ಹೊರ ರಾಜ್ಯದಿಂದ ಬರುವ ರೈಲ್ವೆ ಪ್ರಯಾಣಿಕರ ಸ್ವೀಕಾರಕ್ಕೆ ಸಿದ್ಧತೆ: ಹೆಚ್ಚುವರಿ ಜಿಲ್ಲಾಧಿಕಾರಿ ಯೋಗೇಶ್ವರ

(ಸಾಂದರ್ಭಿಕ ಚಿತ್ರ)

(ಸಾಂದರ್ಭಿಕ ಚಿತ್ರ)

Share

ಹಾವೇರಿ: ಮುಂಬೈ ರೈಲ್ವೆ ನಿಲ್ದಾಣದಿಂದ ಹಾವೇರಿ ಜಿಲ್ಲೆಗೆ ಬರುವ ಕರ್ನಾಟಕ ರಾಜ್ಯದ ವಿವಿಧ ಜಿಲ್ಲೆಯ ಪ್ರಯಾಣಿಕರನ್ನು ಸ್ವೀಕರಿಸಿ ಎಸ್.ಓ.ಪಿ. (ಕೋವಿಡ್ ಸ್ಟ್ಯಾಂಡರ್ಡ್ ಆಪರೇಷನ್ ಪ್ರೋಸಿಜರ್) ಮಾರ್ಗಸೂಚಿ ಅನುಸಾರ ತಪಾಸಣೆಗೊಳಪಡಿಸಿ ತಮ್ಮ ತಮ್ಮ ತಾಲೂಕು ಹಾಗೂ ಆಯಾ ಜಿಲ್ಲೆಗೆ ಕಳುಹಿಸಿಕೊಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಯೋಗೇಶ್ವರ ಅವರು ತಿಳಿಸಿದ್ದಾರೆ.

ಮೂರ್ನಾಲ್ಕು ದಿನದಲ್ಲಿ ಮಹಾರಾಷ್ಟ್ರದಿಂದ ಹಾವೇರಿಗೆ ಪ್ರಯಾಣಿಕರನ್ನು ಕರೆದುಕೊಂಡು ವಿಶೇಷ ರೈಲು ಬರಲಿದೆ. ಈ ರೈಲಿನಲ್ಲಿ ಅಂದಾಜು 1200 ಪ್ರಯಾಣಿಕರು ನಮ್ಮ ರಾಜ್ಯದವರಾಗಿದ್ದಾರೆ. ಈ ಪೈಕಿ ಶೇ.60 ರಷ್ಟು ಪ್ರಯಾಣಿಕರು ಹಾವೇರಿ ಜಿಲ್ಲೆಯವರೇ ಆಗಿರುವುದರಿಂದ ಮಹಾರಾಷ್ಟ್ರದಿಂದ ನೇರವಾಗಿ ಹಾವೇರಿ ರೈಲ್ವೆ ನಿಲ್ದಾಣಕ್ಕೆ ವಿಶೇಷ ರೈಲು ಆಗಮಿಸಿ ಒಂದೇ ಸ್ಥಳದಲ್ಲಿ ಎಲ್ಲ ಪ್ರಯಾಣಿಕರನ್ನು ಇಳಿಸಲಿದೆ ಎಂದು ತಿಳಿಸಿದ್ದಾರೆ.

ರೈಲಿನ ಪ್ರತಿ ಬೋಗಿಯಲ್ಲಿ 50 ಜನರು ಪ್ರಯಾಣಿಸಲು ಮಾತ್ರ ಅವಕಾಶ ಕೊಡಲಾಗಿದೆ. ಅಂದಾಜು 22 ರಿಂದ 24 ಬೋಗಿಗಳಲ್ಲಿ ಪ್ರಯಾಣಿಕರು ಆಗಮಿಸಲಿದ್ದಾರೆ. ಹಾವೇರಿ ರೈಲ್ವೆ ನಿಲ್ದಾಣದಲ್ಲಿ ಇಳಿಯಲಿರುವ ಪ್ರಯಾಣಿಕರಿಗೆ ಹಾವೇರಿ ಜಿಲ್ಲೆಯ ಪ್ರಯಾಣಿಕರಿಗೆ ತಾಲೂಕಾವಾರು ಕೌಂಟರ್‍ಗಳನ್ನು ತೆರೆಯಲಾಗಿದೆ.

