ಕೊರೋನಾ ನಿಭಾಯಿಸಲು ಮುನ್ನೆಚ್ಚರಿಕೆಯಾಗಿ ವೈದ್ಯಕೀಯ ಸೌಲಭ್ಯದೊಂದಿಗೆ ಸಿದ್ಧವಾಗಿರಿ: ಕೃಷಿ ಸಚಿವ ಬಿ.ಸಿ.ಪಾಟೀಲ

Share

ಹಾವೇರಿ: ಕೊರೋನಾ ವೈರಸ್‍ನ ಯಾವುದೇ ವಿಪತ್ತುಗಳನ್ನು ನಿಭಾಯಿಸಲು ವೈದ್ಯಕೀಯ ಸೌಲಭ್ಯಗಳೊಂದಿಗೆ ಸಿದ್ಧವಾಗಿರಿ. ಜನರಿಗೆ ಆತಂಕ ನಿವಾರಿಸಲು ಜಾಗೃತಿ ಮೂಡಿಸಿ ಎಂದು ಜಿಲ್ಲಾಡಳಿತಕ್ಕೆ ಕೃಷಿ ಸಚಿವರಾದ ಬಿ.ಸಿ.ಪಾಟೀಲ ಅವರು ಸಲಹೆ ನೀಡಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ಕೊರೋನಾ (ಕೋವಿಡ್ -19) ವೈರಸ್ ತಡೆ ಕುರಿತಂತೆ ಅಧಿಕಾರಿಗಳ ಸಭೆ ನಡೆಸಿದ ನಡೆಸಿದ ಅವರು ಸದ್ಯದ ಪರಿಸ್ಥಿತಿಯನ್ನು ಅವಲೋಕಿಸಿದಾಗ ಜಿಲ್ಲೆಯಲ್ಲಿ ಕೊರೋನಾ ಸೋಂಕು ಬಾದಿತವಾಗಿಲ್ಲ. ಆದಾಗ್ಯೂ ಯುದ್ಧೋಪಾದಿಯಲ್ಲಿ ಎಲ್ಲ ಮುಂಜಾಗ್ರತೆ ಕೈಗೊಳ್ಳುವಂತೆ ಸೂಚಿಸಿದರು.

ಐಸೋಲೆಷನ್ ವಾರ್ಡ್ : ಜಿಲ್ಲಾ ಆಸ್ಪತ್ರೆ ಹಾಗೂ ತಾಲೂಕಾ ಆಸ್ಪತ್ರೆಗಳಲ್ಲಿ ಈಗಾಗಲೇ ಸಿದ್ಧಮಾಡಿಕೊಂಡಿರುವ ಐಸೋಲೆಷನ್ ವಾರ್ಡ್‍ಗಳ ಜೊತೆಗೆ ಹೆಚ್ಚುವರಿಯಾಗಿ ಕೆರೆಮತ್ತಿಹಳ್ಳಿಯ ಹಳೆಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯನ್ನು ಕೊರೋನಾ ಐಸೋಲೇಷನ್ ವಾರ್ಡ್ ಆಗಿ ಪರಿವರ್ತಿಸಿ ಸಿದ್ಧಮಾಡಿಕೊಳ್ಳಿ ಹಾಗೂ ನಗರದ ಹೊರವಲಯಗಳಲ್ಲಿರುವ ಮೊರಾರ್ಜಿ ಶಾಲೆ ಅಥವಾ ವಿದ್ಯಾರ್ಥಿ ನಿಲಯಗಳನ್ನು ಗುರುತಿಸಿ ಐಸೋಲೇಷನ್ ವಾರ್ಡ್‍ಗಳನ್ನಾಗಿ ಪರಿವರ್ತಿಸಬೇಕು. ಈ ವಾರ್ಡ್‍ಗಳಲ್ಲಿ ಅಗತ್ಯ ವೈದ್ಯಕೀಯ ಉಪಕರಣಗಳ ಸೌಲಭ್ಯಗಳೊಂದಿಗೆ ಕೊರೋನಾ ಚಿಕಿತ್ಸೆಗೆ ಸಿದ್ಧವಾಗಿ ಇಟ್ಟುಕೊಳ್ಳಬೇಕು ಎಂದು ಸೂಚಿಸಿದರು.

