ಮೂರು ದಿನಗಳೊಳಗಾಗಿ ಹಾವೇರಿ ಜಿಲ್ಲೆಯ ಎಲ್ಲ ಕಾರ್ಖಾನೆಗಳ ಆರಂಭಕ್ಕೆ ಜಿಲ್ಲಾಧಿಕಾರಿ ಗ್ರೀನ್ ಸಿಗ್ನಲ್

Share

ಹಾವೇರಿ: ಸರ್ಕಾರದ ನೂತನ ಮಾರ್ಗಸೂಚಿಯಂತೆ ಹಸಿರು ವಲಯದಲ್ಲಿರುವ ಹಾವೇರಿ ಜಿಲ್ಲೆಯಲ್ಲಿ ಲಾಕ್‍ಡೌನ್ ಅವಧಿಯಲ್ಲಿ ಸ್ಥಗಿತಗೊಳಿಸಲಾದ ಎಲ್ಲ ಆರ್ಥಿಕ ಚಟುವಟಿಕೆಗಳನ್ನು ಬುಧವಾರದಿಂದ ಮೂರು ದಿನಗಳ ಒಳಗಾಗಿ ಮರು ಆರಂಭಿಸಬೇಕೆಂದು ಜಿಲ್ಲಾಧಿಕಾರಿ ಕೃಷ್ಣ ಭಾಜಪೇಯಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲೆಯ ವಿವಿಧ ತಹಶೀಲ್ದಾರಗಳೊಂದಿಗೆ ಮಂಗಳವಾರ ವಿಡಿಯೋ ಸಂವಾದ ನಡೆಸಿದ ಅವರು, ಜಿಲ್ಲೆಯಲ್ಲಿ ಸಣ್ಣ-ಪುಟ್ಟ ಕೈಗಾರಿಕೆ ಸೇರಿದಂತೆ ಒಟ್ಟಾರೆ 12000 ಕೈಗಾರಿಕೆ ಘಟಕಗಳಿವೆ. ಎಲ್ಲ ಕೈಗಾರಿಕಾ ಘಟಕಗಳು ಮೂರು ದಿನಗಳಲ್ಲಿ ಆರಂಭಗೊಳ್ಳಬೇಕು. ಆರ್ಥಿಕ ಚಟುವಟಿಕೆಗಳ ಆರಂಭಕ್ಕೆ ಯಾವುದೇ ಅನುಮತಿ ಬೇಕಾಗಿಲ್ಲ. ಉತ್ಪಾದನಾ ಚಟುವಟಿಕೆಗೆ ಯಾವುದೇ ಸಮಯ ನಿಗಧಿಮಾಡುವುದಿಲ್ಲ ಹಾಗೂ ಪಾಸ್‍ಗಳ ಅವಶ್ಯಕತೆ ಇಲ್ಲ. ಚಟುವಟಿಕೆ ಆರಂಭಿಸಿ ತಮ್ಮ ಸಂಸ್ಥೆಗಳಲ್ಲಿ ಕೆಲಸಕ್ಕೆ ತೊಡಗಿಸಿಕೊಂಡಿರುವ ಕಾರ್ಮಿಕರ ಪಟ್ಟಿಯನ್ನು ತಹಶೀಲ್ದಾರಗಳಿಗೆ ಸಲ್ಲಿಸಿ ಅನುಮೋದನೆ ಪಡೆಯಬೇಕು ಎಂದು ತಿಳಿಸಿದರು.

ಮಾಲೀಕರು ಸ್ಟ್ಯಾಂರ್ಡ ಆಪರೇಟಿಂಗ್ ಪ್ರೋಟೋಕಾಲ್ (ಎಸ್.ಓ.ಪಿ) ಅನುಸರಿಸಿ ಸಾಮಾಜಿಕ ಅಂತರ ಕಾಯ್ದುಕೊಂಡು ಶೇ. 50ರಷ್ಟು ಕಾರ್ಮಿಕರನ್ನು ಮಾತ್ರ ಕೆಲಸಕ್ಕೆ ಹಾಜರಾಗುವಂತೆ ನೋಡಿಕೊಳ್ಳಬೇಕು. ತಮ್ಮಲ್ಲಿ ಕೆಲಸಮಾಡುವ ಕಾರ್ಮಿಕರಿಗೆ ಮಾಸ್ಕ್, ಸ್ಯಾನಿಟೈಸರ್ ಸೇರಿದಂತೆ ಸರ್ಕಾರ ಹಾಗೂ ಆರೋಗ್ಯ ಇಲಾಖೆಯ ಕೋವಿಡ್ ಸುರಕ್ಷಾ ಮಾನದಂಡಗಳನ್ನು ಅಳವಡಿಸಿಕೊಂಡು ಚಟುವಟಿಕೆ ಆರಂಭಿಸಬೇಕು. ಈ ಕುರಿತಂತೆ ಸ್ವಯಂ ದೃಢೀಕರಣ ಸಲ್ಲಿಸಬೇಕು ಎಂದು ಅವರು ಹೇಳಿದರು.

ತಮ್ಮಲ್ಲಿ ಬರುವ ಸಾರ್ವಜನಿಕರಿಗೆ ಕಡ್ಡಾಯವಾಗಿ ಮಾಸ್ಕ್ ಧರಿಸಿಕೊಂಡು ಬರುವಂತೆ ತಿಳಿಸಬೇಕು. ಕನಿಷ್ಟ ಒಂದು ಮೀಟರ್ ಅಂತರದಲ್ಲಿ ಗುರುತು ಹಾಕಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಮಾಲೀಕರು, ವ್ಯವಸ್ಥಾಪಕರು ತಿಳುವಳಿಕೆ ನೀಡಬೇಕು. ಅಂಗಡಿ ಮುಂದೆ ಐದು ಜನಕ್ಕಿಂತ ಹೆಚ್ಚು ಸೇರದಂತೆ ಕ್ರಮವಹಿಸಬೇಕು ಎಂದು ತಿಳಿಸಿದರು.

ಚಟುವಟಿಕೆಗಳಿಗೆ ಅವಕಾಶವಿಲ್ಲ:

ಕ್ಷೌರಿಕ ಅಂಗಡಿಗಳು ಮತ್ತು ಬ್ಯೂಟಿ ಪಾರ್ಲರಗಳು, ಹೋಟೆಲ್ ಮತ್ತು ಢಾಬಾ (ಪಾರ್ಸಲ್ ಸೇವೆ ಹೊರತು ಪಡಿಸಿ), ಸಿನಿಮಾ ಥೇಟರ್‍ಗಳು ಮತ್ತು ಮನರಂಜನಾ ಸ್ಥಳಗಳು, ಅಂತರ್ ಜಿಲ್ಲಾ ಮಾನವ ಸಾಗಾಣಿಕೆ, ಬಸ್, ಆಟೋ, ಟ್ಯಾಕ್ಸಿ, ಕ್ಯಾಬ್ ಸೇವೆಗಳು, ಶೈಕ್ಷಣಿಕ ಸಂಸ್ಥೆಗಳು ಅಥವಾ ತರಬೇತಿ ಅಥವಾ ಕೋಚಿಂಗ್ ಕೇಂದ್ರಗಳು, ವ್ಯಾಯಾಮ ಶಾಲೆಗಳು, ಕ್ಲಬ್‍ಗಳು ಮತ್ತು ರೆಸಾರ್ಟಗಳು, ಸ್ವಿಮಿಂಗ್ ಪೂಲ್, ಉದ್ಯಾನವನಗಳು, ಸಮುದಾಯ ಭವನಗಳು ಅಥವಾ ಆಡಿಟೋರಿಯಂ, ಸಂತೆ, ಜಾತ್ರೆ, ಧಾರ್ಮಿಕ ಚಟುವಟಿಕೆಗಳು, ಕ್ರೀಡಾ ಚಟುವಟಿಕೆಗಳು, ಮದುವೆ ಮತ್ತು ಸಾಮೂಹಿಕ ಸಮಾರಂಭಗಳು, ಗುಟಖಾ ಅಥವಾ ತಂಬಾಕು ಅಂಗಡಿಗಳು, ಲಾಡ್ಜ್‍ಗಳು, ಬೀದಿ ಬೀದಿ ಚಾಟ್ಸ್ ಮತ್ತು ಟೀ ಅಂಗಡಿಗಳನ್ನು ತೆರೆಯಲು ಅವಕಾಶವಿಲ್ಲ ಹಾಗೂ ದೇವಸ್ಥಾನ ಅಥವಾ ಮಸೀದಿ ಅಥವಾ ಚರ್ಚ್‍ಗಳಲ್ಲಿ ಸಾಮೂಹಿಕ ಪ್ರಾರ್ಥನೆಗೆ ಅವಕಾಶವಿರುವುದಿಲ್ಲ. ಇವುಗಳನ್ನು ಹೊರತುಪಡಿಸಿ ಎಲ್ಲ ಆರ್ಥಿಕ ಚಟುವಟಿಕೆಗಳನ್ನು, ಅಂಗಡಿಗಳನ್ನು , ಕಾರ್ಖಾನೆಗಳನ್ನು ತೆರೆಯಬಹುದು ಎಂದರು.

