ಲಾಠಿ ಪ್ರಹಾರ ನಿಲ್ಲಿಸಿ, ದಂಡ ಹಾಕಿ: ಶಾಸಕ ನೆಹರು ಓಲೇಕಾರ

Share

ಹಾವೇರಿ: ಜಿಲ್ಲಾದ್ಯಂತ ನಿಷೇಧಾಜ್ಞೆ ಜಾರಿಯಲ್ಲಿದ್ದರೂ ಕೆಲವರು ಉದ್ದೇಶಪೂರ್ವಕವಾಗಿ ರಸ್ತೆಗೆ ಇಳಿಯುವುದು, ಗುಂಪುಗುಂಪಾಗಿ ಸೇರುತ್ತಾರೆ. ಕರೋನಾ ನಿಯಂತ್ರಣಕ್ಕೆ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಅನಿವಾರ್ಯವಾಗಿರುವುದರಿಂದ ಅನಗತ್ಯವಾಗಿ ರಸ್ತೆಗಿಳಿಯುವ ವಾಹನಗಳಿಗೆ ದಂಡ ಹಾಕಿ ಸೀಜ್ ಮಾಡುವ ಮೂಲಕ ನಿಷೇಧಾಜ್ಞೆ ಮುಗಿಯುವವರೆಗೂ ವಾಹನಗಳನ್ನು ಮಾಲಕರಿಗೆ ಹಿಂದಿರುಗಿಸಬೇಡಿ. ಆದರೆ ಲಾಠಿ ಪ್ರಯೋಗ ಮಾಡಬೇಡಿ ಎಂದು ಪೊಲೀಸ್‍ರಿಗೆ ಶಾಸಕ ನೆಹರು ಓಲೇಕಾರ ಸಲಹೆ ನೀಡಿದರು.

ಕರೋನಾ ಸೋಂಕು ತಡೆಯ ಮುನ್ನೆಚ್ಚರಿಕೆ ಕ್ರಮಗಳ ಅನುಷ್ಠಾನ ಕುರಿತಂತೆ ಸೋಮವಾರ ನಗರದ ನಗರಸಭೆ ಸಭಾಂಗಣದಲ್ಲಿ ಅಧಿಕಾರಿಗಳ ಸಭೆ ನಡೆಸಿದ ಅವರು, ಜನದಟ್ಟಣೆಯಾಗದಂತೆ ಕಠಿಣ ಕ್ರಮಕೈಗೊಳ್ಳಿ. ಸಾಮಾಜಿಕ ಅಂತರ ಕಾಪಾಡಿಕೊಳ್ಳುವಂತೆ ನಿಗಾವಹಿಸಿ, ಗೃಹ ಪ್ರತ್ಯೇಕತೆಯಲ್ಲಿರುವವರು ಮನೆಯಿಂದ ಹೊರಗೆ ಬರದಂತೆ ಎಚ್ಚರವಹಿಸಿ ಎಂದು ಸಲಹೆ ನೀಡಿದರು.

ಕೊರೋನಾ ಸೋಂಕು ತೀವ್ರವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಬಿಗಿ ಕ್ರಮಗಳನ್ನು ಕೈಗೊಳ್ಳಿ. ಜನರೊಂದಿಗೆ ಸೂಕ್ಷ್ಮವಾಗಿ ನಡೆದುಕೊಳ್ಳಿ, ಉದ್ದೇಶಪೂರ್ವಕವಾಗಿ ನಿಷೇಧಾಜ್ಞೆ ಉಲ್ಲಂಘಿಸುವವರ ಮೇಲೆ ಹಾಗೂ ಪರಿಸ್ಥಿತಿಯ ಲಾಭಪಡೆದು ದಿನದಿ ಹಾಗೂ ತರಕಾರಿ ದರ ದುಪ್ಪಟ್ಟು ಮಾಡುವವರ ಮೇಲೆ ಕಠಿಣ ಕ್ರಮ ಕೈಗೊಳ್ಳಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ನಗರ ಸ್ವಚ್ಛತೆ ಹಾಗೂ ಜನರಿಗೆ ಸಮರ್ಪಕವಾಗಿ ಕುಡಿಯುವ ನೀರನ್ನು ಪೂರೈಸುವಂತೆ ಪೌರಾಯುಕ್ತರಿಗೆ ಹಾಗೂ ನಗರಸಭೆ ಪರಿಸರ ಅಭಿಯಂತರರು ಹಾಗೂ ಕಾರ್ಯನಿರ್ವಾಹಕ ಇಂಜನೀಯರ್‍ಗೆ ಸೂಚನೆ ನೀಡಿದ ಅವರು, ಕಳೆದ ಎರಡು ದಿನಗಳಿಂದ ಕುಡಿಯುವ ನೀರಿನ ಸಬರಾಜಿನ ಪೈಪ್ ಹಾಳಾದರೂ ದುರಸ್ಥಿಮಾಡದ ಕುರಿತಂತೆ ತೀವ್ರ ಅಸಮಾಧಾನ ವ್ಯಕ್ತಪಡಿಸಿ ತರಾಟೆಗೆ ತೆಗೆದುಕೊಂಡರು.

