ಎಟಿಎಮ್​ಗೆ ಹೋಗಿದ್ದ ಯುವಕನ ಮೇಲೆ ಪೊಲೀಸ್​ ದರ್ಪ

Share

ಲಾಕ್​ಡೌನ್​ ನಿಯಮ ಉಲ್ಲಂಘಿಸಿದ್ದಾನೆ ಎಂದು ಆರೋಪಿಸಿ ಯುವಕನಿಗೆ  ಪಿಎಸ್​ಐ ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಗಂಭೀರವಾಗಿ ಗಾಯಗೊಂಡಿರುವ ಯುವಕ ಕಿಮ್ಸ್​ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಹುಬ್ಬಳ್ಳಿ , ಮೇ 29: ಅಗತ್ಯ ವಸ್ತು ಖರೀದಿಸಲು ಎಟಿಎಮ್​ಗೆ ಹಣ ತರಲು ಹೋದ ಯುವಕನಿಗೆ ಹಳೇ ಹುಬ್ಬಳ್ಳಿ ಪಿಎಸ್​ಐ ಲಾಠಿಯಿಂದ ಥಳಿಸಿದ್ದಾರೆ ಎಂದು ಯುವಕನ ಕುಟುಂಬಸ್ಥರು ಗಂಭೀರವಾಗಿ ಆರೋಪಿಸಿದ್ದಾರೆ.

ಕೊರೊನಾ ತಡೆಗಟ್ಟಲು ರಾಜ್ಯ ಸರ್ಕಾರ ಪೋಲಿಸ್ ಇಲಾಖೆಗೆ ಅನಗತ್ಯ ಓಡಾಡುವ ಸಾರ್ವಜನಿಕರಿಗೆ ದಂಡ ಹಾಗೂ ತಿಳಿ ಹೇಳಬೇಕು ಎಂದು ಆದೇಶಿಸಿದೆ. ಆದರೆ, ಪಿಎಸ್ಐ ಸುಖಾನಂದ ಶಿಂಧೆ ಹಳೇ ಹುಬ್ಬಳ್ಳಿ ನಿವಾಸಿ ರೆಹಮತ್​ ಉಲ್ಲಾ ಎಂಬಾತನಿಗೆ ಬೈಕ್ ನಿಲ್ಲಿಸಲಿಲ್ಲ ಎಂದು ಲಾಠಿಯಿಂದ ಹಿಗ್ಗಾ – ಮುಗ್ಗಾ ಥಳಿಸಿದ್ದಾರೆ.

ಇನ್ನೂ ಘಟನೆಯಲ್ಲಿ ಯುವಕನ ತಲೆಗೆ ಪೆಟ್ಟು ಬಿದ್ದ ಪರಿಣಾಮ ರಕ್ತಸ್ರಾವವಾಗಿ ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಹಲ್ಲೆ ಮಾಡಿರುವ ಪಿಎಸ್​ಐ ಸುಖಾನಂದ ಶಿಂಧೆ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕುಟುಂಬಸ್ಥರು, ಸಾರ್ವಜನಿಕರು ಒತ್ತಾಯಿಸಿದ್ದಾರೆ.