ಅಂತರ್ ಜಿಲ್ಲಾ ಚೆಕ್‍ಪೋಸ್ಟ್‍ಗಳಲ್ಲಿ ಪಾಸ್ ಇಲ್ಲದೆ ಯಾವುದೇ ಮಾನವ ಸಾಗಾಣಿಕೆ ಹಾಗೂ ಸಂಚಾರಕ್ಕೆ ಅವಕಾಶ ಇರುವುದಿಲ್ಲ. ದ್ವಿಚಕ್ರ ವಾಹನದಲ್ಲಿ ಒಬ್ಬರಿಗೆ ಮಾತ್ರ ಅವಕಾಶ. ನಾಲ್ಕು ಚಕ್ರ ವಾಹನಗಳಲ್ಲಿ ಚಾಲಕ ಹಾಗೂ ಸಹ ಪ್ರಯಾಣಿಕರಿಗೆ ಮಾತ್ರ ಅವಕಾಶ. ಗೂಡ್ಸ್ ವಾಹನದಲ್ಲಿ ಇಬ್ಬರಿಗೆ ಮಾತ್ರ ಅವಕಾಶ. ವೈದ್ಯಕೀಯ ಕಾರಣಗಳಿಗೆ ನಿಯಮಾನುಸಾರ ಅಂತರ್ ಜಿಲ್ಲಾ ಪಾಸ್ ಪಡೆಯಬೇಕು. ಸರ್ಕಾರದಿಂದ ವಿನಾಯಿತಿ ಪಡೆದ ಕೈಗಾರಿಕೆ ಸಂಸ್ಥೆಗಳು, ಇತರ ಸಂಸ್ಥೆಗಳು ಆಯಾ ನೀಡಿದ ಪಾಸ್ ಬಳಸಬೇಕು ಎಂದು ತಿಳಿಸಿದರು.

ಅಪರ ಜಿಲ್ಲಾಧಿಕಾರಿ ಯೋಗೇಶ್ವರ, ಉಪವಿಭಾಗಾಧಿಕಾರಿ ಡಾ.ದಿಲೀಷ್ ಶಶಿ, ಕೈಗಾರಿಕಾ ಇಲಾಖೆ ಸಹಾಯಕ ನಿರ್ದೇಶಕ ವಿನಾಯಕ ಜೋಷಿ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಮಂಜುನಾಥ್, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಪ್ರದೀಪ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ವೀರೇಂದ್ರ ಕುಂದಗೋಳ, ಲೋಕೋಪಯೋಗಿ ಇಲಾಖೆ ಅಭಿಯಂತರ ಭಾವನಾಮೂರ್ತಿ, ಪೌರಾಯುಕ್ತ ಬಸವರಾಜ ಜಿದ್ದಿ, ತಹಶೀಲ್ದಾರ ಶಂಕರ್ ಇತರರು ಇದ್ದರು.