ಕೃಷಿ ಅಧಿಕಾರಿಗಳ ದಾಳಿ: ಸುಮಾರು 6 ಕೋಟಿ ಮೌಲ್ಯದ ನಕಲಿ ಬಿಡಿ ಬೀಜ ವಶ
ಹಾವೇರಿ: ನಕಲಿ ಬಿಡಿ ಬೀಜ ದಾಸ್ತಾನು ಮಳಿಗೆ ಮೇಲೆ ಕೃಷಿ ವಿಚಕ್ಷಣಾ ತಂಡ ದಾಳಿ ನಡೆಸಿ ಸುಮಾರು 6 ಕೋಟಿ ರೂ. ಮೌಲ್ಯದ ಬಿಡಿ ಬೀಜಗಳನ್ನು ವಶ ಪಡೆದುಕೊಂಡಿದೆ.
ಗುರುವಾರ ರಾತ್ರಿ ಜಿಲ್ಲೆ ಬ್ಯಾಡಗಿ ಪಟ್ಟಣದಲ್ಲಿ, ಹರಿಪ್ರಸಾದ್ ಎಂಬವರಿಗೆ ಸೇರಿದ ಸೂರ್ಯ ಕೋಲ್ಡ್ ಸ್ಟೋರೇಜ್ ನಲ್ಲಿ ನಕಲಿ ಬೀಜ ಸಂಗ್ರಹಿಸಿದ್ದಾರೆ ಎಂಬ ಮಾಹಿತಿ ಮೇರೆಗೆ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಬಿ. ಮಂಜುನಾಥ್, ಸಿ.ಪಿ.ಐ ಭಾಗ್ಯವತಿ ನೇತೃತ್ವದ ಅಧಿಕಾರಿಗಳ ತಂಡ ದಾಳಿ ನಡೆಸಿ, ರೈತರಿಗೆ ವಿತರಿಸಲು ಸಿದ್ಧವಾಗಿದ್ದ ಪ್ಯಾಕೆಟ್ ಇಲ್ಲದ ಸುಮಾರು 3 ಕೋಟಿ ಮೌಲ್ಯದ 295 ಟನ್ ಅಷ್ಟು ನಕಲಿ ಮೆಕ್ಕೆಜೋಳ ಬಿತ್ತನೆ ಬೀಜ ಹಾಗೂ ಛತ್ರ ಗ್ರಾಮದ ವಕ್ರತುಂಡ ಕೋಲ್ಡ್ ಸ್ಟೋರೆಜ್ ನಲ್ಲಿ ಇರಿಸಲಾಗಿದ್ದ ಸುಮಾರು 3 ಕೋಟಿ ಮೌಲ್ಯದ 280 ಟನ್ ನಕಲಿ ಬಿಡಿ ಬೀಜಗಳನ್ನು ವಶಪಡಿಸಿಕೊಂಡಿದ್ದಾರೆ.
ಈ ಸಂಬಂಧ ಬ್ಯಾಡಗಿ ಪೊಲೀಸ್ ಠಾಣೆ ಹಾಗೂ ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲಾಗಿದೆ.