತ, ನವಿಲು ಕುಣಿತ, ಜಗ್ಗಲಿಗೆ, ನಗಾರಿ ಹೀಗೆ ಹಲವು ಬಗೆಯ ಗ್ರಾಮೀಣ ಸೊಗಡಿನ ಕಲೆಗಳ ಅನಾವರಣ ನೋಡುಗರಿಗೆ ರೋಮಾಂಚನಗೊಳಿಸಿತು.

ತಾಳಬದ್ಧ ನಾದಗಳಿಗೆ ಲಯಬದ್ಧ ಕುಣಿತಗಳು ನೋಡುಗುರ ಗಮನ ಸೆಳೆದವು. ಮುರಾಘಮಠದಿಂದ ಪಿ.ಬಿ.ರಸ್ತೆ ಮಾರ್ಗವಾಗಿ ಹೊಸಮನಿ ಸಿದ್ಧಪ್ಪ ವೃತ್, ಗಾಂಧಿ ವೃತ್ತದ ಮಾರುಕಟ್ಟೆ ಮೂಲಕ ಹೊಸಮನಿ ಸಿದ್ಧಪ್ಪ ಜಿಲ್ಲಾ ಕ್ರೀಡಾಂಗಣದವರೆಗೆ ನಡೆದ ನಡೆದ ಜಾನಪದ ಮೆರವಣಿಗೆಯಲ್ಲಿ ವಿವಿಧ ಶಾಲೆಯ 2000ಕ್ಕೂ ಅಧಿಕ ಮಕ್ಕಳು ಡೆಂಬಲ್ಸ್, ಕೋಲಾಟ, ಲೇಜಿಮ್‍ನೊಂದಿಗೆ ಭಾಗವಹಿಸಿ ಮೆರವಣಿಗೆಯಲ್ಲಿ ಹೆಜ್ಜೆಹಾಕಿ ಎಲ್ಲರ ಗಮನ ಸೆಳೆದರು.

ರಾಜ್ಯದ ವಿವಿಧ ಜಿಲ್ಲೆಯಿಂದ ಬಂದ 300ಕ್ಕೂ ಅಧಿಕ ಜಾನಪದ ಕಲಾವಿದರು, ಯುವ ಸಂಘಟನೆಗಳ ಕಲಾವಿದರು ಭಾಗವಹಿಸಿ ಮೆರವಣಿಗೆ ಮೆರಗು ತಂದರು.

ಕಾರ್ಯಕ್ರಮದಲ್ಲಿ ಹೊಸಮಠದ ಬಸವಶಾಂತಲಿಂಗ ಶ್ರೀಗಳು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ಅಶೋಕ ಚಲವಾದಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಉಪ ವಿಭಾಗಾಧಿಕಾರಿ ಎನ್.ತಿಪ್ಪೇಸ್ವಾಮಿ, ಕ್ಷೇತ್ರ ಶಿಕ್ಷಣಾಧಿಕಾರಿ ಹೆಚ್.ಎಂ.ಪಾಟೀಲ್, ತಹಶೀಲ್ದಾರ ಶಂಕರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಶಶಿಕಲಾ ಹುಡೆದ, ಸಿಪಿಐ ಪ್ರಭಾವತಿ ಶೇತಸನದಿ, ನಗರಸಭೆ ಸದಸ್ಯರು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.