ರಾಜ್ಯದ ನೆರೆ ಪರಿಹಾರಕ್ಕೆ ಕೇಂದ್ರ ಸರಕಾರದಿಂದ ಸಂಪೂರ್ಣ ಸಹಕಾರ: ಸಚಿವ ಪ್ರಹ್ಲಾದ ಜೋಶಿ

Share

ಹಾವೇರಿ: ಕೇಂದ್ರ ಸರಕಾರ ರಾಜ್ಯದಲ್ಲಿ ಅತಿವೃಷ್ಠಿ ಹಾಗೂ ಪ್ರವಾಹ ಪರಿಹಾರ ಕಾರ್ಯಗಳಿಗೆ ರಾಜ್ಯ ಸರಕಾರಕ್ಕೆ ಸಂಪೂರ್ಣ ನೆರವನ್ನು ನೀಡಲಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರ, ಕಲ್ಲಿದ್ದಲು ಹಾಗೂ ಗಣಿ ಸಚಿವ ಪ್ರಹ್ಲಾದ ಜೋಶಿ ತಿಳಿಸಿದರು.

ಜಿಲ್ಲೆಯ ಶಿಗ್ಗಾವಿ ತಾಲೂಕಿನ ನಾಗನೂರ ಕೆರೆ ಹಾನಿ ಪ್ರದೇಶ ಹಾಗೂ ವರದಾ ನದಿಯಿಂದ ಹಾನಿಯಾಗಿರುವ ಸವಣೂರ ತಾಲೂಕಿನ ಕುಣಿಮೆಳ್ಳಿಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ ಪರಿಹಾರ ಕೇಂದ್ರ ಹಾಗೂ ನದಿ ಪ್ರವಾಹದಿಂದ ಹಾಳಾಗಿರುವ ಸೇತುವೆ, ಬೆಳೆಹಾನಿ ಹಾಗೂ ಮನೆಗಳನ್ನು ವೀಕ್ಷಿಸಿ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.

ಹಾವೇರಿ ಜಿಲ್ಲೆ ಸೇರಿದಂತೆ ರಾಜ್ಯದ 17 ಜಿಲ್ಲೆಗಳಲ್ಲಿ ನೆರೆ ಹಾಗೂ ಅತಿವೃಷ್ಠಿಯಿಂದ ಅಪಾರ ಹಾನಿಯಾಗಿದ್ದು, ತುರ್ತು ಪರಿಹಾರಕ್ಕೆ ಪ್ರಥಮ ಕಂತಿನಲ್ಲಿ 10 ಸಾವಿರ ಕೋಟಿ ನೀಡಬೇಕು. ತತಕ್ಷಣ ಮೂರು ಸಾವಿರ ಕೋಟಿ ರೂ. ಬಿಡುಗಡೆ ಮಾಡಬೇಕು ಎಂದು ರಾಜ್ಯ ಸರಕಾರ ಕೇಂದ್ರಕ್ಕೆ ಕೋರಿದೆ. ಸಂತ್ರಸ್ಥರಾಗಿರುವ ಜನರ ಬದುಕು ಹಾಗೂ ಮೂಲಭೂತ ಸೌಕರ್ಯ ಒಳಗೊಂಡಂತೆ ಪರಿಹಾರ ಕಾರ್ಯಕ್ಕಾಗಿ ಅಗತ್ಯ ನೆರವು ಒದಗಿಸಲಾಗುವುದು ಎಂದು ಹೇಳಿದರು.

ಪ್ರವಾಹ ಕುರಿತಂತೆ ಕೇಂದ್ರದೊಂದಿಗೆ ಚರ್ಚಿಸಲು ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಆಗಸ್ಟ್ 16 ರಂದು ದೆಹಲಿಗೆ ಆಗಮಿಸಲಿದ್ದು, ರಾಜ್ಯದ ಮುಖ್ಯಮಂತ್ರಿಯಾಗಿ ಒನ್‍ಮ್ಯಾನ್ ಆರ್ಮಿಯಾಗಿ ಪ್ರವಾಹ ಪರಿಹಾರ ಕಾರ್ಯಗಳಲ್ಲಿ ತೊಡಗಿಕೊಂಡಿದ್ದಾರೆ ಎಂದರು.

ನಮ್ಮ ಎಲ್ಲ ಶಾಸಕರು, ಸಂಸದರು ನೆರವು ಒದಗಿಸಿದ್ದು, ಸಚಿವರಿಲ್ಲದ ಕಾರಣ ನೆರೆ ಪರಿಹಾರ ಕಾರ್ಯಕ್ಕೆ ಯಾವುದೇ ತೊಂದರೆಯಾಗಿಲ್ಲ. ಅಧಿಕಾರಿಗಳು ಸಮರ್ಥವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಹೇಳಿದರು.

