ಹುಬ್ಬಳ್ಳಿ- ಧಾರವಾಡ ನಗರದ ಅವಳಿ ನಗರದ ಅಭಿವೃದ್ಧಿ ಹೆಚ್ಚಿನ ಅನುದಾನ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ

Share

ಹುಬ್ಬಳ್ಳಿ: ರಾಜ್ಯದ ಆರ್ಥಿಕ ಸ್ಥಿತಿಗಳನ್ನು ಅನುಸರಿಸಿ ಹುಬ್ಬಳ್ಳಿ ಧಾರವಾಡ ನಗರಕ್ಕೆ ಹೆಚ್ಚಿನ ಅನುದಾನ ನೀಡಲಾಗುವುದು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದರು.

ಲೋಕೋಪಯೋಗಿ ಬಂದರು ಹಾಗೂ ಒಳನಾಡು ಜಲಸಾರಿಗೆ ಇಲಾಖೆ ಹಾಗೂ ನಗರ ಭೂ ಸಾರಿಗೆ ನಿರ್ದೇಶನಾಲಯದಿಂದ ಹುಬ್ಬಳ್ಳಿ ನಗರದ ರಾಜ್ಯ ಹೆದ್ದಾರಿ – 73ರ ಕಾಡಸಿದ್ದೇಶ್ವರ ಕಾಲೇಜಿನಿಂದ ತೋಳನ ಕೆರೆಯವರೆಗೆ ನಿರ್ಮಿಸಲಾಗಿರುವ ಟೆಂಡರ್ ಶ್ಯೂರ್ ರಸ್ತೆಯ ಲೋಕಾರ್ಪಣೆ ನೆರೆವೇರಿಸಿ ನಂತರ
ಚೇತನಾ ಕಾಲೇಜ ಹತ್ತಿರದ ಮೈದಾನಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಅತ್ಯಾಧುನಿಕ ತಂತ್ರಜ್ಞಾನ ಹಾಗೂ ದೂರದೃಷ್ಟಿಯೊಂದಿಗೆ ಟೆಂಡರ್ ಶ್ಯೂರ್ ರಸ್ತೆ ನಿರ್ಮಾಣ ಮಾಡಲಾಗಿದೆ‌. ರಾಜ್ಯದ ಇತರ ನಗರಗಳಲ್ಲೂ ಈ ಮಾದರಿಯಲ್ಲಿ ರಸ್ತೆ ನಿರ್ಮಿಸಲಾಗುವುದು. ನೃಪತುಂಗ ಬೆಟ್ಟದ ಲ್ಲಿ ಒಳ್ಳೆಯ ಪರಿಸರವಿದೆ, ಸರ್ಕಾರದಿಂದ ಅದನ್ನು ಅಭಿವೃದ್ಧಿ ಪಡಿಸಲಾಗಿದೆ. ವೈಯಕ್ತಿಕವಾಗಿ ನೃಪತುಂಗ ಬೆಟ್ಟ ತಮ್ಮ ನೆಚ್ಚಿನ ತಾಣವಾಗಿದೆ ಎಂದರು.ಕೇಂದ್ರ ಸಚಿವ ನಿತಿನ್ ಗಡ್ಕರಿಯವರು ದೇಶದ ಹೆದ್ದಾರಿ ಅಭಿವೃದ್ಧಿಗಾಗಿ 1 ಲಕ್ಷ ಕೋಟಿ ಹಣ ಮೀಸಲಿರಿಸಿರುವುದಾಗಿ ತಿಳಿಸಿದ್ದಾರೆ. ಈ ಅನುದಾನದಲ್ಲಿ ರಾಜ್ಯದ ಹೆದ್ದಾರಿಗಳನ್ನು ಸಹ ಅಭಿವೃದ್ಧಿ ಪಡಿಸಲಾಗುವುದು. 900 ಕೋಟಿ ರೂ.ವೆಚ್ಚದಲ್ಲಿ ಹುಬ್ಬಳ್ಳಿ ಧಾರವಾಡ ನಡುವೆ ಬಿ.ಆರ್.ಟಿ.ಎಸ್ ರಸ್ತೆ ನಿರ್ಮಿಸಿರುವುದರಿಂದ ಕಡಿಮೆ ಸಮಯದಲ್ಲಿ ‌ಜನರು ಅವಳಿ ನಗರದ ನಡುವೆ ಪ್ರಯಾಣಿಸಲು ಸಾಧ್ಯವಾಗಿದೆ ಎಂದರು.

