ಜಿಲ್ಲಾ ಕೇಂದ್ರದಲ್ಲಿ ಕಿತ್ತೂರ ಚೆನ್ನಮ್ಮಾ ಸಭಾಭವನ ಮಂಜೂರಾತಿಗೆ ಪ್ರಯತ್ನ: ಗೃಹ ಸಚಿವ ಬಸವರಾಜ ಬೊಮ್ಮಾಯಿ

Share

ಹಾವೇರಿ. ಕಿತ್ತೂರು ರಾಣಿ ಚನ್ನಮಾಜಿ ಕನ್ನಡನಾಡಿನಲ್ಲಿ ಜನಿಸಿರುವುದು ಪ್ರತಿಯೊಬ್ಬ ಕನ್ನಡಿಗನೂ ಹೆಮ್ಮೆಪಡುವ ಸಂಗತಿಯಾಗಿದ್ದು, ಜಿಲ್ಲಾ ಕೇಂದ್ರದಲ್ಲಿ ಕಿತ್ತೂರ ಚೆನ್ನಮ್ಮಾ ಸಭಾಭವನ ಮಂಜೂರಾತಿಗೆ ಮುಂಬರುವ ಬಜೆಟ್‍ನಲ್ಲಿ ಪ್ರಯತ್ನ ಮಾಡುತ್ತೇನೆ ಎಂದು ಗೃಹ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.

ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾವೇರಿ ಹಾಗೂ ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದವರ ಸಹಯೋಗದಲ್ಲಿ ಶಿವಬಸವ ಕಲ್ಯಾಣ ಮಂಟಪದಲ್ಲಿ ಬುಧವಾರ ನಡೆದ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಕಿತ್ತೂರು ರಾಣಿ ಚೆನ್ನಮ್ಮ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.

ರಾಣಿ ಚನ್ನಮ್ಮಾ ದಿಟ್ಟ ಮಹಿಳೆ ಹಾಗೂ ಸ್ವಾಂತಂತ್ರ್ಯಕ್ಕಾಗಿ ಹೋರಾಡಿ ತನ್ನ ಪ್ರಾಣವನ್ನು ತ್ಯಾಗಮಾಡಿದವಳು. ಇತಿಹಾಸದಲ್ಲಿ ಹಲವಾರು ಪ್ರೇರಕ ಶಕ್ತಿಗಳಿವೆ. ಆದರೆ ಕನ್ನಡನಾಡಿನಲ್ಲಿ ಸ್ವಾಂತಂತ್ರ್ಯಾ ಪೂರ್ವ ಹಾಗೂ ನಂತರದಲ್ಲಿರುವ ಪ್ರೇರಕ ಶಕ್ತಿಯಾಗಿ ಉಳಿದಿರುವವರು ಕಿತ್ತೂರು ರಾಣಿ ಚೆನ್ನಮ್ಮಾ. ಝಾನ್ಸಿರಾಣಿ ಲಕ್ಷ್ಮೀಬಾಯಿಕ್ಕಿಂತ 40 ವರ್ಷ ಪೂರ್ವದಲ್ಲಿಯೇ ಬ್ರಿಟಿಷ್‍ರ ವಿರುದ್ಧ ಕಹಳೆ ಊದಿದ್ದಾಳೆ. ಸಂಖ್ಯಾಬಲ ಮುಖ್ಯವಲ್ಲ ಆತ್ಮಶಕ್ತಿ ಮುಖ್ಯ ಎಂದು ಜಗತ್ತಿಗೆ ತೋರಿಸಿದ್ದಾಳೆ. ಅವಳ ಸ್ವಾಭಿಮಾನ, ತನ್ನ ರಾಜ್ಯದ ಪ್ರೀತಿ, ಆತ್ಮಾಭಿಮಾನ ಮೆಚ್ಚುವಂತದ್ದು. ಪ್ರಜೆಗಳ ಭವಿಷ್ಯಕ್ಕೋಸ್ಕರ ಬ್ರೀಟಿಷರೊಂದಿಗೆ ರಾಜಿಯಾಗದೇ ಹೋರಾಟ ಮಾಡಿ ಇಂದು ಎಲ್ಲರಿಗೂ ದಾರಿದೀಪವಾಗಿದ್ದಾಳೆ ಎಂದು ಹೇಳಿದರು.