ಬೇರೆ ಜಿಲ್ಲೆಗೆ ತೆರಳುವವರಿಗೆ ಜಿಲ್ಲಾವಾರು ಕೌಂಟರ್‍ಗಳನ್ನು ತೆರೆದು ಮಾಹಿತಿ ನೀಡಿಕೆ, ಆರೋಗ್ಯ ತಪಾಸಣೆ ನಡೆಸಿ ಇಲ್ಲಿಂದ ಆಯಾ ತಾಲೂಕು ಹಾಗೂ ಜಿಲ್ಲೆಗಳಿಗೆ ಕರೆದೊಯ್ಯಲು ಬಸ್‍ಗಳ ವ್ಯವಸ್ಥೆ ಮಾಡಲಾಗಿದೆ. ಎಲ್ಲರನ್ನೂ ಸಾಂಸ್ಥಿಕ ಕ್ವಾರಂಟೈನ್‍ಗೆ ಒಳಪಡಿಸಲಾಗುವುದು. ಬಸ್‍ಗೆ ತೆರಳುವ ಮುನ್ನ ಪ್ರತಿ ಪ್ರಯಾಣಿಕರಿಗೆ ಆಹಾರದ ಪೊಟ್ಟಣ, ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಇದಕ್ಕಾಗಿ ನೋಡಲ್ ಅಧಿಕಾರಿಗಳನ್ನು ನಿಯೋಜಿಸಿ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.

ಧಾರವಾಡ, ಬೆಳಗಾವಿ, ಗದಗ, ಉತ್ತರ ಕನ್ನಡ , ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ, ಕೊಪ್ಪಳ, ಬೀದರ, ವಿಜಯಪುರ, ಯಾದಗಿರಿ ಒಳಗೊಂಡಂತೆ ವಿವಿಧ ಜಿಲ್ಲಾವಾರು ಕೌಂಟರ್ ತೆರೆಯಲಾಗಿದೆ. ಈ ಎಲ್ಲ ಜಿಲ್ಲೆಯ ಪ್ರಯಾಣಿಕರು ಹಾವೇರಿಯಲ್ಲಿ ಇಳಿಯಲಿದ್ದಾರೆ. ಇವರನ್ನು ಇಲ್ಲಿಂದ ತಪಾಸಣೆ ನಡೆಸಿ ಬಸ್ ಮೂಲಕ ಕಳುಹಿಸಲಾಗುವುದು. ಅದೇ ರೀತಿ ಹಾವೇರಿ ಜಿಲ್ಲೆಯ ಹಾನಗಲ್, ಬ್ಯಾಡಗಿ, ರಾಣೇಬೆನ್ನೂರು, ಬ್ಯಾಡಗಿ, ರಟ್ಟೀಹಳ್ಳಿ, ಹಿರೇಕೆರೂರು, ಹಾವೇರಿ ತಾಲೂಕುಗಳಿಗೆ ಪ್ರತ್ಯೇಕ ಕೌಂಟರ್ ಮಾಡಿ ಆರೋಗ್ಯ ತಪಾಸಣೆಗೊಳಪಡಿಸಿ ಮುಂಗೈಗೆ ಸೀಲುಹಾಕಿ ತಾಲೂಕಾ ಸಾಂಸ್ಥಿಕ ಕ್ವಾರಂಟೈನ್‍ಗೆ ಒಳಪಡಿಸಲಾಗಿದೆ.

ಈಗಾಗಲೇ ಈ ಕರ್ತವ್ಯಕ್ಕಾಗಿ ವಿವಿಧ ಅಧಿಕಾರಿಗಳು ಹಾಗೂ ಸಿಬ್ಬಂದಿಗಳನ್ನೊಳಗೊಂಡ ತಂಡ ನಿಯೋಜಿಸಿ ತರಬೇತಿ ನೀಡಲಾಗಿದೆ. ಎಲ್ಲರಿಗೂ ಕಾರ್ಯನಿರ್ವಹಣೆ ಕುರಿತಂತೆ ಮಾಹಿತಿ ನೀಡಿ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.

ಹೊರ ರಾಜ್ಯ, ಜಿಲ್ಲೆಯಿಂದ 3251 ಪ್ರಯಾಣಿಕರು: ಮೇ 1 ರಿಂದ 12ರವರೆಗೆ ಹೊರ ರಾಜ್ಯಗಳಿಂದ 341 ಜನ ಆಗಮಿಸಿದ್ದು, ಈ ಪೈಕಿ 214 ಜನರನ್ನು ಗೃಹಪ್ರತ್ಯೇಕತೆಯಲ್ಲಿ ಹಾಗೂ 127 ಜನರನ್ನು ಸಾಂಸ್ಥಿಕ ಪ್ರತ್ಯೇಕತೆಯಲ್ಲಿ ಇರಿಸಲಾಗಿದೆ. ಹೊರ ಜಿಲ್ಲೆಗಳಿಂದ 2910 ಜನರು ಆಗಮಿಸಿದ್ದು, ಈ ಪೈಕಿ 2838 ಜನರನ್ನು ಗೃಹ ಪ್ರತ್ಯೇಕತೆಯಲ್ಲಿ ಹಾಗೂ 72 ಜನರನ್ನು ಸಾಂಸ್ಥಿಕ ಪ್ರತ್ಯೇಕತೆಯಲ್ಲಿ ಇರಿಸಲಾಗಿದೆ. ಒಟ್ಟಾರೆ 3052 ಜನರನ್ನು ಗೃಹ ಪ್ರತ್ಯೇಕತೆಯಲ್ಲಿ ಹಾಗೂ 199 ಸಾಂಸ್ಥಿಕ ಪ್ರತ್ಯೇಕತೆಯಲ್ಲಿ ಇರಿಸಿ ನಿಗಾವಹಿಸಲಾಗಿದೆ ಎಂದು ತಿಳಿಸಿದ್ದಾರೆ.