ದಿನಸಿ ತರಕಾರಿಯನ್ನು ದುಪ್ಪಟ್ಟು ದರದಲ್ಲಿ ಮಾರಾಟ ಮಾಡುವವರ ಮೇಲೆ ಕಠಿಣ ಕ್ರಮಕೈಗೊಳ್ಳಿ. ಪ್ರತಿ ಅಂಗಡಿಗಳ ಮುಂದೆ ದಿನಸಿ ದರಗಳ ಫಲಕಗಳನ್ನು ಪ್ರದರ್ಶಿಸಬೇಕು. ಎಂ.ಆರ್.ಪಿ.ದರದಲ್ಲೇ ಮಾರಾಟ ಮಾಡುವಂತೆ ಕ್ರಮವಹಿಸಬೇಕು. ರೈತರಿಂದ ಖರೀದಿಸಿದ ದರದ ಮೇಲೆ ಐದು ರೂ.ಲಾಭ ಇರಿಸಿ ತರಕಾರಿ ಮಾರಾಟ ಮಾಡಬೇಕು. ತಳ್ಳುಗಾಡಿಗಳ ಮೇಲೆ ತರಕಾರಿಗಳ ದರಗಳ ಫಲಕಗಳನ್ನು ಹಾಕಿಕೊಳ್ಳುವಂತೆ ಕ್ರಮವಹಿಸಲು ಕೃಷಿ ಹಾಗೂ ಆಹಾರ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಐಸೋಲೇಷನ್ ವಾರ್ಡ್‍ಗಳಿಗೆ ಅಗತ್ಯವಾದ ಹೆಚ್ಚುವರಿ ಕಟ್ಟಡಗಳನ್ನು ಸಿದ್ಧತೆಮಾಡಿಕೊಳ್ಳಿ, ಮೊರಾರ್ಜಿ ಶಾಲೆಗಳು, ಸರ್ಕಾರಿ ಇಂಜನೀಯರಿಂಗ್ ಕಾಲೇಜು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಹಳೆ ಕಚೇರಿ, ಹಾವೇರಿಯಲ್ಲಿ ಸ್ಥಗಿತಗೊಂಡಿರುವ ರೈಲ್ವೆ ಬೋಗಿಗಳ ಬಳಕೆ ಸೇರಿದಂತೆ ಎಲ್ಲ ಕ್ರಮಗಳನ್ನು ವಹಿಸಿ, ಮಾಸ್ಕ್ ಹಾಗೂ ಇತರೆ ವೈದ್ಯಕೀಯ ಸುರಕ್ಷಾ ಉಪಕರಗಳ ದಾಸ್ತಾನಿಗೆ ಕ್ರಮವಹಿಸಿ ಎಂದು ಸೂಚನೆ ನೀಡಿದರು.
ಇದೇ ಸಂದರ್ಭದಲ್ಲಿ ಕಾರ್ಮಿಕ ಅಧಿಕಾರಿಗಳು, ಹಾವೇರಿ ತಾಲೂಕಿನ ಏಳುಸಾವಿರ ನೊಂದಾಯಿತ ಕಾರ್ಮಿಕರಿಗೆ ತಲಾ ಒಂದು ಸಾವಿರ ರೂ. ಪ್ರೋತ್ಸಾಹಧನ ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ. ಈಗಾಗಲೇ 1500 ಕಾರ್ಮಿಕರ ಖಾತೆಗೆ ನೇರ ಹಣ ಜಮಾಮಾಡಲಾಗಿದೆ. ರೆಡ್ ಕ್ರಾಸ್ ಸಹಯೋಗದಲ್ಲಿ ಕಾರ್ಮಿಕರಿಗೆ ಕರೋನಾ ಸುರಕ್ಷತಾ ಕಿಟ್ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ ಎಂದು ಹೇಳಿದರು.

ಕೃಷಿ ಕೆಲಸಕ್ಕೆ ನಿರ್ಭಂಧ ಬೇಡ, ಕೃಷಿ ಉತ್ಪನ್ನಗಳ ಸಾಗಾಣಿಕೆಗೆ ಅನುಮತಿಯಲ್ಲಿ ಯಾವುದೇ ತೊಂದರೆಯಾಗಬಾರದು. ಅಗತ್ಯ ವಸ್ತುಗಳ ಸಾಗಾಣಿಕೆಗೆ ಪರವಾನಿಗೆ ನೀಡುವ ವ್ಯವಸ್ಥೆ ಸರಳಿಕರಿಸಿ. ರೇಷ್ಮೆ ಗೂಡು ಸಾಗಾಣಿಕೆ, ಹಣ್ಣು, ತರಕಾರಿ, ಸಾಗಾಣಿಕೆಗೆ ತೊಂದರೆಯಾಗಬಾರದು ಎಂದು ಶಾಸಕರಾದ ವಿರುಪಾಕ್ಷಪ್ಪ ಬಳ್ಳಾರಿ ಅವರು ಸೂಚಿಸಿದರು.

ಸಭೆಯಲ್ಲಿ ಡಿ.ವೈ.ಎಸ್.ಪಿ. ವಿಜಯಕುಮಾರ ಸಂತೋಷ್, ತಹಶೀಲ್ದಾರ ಶಂಕರ, ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ, ಪೌರಾಯುಕ್ತ ಬಸವರಾಜ ಜಿದ್ದಿ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.