ಕಿತ್ತೂರು ಕೂಡಾ ನೆರೆಹಾವಳಿಗೆ ತುತ್ತಾಗಿರುವುದು ನೋವಿನ ಸಂಗತಿ. ಅರ್ಧ ಉತ್ತರಕರ್ನಾಟಕವೇ ನೆರೆಹಾವಳಿಗೆ ಸಿಲುಕಿ ಜನರು ಸಂಕಷ್ಟಕ್ಕೆ ಈಡಾಗಿದ್ದಾರೆ. ಸಂಕಷ್ಟರ ನೆರವಿಗಾಗಿ ಸರ್ಕಾರ ಎಲ್ಲ ತರಹದ ಪರಿಹಾರ ಕಾರ್ಯಗಳನ್ನು ಕೈಗೊಂಡಿದೆ. ಮನೆಬಿದ್ದವರಿಗೆ 5 ಲಕ್ಷ, ಒಣಬೇಸಾಯ ರೈತರಿಗೆ 16 ಸಾವಿರ, ನೀರಾವರಿಗೆ 28 ಸಾವಿರ ಹೀಗೆ ಹಣಕಾಸಿನ ಪರಿಹಾರವನ್ನು ನೀಡುತ್ತಿದೆ. ಮನೆ,ಮಠ,ಭೂಮಿ ಕಳೆದುಕೊಂಡವರಿಗೆ ಪರಿಹಾರ ಕೋಡಲು ಸಾಧ್ಯವಿದೆಯೇ ಹೊರತು ಅವರ ಪೂರ್ಣ ಬದುಕನ್ನು ಕಟ್ಟಿಕೊಡಲು ಕಷ್ಟ. ಇದಕ್ಕಾಗಿ ಎಲ್ಲರೂ ಒಟ್ಟಾಗಿ ಕೆಲಸಮಾಡಿದಾಗ ಸಾಧ್ಯವಾಗುತ್ತದೆ. ಈಲ್ಲೆಯ ಸಮಗ್ರ ಅಭಿವೃದ್ಧಿಗೆ ನಾವು ಕಾರ್ಯಗಳನ್ನು ಕೈಗೊಳ್ಳಲು ಸಮಾಜ ನೀಡಿದ ಪ್ರೀತಿ, ವಿಶ್ವಾಸ, ನಂಬಿಕೆಯೆ ಕಾರಣವಾಗಿದೆ ಎಂದು ಹೇಳಿದರು.

ಜಿಲ್ಲೆಯಲ್ಲಿ ವೈದ್ಯಕೀಯ ಕಾಲೇಜ್ ಆರಂಭಕ್ಕೆ ಮಂಜೂರಾತಿ ದೊರೆತಿದೆ. ತಜ್ಞರು ಯಾವ ಜಾಗವನ್ನು ಸೂಕ್ತ ಎಂದು ಆಯ್ಕೆ ಮಾಡುತ್ತಾರೋ ಆ ಜಾಗವನ್ನು ಒಪ್ಪಿಕೊಂಡು ವೈದ್ಯಕೀಯ ಕಾಲೇಜು ನಿರ್ಮಾಣ ಮಾಡಬೇಕು. ಶೀಘ್ರದಲ್ಲಿಯೇ ಇದು ಕಾರ್ಯಾರಂಭಗೊಳ್ಳಲಿದೆ. ವೈದ್ಯಕೀಯ ಕಾಲೇಜಿನ ಉಪಯೋಗ ಬಡರೋಗಿಗಳಿಗೆ ದೊರಕಬೇಕು ಎಂದು ಅವರು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ ಜಿಲ್ಲಾ ಪಂಚಾಯತ ಅಧ್ಯಕ್ಷ ಎಸ್.ಕೆ.ಕರಿಯಣ್ಣನವರ ಅವರು ಪಂಚಮಸಾಲಿ ಸಮಾಜದವರು ಶೈಕ್ಷಣಿಕವಾಗಿ ಬೆಳೆದು ಆರ್ಥಿಕವಾಗಿ ಸಮೃದ್ಧರಾಗಬೇಕು. ಸರ್ಕಾರದ ಯೋಜನೆಗಳ ಸೌಲಭ್ಯಗಳನ್ನು ಪಡೆದುಕೊಂಡು ಸಮಾಜದಲ್ಲಿ ಮುಂದುವರಿಯಬೇಕು. ಎಲ್ಲ ಮಕ್ಕಳಿಗೂ ಶಿಕ್ಷಣವನ್ನು ಕೊಡಿಸಬೇಕು. ವಿಶೇಷವಾಗಿ ಹೆಣ್ಣುಮಕ್ಕಳಿಗೆ ವಿದ್ಯೆಯನ್ನು ಕೊಡಿಸಿ. ಎಲ್ಲ ಹೆಣ್ಣು ಮಕ್ಕಳು ವೀರರಾಣಿ ಚನ್ನಮ್ಮಳಂತೆ ಆಗಲಿ ಎಂದು ಹೇಳಿದರು.

ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠದ ವಚನಾನಂದ ಮಹಾಸ್ವಾಮಿ ಹಾಗೂ ಹುಕ್ಕೇರಿಮಠದ ಸದಾಶಿವ ಮಹಾಸ್ವಾಮಿಗಳು ಸಾನಿಧ್ಯವಹಿಸಿ ಆಶಿರ್ವಚನ ನೀಡಿದರು. ವಿಧಾನಸಭೆಯ ಶಾಸಕ ವಿರುಪಾಕ್ಷಪ್ಪ ಬಳ್ಳಾರಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶಿವಕುಮಾರ ಸಂಗೂರ, ಲೋಕಸಭಾ ಸದಸ್ಯ ಮಂಜುನಾಥ ಕೊಣ್ಣುರು, ಜಿಲ್ಲಾಧಿಕಾರಿ ಕೃಷ್ಣ ಭಾಜಪೇಯಿ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಕೆ.ಜೆ.ದೇವರಾಜ್, ಜಿಲ್ಲಾ ಪಂಚಾಯತ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ರಮೇಶ ದೇಸಾಯಿ, ತಹಶೀಲ್ದಾರ ಶಂಕರ ಬಾರ್ಕಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕಿ ಶಶಿಕಲಾ ಹುಡೇದ, ನಾಗರಾಜ ನಡುವಿನಮಠ, ಎಸ್.ಆರ್. ಅಂಗಡಿ, ಭಾರತಿ ಜಂಗ್ಲಿ, ರಾಜಣ್ಣ ಹಾವೇರಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.