ಪದವಿ ಜೊತೆಗೆ ಕೌಶಲ್ಯ ಹೊಂದಿ: ಉದ್ಯೋಗಾಕಾಂಕ್ಷಿಗಳಿಗೆ ಗೃಹ ಸಚಿವರ ಕರೆ

Share

ಹಾವೇರಿ: ಇಂದಿನ ಜಾಗತೀಕ ಸಂದರ್ಭದಲ್ಲಿ ಕೇವಲ ಒಂದು ಪದವಿ, ಒಂದು ಕೋರ್ಸ್ ಮುಗಿಸಿದರೆ ಸಾಲುವುದಿಲ್ಲ. ಕಾಲಮಾನದ ಅಪೇಕ್ಷೆಗೆ ತಕ್ಕಂತೆ ವೃತ್ತಿಕೌಶಲ್ಯ ಪರಿಣಿತಿ ಹೊಂದಿದರೆ ಸುಲಭವಾಗಿ ಉದ್ಯೋಗಾವಕಾಶಗಳನ್ನು ಪಡೆಯಬಹುದು ಎಂದು ಗೃಹ ಹಾಗೂ ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಅವರು ಕರೆ ನೀಡಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕೌಶಲ್ಯಾಭಿವೃದ್ದಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಸಹಯೋಗದಲ್ಲಿ ಶನಿವಾರ ನಗರದ ಹುಕ್ಕೇರಿಮಠದ ಶಿವಲಿಂಗೇಶ್ವರ ಮಹಿಳಾ ಮಹಾವಿದ್ಯಾಲಯದಲ್ಲಿ ಆವರಣದಲ್ಲಿ ಆಯೋಜಿಸಿದ ಜಿಲ್ಲಾ ಮಟ್ಟದ ಉದ್ಯೋಗ ಮೇಳ ಉದ್ಘಾಟಿಸಿ ಅವರು ಮಾತನಾಡಿದರು.

ಮುಂದಿನ ದಿನಗಳಲ್ಲಿ ಪ್ರತಿ ಆರು ತಿಂಗಳಿಗೊಮ್ಮೆ ಜಿಲ್ಲಾ ಮಟ್ಟದಲ್ಲಿ ಉದ್ಯೋಗಮೇಳ ಆಯೋಜಿಸಲು ಸಲಹೆ ನೀಡಲಾಗುವುದು. ಐ.ಟಿ.ಐ., ಡಿಪ್ಲೋಮಾ ಸೇರಿದಂತೆ ಬೇರೆ ಬೇರೆ ವಿದ್ಯಾರ್ಹತೆ, ವೃತ್ತಪರ ತರಬೇತಿ ಹಾಗೂ ಸೆಕ್ಯೂರಿಟಿ ಗಾರ್ಡ್, ನರ್ಸ್, ವಾಹನ ಚಾಲಕ ಹುದ್ದೆಯಂತ ಬಹು ಬೇಡಿಕೆಯ ಉದ್ಯೋಗಾವಕಾಶ ಕುರಿತಂತೆ ಉದ್ಯೋಗ ಮೇಳ ನಡೆಸಲು ಸಲಹೆ ನೀಡಲಾಗುವುದು ಎಂದು ಹೇಳಿದರು.

ದೇಶದಲ್ಲಿ ಶೇ.45ಕ್ಕೂ ಅಧಿಕ ಪ್ರಮಾಣದಲ್ಲಿ ಯುವಸಮೂಹವಿದೆ. ವೇಗವಾದ ಆರ್ಥಿಕತೆಯ ಬೆಳವಣಿಗೆಗೆ ಅನುಗುಣವಾಗಿ ಯುವ ಶಕ್ತಿಯನ್ನು ಬಳಸಿಕೊಂಡು ದೇಶದ ಆರ್ಥಿಕತೆ ಬಲವರ್ದನೆಗೊಳಿಸಬೇಕಾಗಿದೆ. ಯುವ ಶಕ್ತಿ ವರ್ತಮಾನದ ಬದುಕಟ್ಟಿಕೊಳ್ಳಲು ಉದ್ಯೋಗಾವಕಾಶಗಳು ಸೃಷ್ಟಿಯಾಗಬೇಕು. ಹಳೆಯ ಬ್ರಿಟಿಷ್ ಮಾದರಿಯ ಆಡಳಿತ ವ್ಯವಸ್ಥೆ ಬದಲಾಗಿದೆ. ಬದಲಾದ ಆಡಳಿತ ವ್ಯವಸ್ಥೆಗೆ ತಕ್ಕಂತೆ ತಾಂತ್ರಿಕ ಜ್ಞಾನವನ್ನು ಯುವಜನಾಂಗ ಗಳಿಸುವುದರ ಮೂಲಕ ಪ್ರಸ್ತುತ ಜಾಗತಿಕ ವ್ಯವಸ್ಥೆಗೆ ತಕ್ಕಂತೆ ಉದ್ಯೋಗ ಅವಕಾಶಗಳನ್ನು ಹೊಂದಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಬದಲಾದ ಜಾಗತಿಕ ಕಾಲಘಟ್ಟಕ್ಕೆ ಅನುಗುಣವಾಗಿ ನಮ್ಮ ಕೌಶಲ್ಯಗಳು ಬದಲಾಗಬೇಕಾಗಿದೆ. ನಮ್ಮ ಶಿಕ್ಷಣ ವ್ಯವಸ್ಥೆಯು ಬದಲಾಗಬೇಕಾಗಿದೆ. ಕೌಶಲ್ಯಾಧಾರಿತ ಶಿಕ್ಷಣ ವ್ಯವಸ್ಥೆ ಜಾರಿಗೆ ಬಂದರೆ ಗ್ರಾಮೀಣ ವಿದ್ಯಾರ್ಥಿಗಳು ಉದ್ಯೋಗಾವಕಾಶ ಹೊಂದಲು ಸಾಧ್ಯವಾಗುತ್ತದೆ. ಗ್ರಾಮೀಣ ಹಾಗೂ ನಗರ ಪ್ರದೇಶಗಳ ಶಿಕ್ಷಣ ವ್ಯವಸ್ಥೆಯಲ್ಲಿ ಬಹಳ ವ್ಯತ್ಯಾಸವಿದೆ. ಇಂತಹ ಬದಲಾವಣೆ ಸಂದರ್ಭದಲ್ಲಿ ಗ್ರಾಮೀಣ ಭಾಗದ ಮಕ್ಕಳಿಗೆ ಪೈಪೋಟಿ ಕಷ್ಟವಾಗಿದೆ ಎಂದು ಹೇಳಿದರು.

