ಪರಿಹಾರ ವಿತರಣೆ ಲೋಪ ತನಿಖೆ: ತಪ್ಪಿತಸ್ಥರಿಗೆ ಕಾನೂನು ಚೌಕಟ್ಟಿನಲ್ಲಿ ಶಿಕ್ಷೆ : ಅಪರ ಜಿಲ್ಲಾಧಿಕಾರಿ ಯೋಗೇಶ್ವರ

Share

ಹಾವೇರಿ: ಅತಿವೃಷ್ಟಿ ಹಾಗೂ ನೆರೆಯಿಂದ ಹಾನಿಯಾದವರಿಗೆ ಬೆಳೆ ಹಾಗೂ ಮನೆ ಪರಿಹಾರ ವಿತರಣೆಯಲ್ಲಿ ಲೋಪ ಎಸಗಿದ ಅಧಿಕಾರಿಗಳ ಗುರುತಿಸಿ ಶಿಸ್ತುಕ್ರಮ ಕೈಗೊಳ್ಳಲಾಗುತ್ತಿದೆ. ಪರಿಹಾರದಿಂದ ವಂಚಿತರಾದವರ ವಿವರವನ್ನು ಸಂಗ್ರಹಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಕ್ರಮಕೈಗೊಳ್ಳಲಾಗುತ್ತಿದೆ ಎಂದು ಅಪರ ಜಿಲ್ಲಾಧಿಕಾರಿ ಎಸ್.ಯೋಗೇಶ್ವರ ಅವರು ತಿಳಿಸಿದರು.

ಜಿಲ್ಲಾ ಪಂಚಾಯತ್ ಅಧ್ಯಕ್ಷ ಬಸವನಗೌಡ ದೇಸಾಯಿ ಅವರ ಅಧ್ಯಕ್ಷತೆಯಲ್ಲಿ ಶನಿವಾರ ಜರುಗಿದ ಸಾಮಾನ್ಯ ಸಭೆಯಲ್ಲಿ ಅತಿವೃಷ್ಟಿ ಹಾಗೂ ನೆರೆಪರಿಹಾರ ಸಂತ್ರಸ್ತರಿಗೆ ಬೆಳೆ ಹಾಗೂ ಮನೆ ಪರಿಹಾರ ವಿತರಣೆಯಲ್ಲಿ ಉಂಟಾಗಿರುವ ಲೋಪ ಕುರಿತಂತೆ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿ ಕ್ಷೇತ್ರವಾರು ಪರಿಹಾರ ವಿತರಣೆಯಲ್ಲಿ ಉಂಟಾಗಿರುವ ಅನ್ಯಾಯ ಕುರಿತಂತೆ ಸಭೆಯ ಗಮನ ಸೆಳೆದರು.

ರಾಣೇಬೆನ್ನೂರ ಕ್ಷೇತ್ರದ ಶಾಸಕ ಅರುಣಕುಮಾರ ಗುತ್ತೂರ ಅವರು ಮನೆ ಪರಿಹಾರ ವಿತರಣೆಯಲ್ಲಿ ಬಡವರಿಗೆ ತೀವ್ರವಾದ ಅನ್ಯಾಯವಾಗಿದೆ. ಪೂರ್ಣ ಮನೆಬಿದ್ದರು ಸಿ ವರ್ಗಕ್ಕೆ ಸೇರ್ಪಡೆಮಾಡಿ ಅಲ್ಪ ಪರಿಹಾರವನ್ನು ನೀಡಲಾಗಿದೆ. ಎ, ಬಿ ಹಾಗೂ ಸಿ ಎಂದು ವರ್ಗೀಕರಿಸುವ ಕ್ರಮದಲ್ಲೇ ಲೋಪವಾಗಿದೆ. ಅಸಹಾಯಕರು, ಬಡವರ ಮನೆಗಳು ಪೂರ್ಣವಾಗಿ ಬಿದ್ದರು ಆ ಫಲಾನುಭವಿಗಳ ಮನೆಗಳನ್ನು ಸಿ ವರ್ಗಕ್ಕೆ ಸೇರ್ಪಡೆಗೊಳಿಸಿ ವಂಚನೆಮಾಡಲಾಗಿದೆ. ಇಂತಹ ಲೋಪಗಳನ್ನು ಸರಿಪಡಿಸಬೇಕು. ಈ ಫಲಾನುಭವಿಗಳಿಗೆ ಪೂರ್ಣ ಪ್ರಮಾಣದ ಪರಿಹಾರ ನೀಡಬೇಕು. ಪೂರ್ಣವಾಗಿ ಮನೆ ಕುಸಿತಗೊಂಡರೂ ಅಧಿಕಾರಿಗಳ ತಪ್ಪಿನಿಂದ ಸಿ ವರ್ಗಕ್ಕೆ ಸೇರಿಸಿ ಪರಿಹಾರ ವಂಚಿಸಿದವರ ಪಟ್ಟಿಮಾಡಿ. ಇಂತಹವರಿಗೆ ಐದು ಲಕ್ಷ ರೂ. ಪರಿಹಾರ ನೀಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ. ನಾನು ಸಹ ಮುಖ್ಯಮಂತ್ರಿಗಳೊಂದಿಗೆ ಈ ಕುರಿತಂತೆ ಮನವಿ ಮಾಡಿಕೊಳ್ಳುತ್ತೇನೆ ಎಂದು ಸಭೆಯಲ್ಲಿ ತಿಳಿಸಿದರು.