ಉಪ ಮುಖ್ಯ ಮಂತ್ರಿ, ಲೋಕೋಪಯೋಗಿ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಚಿವ ಗೋವಿಂದ ಎಂ . ಕಾರಜೋಳ ಮಾತನಾಡಿ, ದೊಡ್ಡನಗರಗಳಲ್ಲಿ ಇಂತಹ ರಸ್ತೆಗಳ ನಿರ್ಮಾಣದ ಅವಶ್ಯಕತೆ ಇದೆ. ಸರ್ಕಾರ ಅಧಿಕಾರಕ್ಕೆ ಬಂದು 4 ತಿಂಗಳಾಗಿದೆ. ರಾಜ್ಯದಲ್ಲಿ ನೆರೆ ಬಂದಕಾರಣ 8 ಸಾವಿರ ಕೋಟಿ ರೂ.ಲೋಕೋಪಯೋಗಿ ಆಸ್ತಿ ಹಾನಿಯಾಗಿದೆ. ಇವುಗಳನ್ನು ಪುನರ್ನಿರ್ಮಾಣ ಮಾಡಲಾಗುತ್ತಿದೆ. ನೆರೆಯಿಂದ ರಾಜ್ಯದ ಆರ್ಥಿಕವಾಗಿ 20 ಸಾವಿರ ಕೋಟಿ ಹೆಚ್ಚಿನ ಹೊರೆ ಬಿದ್ದಿದೆ. ಲೋಕೋಪಯೋಗಿ ಇಲಾಖೆಯಿಂದ ಧಾರವಾಡ ವಲಯದಲ್ಲಿ ಪ್ರತಿವರ್ಷ 200 ಕೋಟಿ ಕಾಮಗಾರಿಗಳನ್ನು ಕೈಕೊಗಳ್ಳಲಾಗುತ್ತಿದೆ. ರಾಜ್ಯಾದ್ಯಂತ 3874 ಕೋಟಿ ಕಾಮಗಾರಿಗಳನ್ನು ಇಲಾಖೆಯಿಂದ ಕೆಲಸ ನಿರ್ವಹಿಸಲಾಗುತ್ತಿದೆ. ಮುಖ್ಯಮಂತ್ರಿಗಳು ರಾಜ್ಯದ ನೀರಾವರಿ ಯೋಜನೆಗಳಿಗೆ ಹೆಚ್ಚಿನ ಮಹತ್ವ ನೀಡಿದ್ದಾರೆ. ಉತ್ತರ ಕರ್ನಾಟಕ ಭಾಗದ ಕೃಷ್ಣಾ ಮೇಲ್ದಂಡೆ ಯೋಜನೆಗೆ ಹೆಚ್ಚಿನ ಒತ್ತು ನೀಡಿದ್ದಾರೆ ಎಂದರು.

ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಪ್ರಸ್ತಾವಿಕವಾಗಿ ಮಾತನಾಡಿ, 2012ರಲ್ಲಿ ಟೆಂಡರ್ ಶ್ಯೂರ್ ರಸ್ತೆ ನಿರ್ಮಾಣಕ್ಕೆ ಸಚಿವ ಸಂಪುಟ ಸಭೆಯಲ್ಲಿ ಅನುಮತಿ ನೀಡಲಾಗಿತ್ತು. ವಿದೇಶಿ ಮಾದರಿಯಲ್ಲಿ ರಸ್ತೆಗಳನ್ನು ನಿರ್ಮಿಸಿ, ವಿದ್ಯುತ್, ನೀರು, ಕೇಬಲ್ , ಗ್ಯಾಸ್, ಯುಜಿಡಿ ಸೇರಿದಂತೆ ಇತರೆ ಬಳಕೆಯನ್ನು ಗಮನದಲ್ಲಿ ಇರಿಸಿಕೊಂಡು ಮೊದಲೇ ಯೋಜಿಸಿ ರಸ್ತೆ ನಿರ್ಮಿಸಲಾಗಿದೆ. ಅಂದು ಲೋಕೋಪಯೋಗಿ ಸಚಿವರಾಗಿದ್ದ ಹೆಚ್.ಸಿ.ಮಹಾದೇವಪ್ಪನವರು ರಸ್ತೆ ನಿರ್ಮಾಣಕ್ಕೆ ತಾತ್ವಿಕವಾಗಿ ಒಪ್ಪಿಗೆ ನೀಡಿ 34 ಕೋಟಿ ಹಣ ಮಂಜೂರು ಮಾಡಿದರು. ಜನ ಅರ್ಬನ್ ಫೌಂಡೇಷನ್ ನ ಸ್ವಾತಿ ರಾಮನಾಥನ್ ಅವರು ಉಚಿತವಾಗಿ ರಸ್ತೆಯ ನೀಲನಕ್ಷೆ ಹಾಗೂ ವಿನ್ಯಾಸ ಮಾಡಿಕೊಟ್ಟಿದ್ದಾರೆ. ಒಟ್ಟು 2 ಕಿ.ಮೀ. ಟೆಂಡರ್ ಶ್ಯೂರ್ ರಸ್ತೆಯನ್ನು 46 ಕೋಟಿ ವೆಚ್ಚದಲ್ಲಿ ನಿರ್ಮಿಸಿಲಾಗಿದೆ ಎಂದರು. ಹುಬ್ಬಳ್ಳಿ ಧಾರವಾಡ ನಗದರ ರಸ್ತೆಗಳ ಕಾಂಕ್ರೀಟಿಕರಣಕ್ಕಾಗಿ 460 ಕೋಟಿ ಹಣ ಮಂಜೂರು ಮಾಡಲಾಗಿದೆ. ಶೀಘ್ರದಲ್ಲೇ ರಸ್ತೆಗಳ ನಿರ್ಮಾಣಕ್ಕೆ ಟೆಂಡರ್ ನೀಡಲಾಗುವುದು. ಪಾಲಿಕೆ ನೌಕರರ ಪಿಂಚಣಿ ಬಾಕಿ ಹಣಕ್ಕೆ ರಾಜ್ಯ ಸರ್ಕಾರದಿಂದ 100 ಕೋಟಿ ಬಿಡುಗಡೆ ಮಾಡಲಾಗಿದೆ. ಡಿಸೆಂಬರ್ ಅಂತ್ಯದ ವೇಳೆಗೆ 50 ಕೋಟಿ ಹಾಗೂ ಮಾರ್ಚ್‌ ಅಂತ್ಯದ ವೇಳೆಗೆ 50 ಕೋಟಿ ಹಣ ಬಿಡುಗಡೆ ಮಾಡಲಾಗುವುದು ಎಂದರು.

