ಅವಳಿನಗರದ ರೌಡಿಗಳಿಗೆ ಪೊಲೀಸ್‌ರ ಶಾಕ್!

Share

ಹುಬ್ಬಳ್ಳಿ, ಜುಲೈ 13: ನಗರದ ಹುಬ್ಬಳ್ಳಿ ಉತ್ತರ, ದಕ್ಷಿಣ ಹಾಗೂ ಧಾರವಾಡ ಎಸಿಪಿ ವ್ಯಾಪ್ತಿಯ ಪೊಲೀಸರಿಂದ ಏಕಕಾಲಕ್ಕೆ ದಾಳಿ ಮಾಡಲಾಗಿದೆ. ಹುಬ್ಬಳ್ಳಿ ಧಾರವಾಡ ಕಮೀಶ್ನರೇಟ್ ವ್ಯಾಪ್ತಿಯಲ್ಲಿ ಪೊಲೀಸರು 600ಕ್ಕೂ ಹೆಚ್ಚು ರೌಡಿಶೀಟರ್‌ಗಳ ಮನೆ ಮೇಲೆ ದಾಳಿ ನಡೆಸಿ ದೊಡ್ಡ ಮಟ್ಟದ ಕಾರ್ಯಾಚರಣೆಮಾಡಲಾಗಿದೆ .

ಅಪರಾಧ ಕೃತ್ಯ ಹೆಚ್ಚಳವಾಗುತ್ತಿದ್ದ ಹಿನ್ನೆಲೆಯಲ್ಲಿ ಮೀಟರ್ ಬಡ್ಡಿ ದಂಧೆ, ವೈಯಕ್ತಿಕ ದ್ವೇಷಕ್ಕಾಗಿ ಹಲ್ಲೆ ಮುಂತಾದವುಗಳನ್ನು ಅತಿ ಗಂಭೀರವಾಗಿ ಪರಿಗಣಿಸಿರುವ ಪೊಲೀಸ್ ಆಯುಕ್ತ ಲಾಭೂರಾಮ್, ಡಿಸಿಪಿಗಳೊಂದಿಗೆ ಸಭೆ ನಡೆಸಿ ಅಪರಾಧ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಮುಂದಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಎಸಿಪಿಗಳಾದ ವಿನೋದ ಮುಕ್ತೆದಾರ, ಆರ್.ಕೆ ಪಾಟೀಲ ಹಾಗೂ ಅನುಷಾ ಮಾರ್ಗದರ್ಶನದಲ್ಲಿ ದಾಳಿ ನಡೆಸಿದೆ.

ಉತ್ತರ ವಿಭಾಗದಲ್ಲೇ ಸುಮಾರು 250ಕ್ಕೂ ಅಧಿಕ ರೌಡಿಗಳ ಮನೆಗಳ ಮೇಲೆ ದಾಳಿ ನಡೆಸಿದ್ದು ಕೆಲವೆಡೆ ಮಾರಕಾಸ್ತ್ರಗಳು, ಲಾಂಗ್ ಪತ್ತೆಯಾಗಿದ್ದು, ಕಮರಿಪೇಟೆ, ಕೇಶ್ವಾಪುರದಲ್ಲಿ ಎರಡು ಪ್ರಕರಣ ದಾಖಲಿಸಲಾಗಿದೆ. ಕೇಶ್ವಾಪುರ ಠಾಣೆ ವ್ಯಾಪ್ತಿಯಲ್ಲಿ ಎಸಿಪಿ ಮುಕ್ತೆದಾರ, ಇನ್ಸಪೆಕ್ಟರ್ ಜಗದೀಶ ಹಂಚಿನಾಳ ನೇತ್ರತ್ವದಲ್ಲಿ 21 ರೌಡಿಗಳ ಮನೆ ಮೇಲೆ ದಾಳಿ ನಡೆದಿದೆ ಎಂದು ತಿಳಿದುಬಂದಿದೆ.

ದಕ್ಷಿಣ ವಿಭಾಗದಲ್ಲೂ ಎಲ್ಲ ಠಾಣೆಗಳ ವ್ಯಾಪ್ತಿಯಲ್ಲಿ ಸುಮಾರು 250 ಕ್ರಿಮಿನಲ್ ಹಿನ್ನೆಲೆ ಉಳ್ಳವರ ಮನೆ ಮೇಲೆ ದಾಳಿ ನಡೆಸಿದ್ದು, ಹಳೇಹುಬ್ಬಳ್ಳಿ, ಘಂಟಿಕೇರಿ ಮುಂತಾದೆಡೆ ಮಾರಕಾಸ್ತ್ರಗಳು ಸಿಕ್ಕಿದ್ದು, ಸುಮಾರು 7ಕ್ಕೂ ಹೆಚ್ಚು ಪ್ರಕರಣ ದಾಖಲಾಗಿದೆ ಎಂದು ತಿಳಿದುಬಂದಿದೆ.

ಧಾರವಾಡ ವಿಭಾಗ ವ್ಯಾಪ್ತಿಯಲ್ಲಿ ಇನ್ಸಪೆಕ್ಟರ್ ಗಳಾದ ಸಂಗಮೇಶ ದಿಡಿಗನಾಳ, ರಮೇಶ ಹೂಗಾರ, ಬಸಾಪುರ ಮುಂತಾದವರು ಠಾಣೆ ಹದ್ದಿನಲ್ಲಿ ದಾಳಿ ಮಾಡಿದ್ದು, ನೂರಕ್ಕೂ ಹೆಚ್ಚು ರೌಡಿಗಳ ಮನೆ ಶೋಧಿಸಲಾಗಿದೆ. ಪ್ರೂಟ್ ಇರ್ಪಾನನ್ ಕಾನಕಾ ಸೇರಿದಂತೆ ಹಲವೆಡೆ ಶೋಧ ನಡೆಸಿದ್ದು, ಸಂಜೆಯವರೆಗೂ ಈ ಕಾರ್ಯಾಚರಣೆ ಮುಂದುವರಿಯಲಿದೆ ಎನ್ನಲಾಗಿದೆ.