ಮುಂದಿನ ದಿನಗಳಲ್ಲೂ ಕೋವಿಡ್ ಸಮರ್ಥ ನಿಭಾವಣೆ: ಗೃಹ ಸಚಿವ ಬಸವರಾಜ ಬೊಮ್ಮಾಯಿ

Share

ಹಾವೇರಿ: ಜಿಲ್ಲಾ ಆಸ್ಪತ್ರೆಯಲ್ಲಿ ನೂತನ ವೈರಾಣು ಸಂಶೋಧನೆ ಮತ್ತು ರೋಗ ನಿರ್ಣಯ ಪ್ರಯೋಗಾಲಯವನ್ನು (ವಿ.ಆರ್.ಡಿ.ಎಲ್) ಸೋಮವಾರ ಗೃಹ ಸಚಿವ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಉದ್ಘಾಟಿಸಿದರು.

ಜಿಲ್ಲಾ ಆಸ್ಪತ್ರೆಯಲ್ಲಿ ವಿ.ಆರ್.ಡಿ.ಲ್ಯಾಬ್ ಹಾಗೂ ಐ.ಸಿ.ಯು ವಾರ್ಡ್ ಉದ್ಘಾಟಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಮುಂದಿನ ದಿನಗಳಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಾದರೂ ಎಲ್ಲ ಸವಾಲುಗಳನ್ನು ಎದುರಿಸಲು ಎಲ್ಲ ರೀತಿಯಿಂದಲೂ ಸಮರ್ಥವಾಗಿದ್ದೇವೆ. ಕೋವಿಡ್ ಸೋಂಕು ನಿಯಂತ್ರಣಕ್ಕೆ ಜಿಲ್ಲೆಯಲ್ಲಿ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ವೈದ್ಯಕೀಯ ವ್ಯವಸ್ಥೆಗಳು ಮಾಡಿಕೊಳ್ಳಲಾಗಿದೆ ಎಂದರು.

ವಿ.ಆರ್.ಡಿ. ಲ್ಯಾಬ್ ಕೋವಿಡ್ ಸೋಂಕಿಗೆ ಮಾತ್ರವಲ್ಲದೆ ಇತರೆ ಸೋಂಕುಗಳ ತಪಾಸಣೆಗೆ ಅನುಕೂಲವಾಗಿದೆ, ವೈರಲ್ ಇನಫೆಕ್ಸ್, ಡೆಂಗ್ಯು, ವೆಲಿಸಾ ಹಾಗೂ ಎಚ್.ವಿ.ಸೋಂಕು ತಪಾಸಣೆಗೆ ಅನುಕೂಲವಾಗಲಿದೆ. ವಿ.ಆರ್.ಡಿ. ಲ್ಯಾಬ್‍ನಲ್ಲಿ ಒಂದು ಸಿಪ್ಟ್‍ನಲ್ಲಿ 100 ರಂತೆ ದಿನವೊಂದಕ್ಕೆ 300 ಮಾದರಿಗಳನ್ನು ಪರೀಕ್ಷೆ ಮಾಡಬಹುದು. ಆರಂಭದಲ್ಲಿ 50 ರಿಂದ 60 ಮಾದರಿಗಳನ್ನು ಪರೀಕ್ಷೆ ನಡೆಸಲಾಗುವುದು. ಮೈಕ್ರೋಬಯೋಲೆಜಿಸ್ಟ್, ಪ್ರಯೋಗಾಲಯ ತಂತ್ರಜ್ಞರ ಅನುಭವ ಮತ್ತು ಸಾಮಥ್ರ್ಯಕ್ಕನುಸಾರವಾಗಿ ಪರೀಕ್ಷೆಗಳ ಸಂಖ್ಯೆ ಹೆಚ್ಚಳವಾಗಲಿದೆ. ಇಂದು ಪ್ರಾಯೋಗಿಕವಾಗಿ ಐದು ಕೇಸ್‍ಗಳ ಪರೀಕ್ಷೆ ನಡೆಸಿ ನಿಮಾನ್ಸ್‍ಗೆ ಕಳುಹಿಸಲಾಗಿದೆ ಎಂದು ಹೇಳಿದರು.

ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ 16 ವೆಂಟಿಲೇಟರ್‍ನ ಐ.ಸಿ.ಯು. ವ್ಯವಸ್ಥೆ ಮಾಡಲಾಗಿದೆ. ಹೊಸದಾಗಿ ಐದು ವೆಂಟಿಲೇಟರ್ ಬೇಡಿಕೆಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ವಿಶೇಷವಾಗಿ ಕೋವಿಡ್ ಚಿಕಿತ್ಸೆಗೆ ಜಿಲ್ಲಾ ಆಸ್ಪತ್ರೆಯಲ್ಲಿ 50 ಬೆಡ್ ಹಾಗೂ ಸವಣೂರಲ್ಲಿ 30 ಬೆಡ್‍ಗಳ ವ್ಯವಸ್ಥೆ ಮಾಡಲಾಗಿದೆ. ಜಿಲ್ಲೆಯ ಎಲ್ಲ ತಾಲೂಕು ಕೇಂದ್ರಗಳಲ್ಲಿ 10 ರಿಂದ 15 ಬೆಡ್‍ಗಳ ಸೇರ್ಪಡೆಗೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಸೌಲಭ್ಯಗಳ ವ್ಯವಸ್ಥೆ ಮಾಡಿಕೊಳ್ಳಲಾಗುವುದು ಎಂದು ತಿಳಿಸಿದರು.

ಕಠಿಣ ಕ್ರಮ: ಕೋವಿಡ್ ನಿಯಂತ್ರಣಕ್ಕಾಗಿ ಹಗಲಿರುಳು ಶ್ರಮಿಸುತ್ತಿರುವ ವೈದ್ಯರು ಸೇರಿದಂತೆ ಯಾರ ಮೇಲಾದರೂ ಹಲ್ಲೆ ಸೇರಿದಂತೆ ದೌರ್ಜನ್ಯ ವ್ಯಸಗಿದರೆ ಅವರ ಮೇಲೆ ಡಿಜಾಸ್ಟರ್ ಮ್ಯಾನೆಜ್‌ಮೆಂಟ್‌ ಆ್ಯಕ್ಟ್ ಅನ್ವಯ ಕ್ರಮತೆಗೆದುಕೊಳ್ಳಲಾಗುವುದು.ಹಲ್ಲೆ ಒಳಗಾದ ಸಿಬ್ಬಂದಿ ಸ್ವಯಂ ಪ್ರೇರಿತರಾಗಿ ಪ್ರಕರಣ ದಾಖಲಿಸದಿದ್ದರೂ ಹಲ್ಲೆ ಬಗ್ಗೆ ಮಾಹಿತಿ ಲಭ್ಯವಾದರೆ ಪ್ರಕರಣ ದಾಖಲಿಸಿ ಆರೋಪಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.

ಈ ಸಂದರ್ಭದಲ್ಲಿ ಹಾವೇರಿ ಲೋಕಸಭಾ ಸದಸ್ಯ ಶಿವಕುಮಾರ ಉದಾಸಿ, ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಜಿ.ದೇವರಾಜ, ಅಪರ ಜಿಲ್ಲಾಧಿಕಾರಿ ಎಸ್.ಯೋಗೇಶ್ವರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜೇಂದ್ರ ದೊಡ್ಮನಿ, ಪ್ರಭಾರ ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಪಿ.ಎಸ್. ಹಾವನೂರ, ಡಾ.ಸುರೇಶ ಪೂಜಾರ ಇತರ ಅಧಿಕಾರಿಗಳು ಇದ್ದರು.