ಖಾಸಗಿ ವೈದ್ಯರ ಸೇವೆ : ಸರ್ಕಾರಿ ವೈದ್ಯರೊಂದಿಗೆ ಖಾಸಗಿ ವೈದ್ಯರ ಸೇವೆ ಅವಶ್ಯಕತೆ ಇದೆ. ಇಂದಿನಿಂದಲೇ ಅರೇವೈದ್ಯಕೀಯ ಸಿಬ್ಬಂದಿಯನ್ನು ಹೊರಗುತ್ತಿಗೆ ಮೇಲೆ ಮಾಡಿಕೊಳ್ಳಲು ಕ್ರಮತೆಗೆದುಕೊಳ್ಳಿ. ಹಾಗೂ ಖಾಸಗಿ ವೈದ್ಯರು ಹಾಗೂ ಅರೇವೈದ್ಯಕೀಯ ಸಿಬ್ಬಂದಿ ಸ್ವಯಂ ಪ್ರೇರಣೆಯಿಂದ ಕೊರೋನಾ ಸೋಂಕಿತರ ಸೇವೆಗೆ ಮುಂದಾಗುವಂತೆ ಮನವಿಮಾಡಿಕೊಂಡು ಅವರ ಸೇವೆಯನ್ನು ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಗೃಹ ಪ್ರತ್ಯೇಕತೆ : ವಿದೇಶದಿಂದ ಬಂದಿರುವ ವ್ಯಕ್ತಿಗಳನ್ನು ತಪಾಸಗಣೆಗೊಳಪಡಿಸಿ ಯಾವುದೇ ಸೋಂಕಿಲ್ಲದಿದ್ದರೂ ಗೃಹಪ್ರತ್ಯೇಕತೆಯಲ್ಲಿರಿಸಿ (ಹೋಂ ಕ್ವಾರೆಂಟೈನ್) ನಿಗಾವಹಿಸಲಾಗಿದೆ. ಈ ವ್ಯಕ್ತಿಗಳ ಪೈಕಿ ಕೆಲವರು ಮನೆಯಿಂದ ಹೊರಬಂದು ಸುತ್ತಾಡದಂತೆ ಕಟ್ಟೆಚ್ಚರವಹಿಸಬೇಕು. ಪಾಳೆಯದ ಪ್ರಕಾರ ಪೊಲೀಸರನ್ನು ನಿಯೋಜಿಸಿ ಕಾವಲುಕಾಯಬೇಕು. ನೆರೆಹೊರೆಯವರಿಗೂ ಈ ವ್ಯಕ್ತಿಗಳು ಹಾಗೂ ಕುಟುಂಬದವರು ಹೊರಬರದಂತೆ ಕಾಯ್ದುಕೊಳ್ಳುವಂತೆ ನೋಡಬೇಕು. ಗೃಹಪ್ರತ್ಯೇಕತೆಯಲ್ಲಿರುವ ಜಿಲ್ಲೆಯ 159 ಜನರ ಪಟ್ಟಿಯನ್ನು ಮಾಧ್ಯಮದಲ್ಲಿ ಪ್ರಕಟಿಸುವಂತೆ ಸಲಹೆ ನೀಡಿದರು. ಹಾಗೂ ಹೊರರಾಜ್ಯಗಳಿಂದ ಜಿಲ್ಲೆಗೆ ಬಂದಿರುವವರ ಮಾಹಿತಿಯನ್ನು ಪಡೆದು ಸಾಮಾನ್ಯ ವೈದ್ಯಕೀಯ ತಪಾಸಣೆಗೆ ಒಳಪಡಿಸುವಂತೆ ಸಲಹೆ ನೀಡಿದರು.

ಪ್ರಸ್ತಾವನೆ : ಮಾಸ್ಕ್‍ಗಳು, ಸ್ಯಾನಿಟೈಸರ್, ವೆಂಟಿಲೇಟರ್, ಹಾಸಿಗೆ , ವೈದ್ಯಕೀಯ ಉಪಕರಣಳು ಸೇರಿದಂತೆ ಜಿಲ್ಲೆಗೆ ಅವಶ್ಯವಿರುವ ಎಲ್ಲ ವೈದ್ಯಕೀಯ ಉಪಕರಣಗಳ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಿ ಕೊರೋನಾ ನಿಯಂತ್ರಣಕ್ಕೆ ಯಾವುದೇ ಅನುದಾನದ ಕೊರೆಯಿಲ್ಲ. ಯಾವುದೇ ನಿರ್ಭಂದವಿಲ್ಲ. ಈಲ್ಲಾ ಹಂತದಲ್ಲೇ ಎಲ್ಲವನ್ನೂ ಖರೀದಿಮಾಡಲು ವಿಪತ್ತು ನಿಧಿಯಿಂದ ಅವಕಾಶಕಲ್ಪಿಸಲಾಗಿದೆ. ಅವಶ್ಯಕತೆಗೆ ತಕ್ಕಂತೆ ಖರೀದಿಸಿ ಎಂದು ಸಲಹೆ ನೀಡಿದರು.