ಗೋವಾ ರಾಜ್ಯ ಕೋವಿಡ್ ಮುಕ್ತ ರಾಜ್ಯ ಎಂದು ಘೋಷಣೆಯಾಗಿರುವುದರಿಂದ ಈ ರಾಜ್ಯದಿಂದ ಬಂದವರನ್ನು ಹೊರತುಪಡಿಸಿ ಉಳಿದ ರಾಜ್ಯಗಳಿಂದ ಬಂದವರನ್ನು ಸಾಂಸ್ಥಿಕ ಕ್ವಾರಂಟೈನ್ ಮಾಡಲಾಗಿದೆ. ಆದರೆ ಸ್ವಾಬ್ ಪರೀಕ್ಷೆಯ ನಂತರ ನೆಗಟಿವ್ ವರದಿ ಬಂದವರನ್ನು ಗೃಹ ಪ್ರತ್ಯೇಕತೆಗೆ ಒಳಪಡಿಸಿ ನಿಗವಾಹಿಸಲಾಗಿದೆ ಎಂದು ತಿಳಿಸಿದ್ದಾರೆ.

ತಾಲೂಕುವಾರು ವಿವರದಂತೆ ಹೊರ ರಾಜ್ಯಗಳಿಂದ ಹಾವೇರಿ ತಾಲೂಕಿಗೆ 18 ಜನರು ಬಂದಿದ್ದು ಎಲ್ಲರೂ ಸಾಂಸ್ಥಿಕ ಪ್ರತ್ಯೇಕತೆಗೆ ಒಳಪಡಿಸಲಾಗಿದೆ. ರಾಣೇಬೆನ್ನೂರಿಗೆ 11 ಜನರು ಆಗಮಿಸಿದ್ದು ಎಲ್ಲರನ್ನೂ ಸಾಂಸ್ಥಿಕ ಪ್ರತ್ಯೇಕತೆಯಲ್ಲಿ ಇರಿಸಲಾಗಿದೆ. ಬ್ಯಾಡಗಿ ತಾಲೂಕಿಗೆ 41 ಜನರು ಆಗಮಿಸಿದ್ದು, 38 ಜನರು ಗೃಹ ಪ್ರತ್ಯೇಕತೆಯಲ್ಲಿ ಹಾಗೂ 3 ಜನರು ಸಾಂಸ್ಥಿಕ ಪ್ರತ್ಯೇಕತೆಯಲ್ಲಿ ಇರಿಸಲಾಗಿದೆ. ಹಿರೇಕೆರೂರು ಹಾಗೂ ರಟ್ಟೀಹಳ್ಳಿ ತಾಲೂಕು ಸೇರಿ 23 ಜನರು ಆಗಮಿಸಿದ್ದು, ಐದು ಜನರು ಗೃಹ ಪ್ರತ್ಯೇಕತೆಯಲ್ಲಿ ಹಾಗೂ 18 ಜನರನ್ನು ಸಾಂಸ್ಥಿಕ ಪ್ರತ್ಯೇಕತೆಯಲ್ಲಿ ಇರಿಸಲಾಗಿದೆ. ಶಿಗ್ಗಾಂವ ತಾಲೂಕಿಗೆ 44 ಜನರು ಆಗಮಿಸಿದ್ದು, ಆರು ಜನರನ್ನು ಗೃಹಪ್ರತ್ಯೇಕತೆಯಲ್ಲಿ ಹಾಗೂ 38 ಜನರನ್ನು ಸಾಂಸ್ಥಿಕ ಪ್ರತ್ಯೇಕತೆಯಲ್ಲಿ ಇರಿಸಲಾಗಿದೆ. ಸವಣೂರು ತಾಲೂಕಿಗೆ 122 ಜನರು ಆಗಮಿಸಿದ್ದು, 110 ಜನರನ್ನು ಗೃಹಪ್ರತ್ಯೇಕತೆಯಲ್ಲಿ ಹಾಗೂ 12 ಜನರನ್ನು ಸಾಂಸ್ಥಿಕ ಪ್ರತ್ಯೇಕತೆಯಲ್ಲಿ ಇರಿಸಲಾಗಿದೆ. ಹಾನಗಲ್ ತಾಲೂಕಿಗೆ 82 ಜನರು ಆಗಮಿಸಿದ್ದು, 55 ಜನರನ್ನು ಗೃಹಪ್ರತ್ಯೇಕತೆಯಲ್ಲಿ ಹಾಗೂ 27 ಜನರನ್ನು ಸಾಂಸ್ಥಿಕ ಪ್ರತ್ಯೇಕತೆಯಲ್ಲಿ ಇರಿಸಿ ನಿಗಾವಹಿಸಲಾಗಿದೆ.