ಕೈಯಲ್ಲಿನ ಗೆರೆ ಸವದರೆ ಹಣೆ ಮೇಲೆ ಗೆರೆ ಮೂಡುತ್ತದೆ. ಇಂದಿನ ಸಂದರ್ಭದಲ್ಲಿ ಕೆಲಸಮಾಡಲು ಬೇಕಾದ ಕೌಶಲ್ಯವನ್ನು ಹೊಂದುವುದರ ಮೂಲಕ ಉತ್ತಮ ಉದ್ಯೋಗ ಅವಕಾಶಗಳನ್ನು ಪಡೆಯಬಹುದು. ಹಣೆಬರಹದ ಮೇಲೆ ಬಾರಹಾಕದೆ ಪ್ರಯತ್ನಶೀಲರಾಗಿ ಯಶಸ್ಸು ಸಾಧಿಸಿ ಎಂದು ಹಾರೈಸಿದರು.

ಲೋಕಸಭಾ ಸದಸ್ಯ ಶಿವಕುಮಾರ ಉದಾಸಿ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಸತತ ಪ್ರಯತ್ನವಿದ್ದರೇ ಯಶಸ್ಸು ಕಟ್ಟಿಟ್ಟಬುತ್ತಿ. ಯಾವುದೇ ಕೆಲಸ ದೊರೆತರು ಮನಸ್ಸಿನಿಂದ ಮಾಡಬೇಕು. ಯಾವುದೇ ಕೆಲಸ ಮೇಲು-ಕೀಳು ಎಂಬ ಭಾವನೆ ಇರಬಾರದು. ಇಂದಿನ ಜಾಗತೀಕ ಕಾಲಮಾನಕ್ಕೆ ತಕ್ಕಂತೆ ಉದ್ಯೋಗಾವಕಾಶಗಳನ್ನು ಹೊಂದಲು ಕೌಶಲ್ಯಾಧಾರಿತ ಶಿಕ್ಷಣ ಕಲಿಕೆ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಪ್ರಾಥಮಿಕ ಹಂತದಲ್ಲೇ ಕೌಶಲ್ಯಾಧಾರಿತ ಪಠ್ಯಕ್ರಮ ಜಾರಿಗೊಳಿಸಲು ಚಿಂತನೆ ನಡೆದಿದೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ನೆಹರು ಓಲೇಕಾರ ಮಾತನಾಡಿ, ಯಾವುದೇ ಕೆಲಸ ಪಡೆಯಲು ನಿಮ್ಮ ವಿದ್ಯಾರ್ಹತೆಯ ಜೊತೆಗೆ ಕೌಶಲ್ಯಾಧಾರಿತ ತರಬೇತಿಗಳನ್ನು ಪಡೆಯಿರಿ. ಮೊದಲ ಹಂತದಲ್ಲಿ ಯಾವುದೇ ಕೆಲಸ ಸಿಕ್ಕರೂ ಆ ಕೆಲಸಮಾಡಲು ಸಿದ್ಧರಾಗಿ ಇದರಿಂದ ನಿಮಗೆ ವೃತ್ತಿನೈಪುಣ್ಯತೆ ದೊರೆಯುತ್ತದೆ. ಮುಂದಿನ ದಿನಗಳಲ್ಲಿ ಉನ್ನತ ಉದ್ಯೋಗ ಹೊಂದಲು ನೆರವಾಗುತ್ತದೆ ಎಂದು ಸಲಹೆ ನೀಡಿದರು.