ಕಂಟ್ರೋಲ್ ರೂಮ್ : ಸಾರ್ವಜನಿಕರು ಮಾಹಿತಿ ಪಡೆದುಕೊಳ್ಳಲು ಹಾಗೂ ಮಾಹಿತಿ ನೀಡಲು ಅನುಕೂಲವಾಗುವಂತೆ ಜಿಲ್ಲಾ ಹಾಗೂ ಪ್ರತಿ ತಾಲೂಕಾ ಮಟ್ಟದಲ್ಲಿ ಸ್ಥಾಪಿಸಿರುವ ಸಹಾಯವಾಣಿಗಳನ್ನು ಬಲಪಡಿಸಬೇಕು. ಗ್ರಾಮ ಮಟ್ಟದಲ್ಲಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಹಾಗೂ ಅಧ್ಯಕ್ಷ, ಉಪಾಧ್ಯಕ್ಷರ ನೇತೃತ್ವದಲ್ಲಿ ಸಮಿತಿಗಳನ್ನು ರಚಿಸಿ ಹೋಂ ಕ್ವಾರೆಂಟೈನ್ ಮೇಲೆ ನಿಗಾ, ಗ್ರಾಮ ಸ್ವಚ್ಛತೆ, ಹೊರಗಿನಿಂದ ಬಂದವರ ಮಾಹಿತಿ ಹಾಗೂ ಕರೋನಾ ಜಾಗೃತಿ ಕುರಿತಂತೆ ಕ್ರಮವಹಿಸುವಂತೆ ಸೂಚಿಸಿದರು.
ಜಾಗೃತಿ : ಜಿಲ್ಲೆಯ ಎಲ್ಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರತಿ ಹಳ್ಳಿ ಹಳ್ಳಿಗಲ್ಲೂ ಮೈಕಿಂಗ್ ಮೂಲಕ ಜಾಗೃತಿ ಮೂಡಿಸಬೇಕು. ದಿನದ 24 ತಾಸು ಮೈಕಿಂಗ್ ವ್ಯವಸ್ಥೆ ಕೈಗೊಂಡು ಕೊರೋನಾ ವೈರಸ್ಸಿನ ಅಪಾಯದ ಬಗ್ಗೆ ವಿವರಿಸಿ. ಸಾರ್ವಜನಿಕರು ವಹಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಅರಿವು ಮೂಡಿಸಿ ಸಾಮಾಜಿಕ ಅಂತರಕಾಯ್ದುಕೊಳ್ಳುವಿಕೆ ತಿಳುವಳಿಕೆ ನೀಡಿ, ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡು ಸಾರ್ವಜನಿಕರಿಗೆ ಅರಿವು ಮೂಡಿಸಲು ಕ್ರಮವಹಿಸಿ ಎಂದು ಸಲಹೆ ನೀಡಿದರು.

ರೇಷ್ಮೆ ಮಾರುಕಟ್ಟೆಗೆ ಅನುಮತಿ, ದೈನಂದಿನ ಸಾಮಗ್ರಿಗಳ ಸಾಗಾಣಿಕೆಗೆ ವಾಹನಗಳಿಗೆ ಅನುಮತಿ ನೀಡಲು ಆಯಾ ತಹಶೀಲ್ದಾರಗಳಿಗೆ ಅಧಿಕಾರ ನೀಡುವುದು, ಎಲ್ಲ ಅಧಿಕಾರಿಗಳ ಸೇವೆಯನ್ನು ತುರ್ತು ಸಂದರ್ಭದಲ್ಲಿ ಬಳಸಿಕೊಳ್ಳುವುದು, ಎರಡು ತಿಂಗಳು ಆಹಾರ ಸಾಮಗ್ರಿಗಳನ್ನು ಪಡಿತರ ವ್ಯವಸ್ಥೆಯಲ್ಲಿ ವಿತರಿಸಲು ಕ್ರಮ, ಸ್ವಯಂ ಸೇವಾ ಸಂಸ್ಥೆಗಳ ಸೇವೆ ಬಳಕೆ, ಯಾವುದೇ ನಿರ್ಭಂಧವಿಲ್ಲದೆ ವೈದ್ಯಕೀಯ ಸಿಬ್ಬಂದಿಗೆ, ಪೊಲೀಸರಿಗೆ ಹಾಗೂ ಪೌರ ಕಾರ್ಮಿಕರಿಗೆ ಸುರಕ್ಷಾ ಸೌಲಭ್ಯಗಳ ವಿತರಣೆಗೆ ಕ್ರಮವಹಿಸಲು ಸಲಹೆ ನೀಡಿದರು.

ಕೊರೋನಾ ವೈರಸ್ ನಿಯಂತ್ರಣಕ್ಕೆ ಜಿಲ್ಲಾಡಳಿತ ಕೈಗೊಂಡಿರುವ ಪೂರ್ವ ಸಿದ್ಧತೆಗಳ ಕುರಿತಂತೆ ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ವಿವರಿಸಿದರು. ಶಾಸಕರಾದ ನೆಹರು ಚ.ಓಲೇಕಾರ, ವಿರುಪಾಕ್ಷಪ್ಪ ಬಳ್ಳಾರಿ, ಅರುಣಕುಮಾರ ಗುತ್ತೂರ ಅವರು ಕೊರೋನಾ ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕುರಿತಂತೆ ಅಧಿಕಾರಿಗಳಿಗೆ ಸಲಹೆ ನೀಡಿದರು.

ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಜಿ.ದೇವರಾಜ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ರಮೇಶ ದೇಸಾಯಿ, ಜಿಲ್ಲಾ ಮಟ್ಟದ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.