ಮಾಜಿ ಲೋಕೋಪಯೋಗಿ ಸಚಿವ ಡಾ. ಹೆಚ್.ಸಿ.ಮಹಾದೇವಪ್ಪ ಮಾತನಾಡಿ, ರಾಜ್ಯದ ಅಭಿವೃದ್ಧಿಯಲ್ಲಿ ರಾಜಕಾರಣ ಮಾಡದೇ ಹಿಂದಿನ ಸರ್ಕಾರದ ಸಚಿವನಾದ ನನ್ನ ಸಭೆಗೆ ಆಹ್ವಾನಿಸಿರುವುದು ಸಂತಸವಾಗಿದೆ. 2018 ರ ಜನವರಿಯಲ್ಲಿ ರಸ್ತೆ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಲಾಗಿತ್ತು. ನಿಗದಿತ ಅವಧಿಯೊಳಗೆ ರಸ್ತೆ ನಿರ್ಮಿಸಲಾಗಿದೆ. ಇದಕ್ಕೆ ಶ್ರಮಿಸಿದ ಲೋಕೋಪಯೋಗಿ ಇಲಾಖೆ ಹಿರಿಯ ಅಧಿಕಾರಿಗಳು ಹಾಗೂ ಈ ಭಾಗದ ಜನಪ್ರತಿನಿಧಿಗಳಿಗೆ ಅಭಿನಂದನೆ ಸಲ್ಲಿಸಿದರು.

ಗಣಿ ಮತ್ತು ಭೂ ವಿಜ್ಞಾನ, ಅರಣ್ಯ ಜೀವ ವೈವಿಧ್ಯ ಹಾಗೂ ಪರಿಸರ ಖಾತೆ ಸಚಿವ ಸಿ.ಸಿ.ಪಾಟೀಲ್, ಮುಖ್ಯ ಮಂತ್ರಿಗಳ ಕಾನೂನು ಸಲಹೆಗಾರ ಮೋಹನ ಲಿಂಬಿಕಾಯಿ, ಶಾಸಕ ಅರವಿಂದ ಬೆಲ್ಲದ, ಶಂಕರ ಪಾಟೀಲ ಮುನೇನಕೊಪ್ಪ, ಎಸ್ . ವಿ . ಸಂಕನೂರ, ಪ್ರದೀಪ ಶೆಟ್ಟರ, ಅಮೃತ ಅಯ್ಯಪ್ಪ ದೇಸಾಯಿ, ಸಿ . ಎಂ . ನಿಂಬಣ್ಣವರ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷ ವಿ . ಎಸ್ . ಪಾಟೀಲ,ಮಾಜಿ ಶಾಸಕ ಎಸ್.ಐ.ಚಿಕ್ಕನಗೌಡ್ರ, ಸೀಮಾ ಮಸೂತಿ, ಅಶೋಕ ಕಾಟವೆ, ಬೆಳಗಾವಿ ಪ್ರಾದೇಶಿಕ ಆಯುಕ್ತ ಎ.ಎ.ಬಿಸ್ವಾಸ್, ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತ ಆರ್.ದಿಲೀಪ್, ಜಿಪಂ ಸಿಇಓ ಡಾ.ಬಿ.ಸಿ.ಸತೀಶ, ಹುಬ್ಬಳ್ಳಿ ‌ಧಾರವಾಡ ಮಹಾನಗರಪಾಲಿಕೆ ಆಯುಕ್ತ ಡಾ.ಸುರೇಶ್ ಇಟ್ನಾಳ್, ಲೋಕೋಪಯೋಗಿ ಇಲಾಖೆ ಅಧೀಕ್ಷಕ ಇಂಜಿನಿಯರ್ ಶಿವಾನಂದ ನಾಯ್ಕ, ಕಾರ್ಯನಿರ್ವಾಹಕ ಇಂಜಿನಿಯರ್ ವಿರೂಪಾಕ್ಷಪ್ಪ ಯಮಕನಮರಡಿ ಸೇರಿದಂತೆ ಲೋಕೋಪಯೋಗಿ ಇಲಾಖೆ ಹಿರಿಯ ಅಧಿಕಾರಿಗಳು ಇದ್ದರು.