ಸಂತ್ರಸ್ಥರಿಗೆ ತತಕ್ಷಣ ಪರಿಹಾರ ಒದಗಿಸುವಂತೆ ಈಗಾಗಲೇ ರಾಜ್ಯ ಸರಕಾರ ಅಧಿಕಾರಿಗಳಿಗೆ ಸೂಚನೆ ನೀಡಿದೆ ಎಂದು ಅವರು ತಿಳಿಸಿದರು.

ಪ್ರವಾಹದಿಂದ ನೊಂದ ಜನರಿಗೆ ಪ್ರಮುಖವಾಗಿ ತಾಡಪಲ್ ಹಾಗೂ ಸೊಳ್ಳೆ ಪರದೆಗಳನ್ನು ನೀಡುವುದು ಅಗತ್ಯವಾಗಿದೆ. ಸ್ಥಳೀಯ ಶಾಸಕ ಬಸವರಾಜ ಬೊಮ್ಮಾಯಿ ಅವರ ಬೇಡಿಕೆಯಿಂತೆ ಐಓಎಸ್ ಕಂಪನಿಯ ತಾಡಪಲ್‍ಗಳನ್ನು ಪೂರೈಸಲಾಗುತ್ತಿದೆ. ಈಗಾಗಲೇ ಸ್ವಯಂ ಸಂಸ್ಥೆಗಳಿಗೆ ತಾಡಪಲ್‍ಗಳನ್ನು ನೀಡಲು ಸೂಚಿಸಲಾಗಿದೆ ಎಂದು ಹೇಳಿದರು.

ಸಂತ್ರಸ್ಥರಿಗೆ ಸಾಂತ್ವಾನ: ಸವಣೂರ ತಾಲೂಕಿನ ಕುಣಿಮೆಳ್ಳಿಹಳ್ಳಿಯ ವರದಾ ನದಿ ಪ್ರವಾಹ ಸಂತ್ರಸ್ಥರ ಪರಿಹಾರ ಕೇಂದ್ರಕ್ಕೆ ತೆರಳಿ ಜನರಿಗೆ ಹಣ್ಣು ವಿತರಿಸಿ ಸಾಂತ್ವಾನ ಹೇಳಿದರು.

ಸ್ಥಳಾಂತರಿಸಿ ಶಾಶ್ವತ ಮನೆ ಬೇಡಿಕೆ ಸಲ್ಲಿಸಿದ ಸಂತ್ರಸ್ಥರನ್ನು ಉದ್ದೇಶಿಸಿ ಮಾತನಾಡಿದ ಸಚಿವರು ಈಗಾಗಲೇ ಗ್ರಾಮ ಸ್ಥಳಾಂತರಿಸಿ ಮನೆಗಳನ್ನು ಹಂಚಿಕೆ ಮಾಡಲಾಗಿದೆ. ತಾವು ಅಲ್ಲಿಗೆ ಸ್ಥಳಾಂತರಗೊಳ್ಳಬೇಕು. ನಿಮ್ಮ ಕುಟುಂಬ ವಿಭಾಗವಾಗಿ ಹೆಚ್ಚು ಕುಟುಂಬಗಳಲ್ಲಿ ಮತ್ತೊಮ್ಮೆ ಸರ್ವೇಮಾಡಿ ಪ್ರತಿಯೊಬ್ಬರಿಗೂ ಮನೆಗಳನ್ನು ನೀಡಲಾಗುವುದು. ಎಲ್ಲರೂ ಸುರಕ್ಷಿತ ಸ್ಥಳಕ್ಕೆ ತೆರಬೇಕು. ಈಗಾಗಲೇ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇವೆ. ಜಿಪಿಎಸ್ ಮೂಲಕ ಮನೆ ವಿವರವನ್ನು ಸಂಗ್ರಹಿಸಿ ಅಗತ್ಯ ಕ್ರಮಕೈಗೊಳ್ಳಲಿದ್ದಾರೆ. ಮಾರ್ಗಸೂಚಿಯಂತೆ ಸಂತ್ರಸ್ಥರಿಗೆ ಪರಿಹಾರ ನೀಡಲಾಗುವುದು ಎಂದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಜಿಲ್ಲೆಯ ಅತಿವೃಷ್ಠಿ ಹಾಗೂ ನೆರೆಹಾನಿ ಕುರಿತಂತೆ ಕೇಂದ್ರ ಸಚಿವರಿಗೆ ಮಾಹಿತಿ ನೀಡಿದರು. ಜಿ.ಪಂ.ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಲೀಲಾವತಿ, ಸವಣೂರ ಉಪ ವಿಭಾಗಾಧಿಕಾರಿ ಹರ್ಷಲ್ ನಾರಾಯಣ ಬೋಯಾರ್ ಸೇರಿದಂತೆ ಇತರರು ಇದ್ದರು.