ಜಿ.ಪಂ.ಮಾಜಿ ಅಧ್ಯಕ್ಷರಾದ ಎಸ್.ಕೆ.ಕರಿಯಣ್ಣನವರ, ಕೊಟ್ರೇಶಪ್ಪ ಬಸೇಗಣ್ಣಿ, ಶಿವರಾಜ ಹರಿಜನ, ವಿರುಪಾಕ್ಷಪ್ಪ ಕಡ್ಲಿ, ಸಿದ್ಧರಾಜ ಕಲಕೋಟಿ, ಶಿವರಾಜ, ಮಹಾಂತೇಶ, ರಮೇಶ ದುಗ್ಗತ್ತಿ, ಶ್ರೀಮತಿ ಸರ್ವಮಂಗಳಾ, ಮಾಲತೇಶ ಸೊಪ್ಪಿನ ಸೇರಿದಂತೆ ವಿವಿಧ ಸದಸ್ಯರು ಪರಿಹಾರ ವಿತರಣೆಯಲ್ಲಿ ಉಂಟಾಗಿರುವ ಲೋಪ ಹಾಗೂ ತಹಶೀಲ್ದಾರಗಳು ಮತ್ತು ಗ್ರಾಮ ಲೆಕ್ಕಾಧಿಕಾರಿಗಳ ಕಾರ್ಯವೈಖರಿ ಕುರಿತಂತೆ ತೀವ್ರ ಅಸಮಾಧಾನ ವ್ಯಕ್ತಪಡಿಸಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡಿ ಆದರೆ ನೈಜ ಫಲಾನುಭವಿಗಳಿಗೆ ಅನ್ಯಾಯವಾಗದಂತೆ ಪರಿಹಾರ ವಿತರಣೆಗೆ ಸೂಕ್ತ ಕ್ರಮವಹಿಸಿ ಎಂದು ಆಗ್ರಹ ವ್ಯಕ್ತಪಡಿಸಿದರು.

