ಒಂದೇ ಕುಟುಂಬದ ನಾಲ್ವರನ್ನು ಬಲಿ ಪಡೆದ ಕೊರೊನಾ

Share

ಧಾರವಾಡ, ಜೂನ್ 5: ಧಾರವಾಡ ಜಿಲ್ಲೆಯಲ್ಲಿ ಕಳೆದ 10 ದಿನಗಳ ಅಂತರದಲ್ಲಿ ಒಂದೇ ಕುಟುಂಬದ ನಾಲ್ವರು ಕೊರೊನಾಗೆ ಬಲಿಯಾಗಿದ್ದಾರೆ. ಕುಂದಗೋಳ ತಾಲೂಕಿನ ಚಿಕ್ಕಗುಂಜಳ ಗ್ರಾಮದ ಒಂದೇ ಕುಟುಂಬದ ಮೂವರು ಸಹೋದರರು ಹಾಗೂ ತಾಯಿ ಮೃತಪಟ್ಟಿದ್ದಾರೆ. ಇದೇ ಕುಟುಂಬದ 80 ವರ್ಷದ ನಿವೃತ್ತ ಶಿಕ್ಷಕರಿಗೆ ಮೊದಲು ಕೊರೊನಾ ಕಾಣಿಸಿಕೊಂಡಿತ್ತು. ಬಳಿಕ ಇವರ ಪತ್ನಿ ಶಾಂತಮ್ಮ ಉಸಿರಾಟದ ತೊಂದರೆಯಿಂದ ಕೋವಿಡ್​ಗೆ ಬಲಿಯಾದರು.

ನಂತರ ಮನೆಯ ಹಿರಿಯ ಮಗ ಮಂಜುನಾಥ ಹಾಗೂ ಇಬ್ಬರು ಕಿರಿಯ ಸಹೋದರರಾದ ಅರವಿಂದ ಹಾಗೂ ಸುರೇಶ ಸಹ ಕೋವಿಡ್​ನಿಂದ ಸಾವನ್ನಪ್ಪಿದ್ದಾರೆ. ತಾಯಿ ಹಾಗೂ ಮೂವರು ಮಕ್ಕಳು ಮೃತಪಟ್ಟಿದ್ದು ತಂದೆ ಇನ್ನೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮನೆಯ ನಾಲ್ವರನ್ನು ಕಳೆದುಕೊಂಡ ಕುಟುಂಬಕ್ಕೆ ದಿಕ್ಕು ತೋಚದಂತಾಗಿದೆ.