ನೆರೆ ಪರಿಹಾರ ಕುರಿತ ಚರ್ಚೆಯಲ್ಲಿ ಭಾಗವಹಿಸಿದ ಅಪರ ಜಿಲ್ಲಾಧಿಕಾರಿ ಯೋಗೇಶ್ವರ ಅವರು ಸದಸ್ಯರ ಪ್ರಶ್ನೆಗಳಿಗೆ ಉತ್ತರಿಸಿ, ಅತಿವೃಷ್ಟಿ ಹಾಗೂ ನೆರೆಯಿಂದ ಜಿಲ್ಲೆಯಲ್ಲಿ ಉಂಟಾದ ಬೆಳೆ ಹಾಗೂ ಮನೆ ಹಾನಿ ಪರಿಹಾರ ಒದಗಿಸಲು ಸರ್ಕಾರದ ಮಾರ್ಗಸೂಚಿಯಂತೆ ಅಧಿಕಾರಿಗಳ ತಂಡರಚಿಸಿ ಸರ್ವೇಮಾಡಿಸಲಾಗಿದೆ. ದೃಢೀಕರಣದೊಂದಿಗೆ ಸಂತ್ರಸ್ತರ ವಿವರವನ್ನು ಸಾಫ್ಟವೇರ್ ಮೂಲಕ ಅಪ್‍ಲೋಡ್ ಮಾಡಲು ಸೂಚನೆ ನೀಡಲಾಗಿತ್ತು. ಇದಕ್ಕಾಗಿ ಗ್ರಾಮ ಲೆಕ್ಕಾಧಿಕಾರಿಗಳು, ಕಂದಾಯ ಅಧಿಕಾರಿಗಳು, ಕೃಷಿ, ತೋಟಗಾರಿಕೆ ಅಧಿಕಾರಿಗಳು, ತಹಶೀಲ್ದಾರ ಒಳಗೊಂಡ ತಂಡಗಳನ್ನು ರಚಿಸಲಾಗಿತ್ತು. ಮಾಹಿತಿ ಗಣಕೀರಣಕ್ಕೆ ಗ್ರಾಮ ಲೆಕ್ಕಾಧಿಕಾರಿಗಳು, ತಹಶೀಲ್ದಾರಗಳಿಗೆ ಲಾಗಿನ್ ಪಾಸ್‍ವರ್ಡ್‍ಗಳನ್ನು ನೀಡಲಾಗಿತ್ತು. ಬೆಳೆಹಾನಿ ಫಲಾನುಭವಿಗಳ ಆಧಾರ್ ಕಾರ್ಡ್, ಬ್ಯಾಂಕ್ ಖಾತೆ ಹಾಗೂ ಬೆಳೆ ಪಹಣಿ ದಾಖಲೆಗಳನ್ನು ಪರಿಶೀಲಿಸಿ ದಾಖಲೆಗಳನ್ನು ದೃಢೀಕರಿಸಿ ಜಿಲ್ಲಾಧಿಕಾರಿಗಳ ಅನುಮೋದನೆಗೆ ಕಳುಹಿಸುವ ವ್ಯವಸ್ಥೆ ಮಾಡಲಾಗಿತ್ತು. ಈ ಹಂತದಲ್ಲಿ ಒಂದು ಆಧಾರ್ ಕಾರ್ಡಗೆ ಕೇವಲ 4.38 ಎಕರೆ ಜಮೀನಿಗೆ ಪರಿಹಾರ ಪಡೆಯಲು ಅವಕಾಶವಿತ್ತು. ಆದರೆ ಕೆಲ ರೈತರದು 10 – 15 ಎಕರೆಗೂ ಹೆಚ್ಚು ಹಾನಿಯಾದ ಕಾರಣ ಸಾಫ್ಟವೇರ್‍ನಲ್ಲಿ ನಾಲ್ಕಕ್ಕಿಂತ ಹೆಚ್ಚು ಎಕರೆ ಒಬ್ಬ ಫಲಾನುಭವಿಗಳ ಹೆಸರಿಗೆ ಸ್ವೀಕರಿಸದ ಕಾರಣ ಇದನ್ನೇ ಬಳಸಿಕೊಂಡು ಬೇರೆ ಬೇರೆ ಆಧಾರ್ ಕಾರ್ಡ್‍ಗಳ ಹೆಸರಿಗೆ ನೊಂದಾಯಿಸಿ ಕೆಲವರು ತಪ್ಪು ಎಸಗಿದ್ದಾರೆ. ಇಂತಹ 18 ಪ್ರಕರಣಗಳನ್ನು ಪತ್ತೆಹಚ್ಚಿ ಅಮಾನತ್ ಮಾಡಲಾಗಿದೆ. ಪ್ರತಿ ಖಾತೆಯ ಪರಿಶೀಲನೆ ನಡೆಯುತ್ತಿದೆ. ಪರಿಹಾರ ವಿತರಣೆಯಲ್ಲಿ ಮೇಲ್ನೋಟಕ್ಕೆ ತಪ್ಪು ಕಂಡುಬಂದ ಪ್ರಕರಣಗಳ ತನಿಖೆಗೆ ಪೊಲೀಸ್ ಇಲಾಖೆಗೆ ನೀಡಲಾಗಿದೆ. ತಪ್ಪುಮಾಡಿದ ಅಧಿಕಾರಿಗಳ ಮೇಲೆ ಕ್ರಿಮಿನಲ್ ಪ್ರಕರಣಗಳನ್ನು ಹೂಡಲಾಗಿದೆ. ತನಿಖೆಯಿಂದ ತಪ್ಪು ಮಾಡಿದವರು ಹೊರಬರುತ್ತಾರೆ. ಇಂತಹವರ ಮೇಲೆ ಕಾನೂನು ಅಡಿಯಲ್ಲಿ ಕ್ರಮಕೈಗೊಳ್ಳಲಾಗುತ್ತದೆ. ಮನೆಹಾನಿ ಹಾಗೂ ಬೆಳೆಹಾನಿ ಪರಿಹಾರ ಸಂಬಂಧಿಸಿದ ದೂರುಗಳ ಸ್ವೀಕಾರಕ್ಕಾಗಿ ಈಗಾಲೇ ತಾಲೂಕುವಾರು ಸಭೆ ನಡೆಸಿ ಸಾರ್ವಜನಿಕರ ದೂರುಗಳನ್ನು ಸ್ವೀಕರಿಸಲಾಗಿದೆ. ದೂರುಗಳ ಆಧಾರದ ಮೇಲೆ ಅಧಿಕಾರಿಗಳ ತಂಡ ರಚಿಸಿ ಸ್ಥಳ ತನಿಖೆ ನಡೆಸಲಾಗುತ್ತದೆ. ಸಾಧ್ಯವಾದರೆ ನಾನು ಸಹ ಖುದ್ದಾಗಿ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತೇನೆ. ಇದಲ್ಲದೆ ಬೆಂಗಳೂರಿನಿಂದ ವಿಶೇಷ ತಂಡ ಜಿಲ್ಲೆಗೆ ಆಗಮಿಸಿ ಪರಿಹಾರ ಪಾವತಿಯಾದ ಎಲ್ಲ ಫಲಾನುಭವಿಗಳ ವಿವರವನ್ನು ಪರಿಶೀಲಿಸಲಿದೆ. ತಪ್ಪಿಸ್ಥತರಿಗೆ ಖಂಡಿತ ಶಿಕ್ಷೆಯಾಗಲಿದೆ. ಸಮೀಕ್ಷೆಯಿಂದ ಕೈಬಿಟ್ಟುಹೋದ ಹಾಗೂ ಪರಿಹಾರದಿಂದ ವಂಚಿತರಾದವರ ವಿವರವನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದ ಎಂದು ವಿವರಿಸಿದರು.