ಜಿ.ಪಂ.ಉಪಾಧ್ಯಕ್ಷೆಯಾಗಿ ಗಿರಿಜವ್ವ ಬ್ಯಾಲದಹಳ್ಳಿ ಅವಿರೋಧ ಆಯ್ಕೆ

Share

ಹಾವೇರಿ: ಜಿಲ್ಲಾ ಪಂಚಾಯತಿಯ ನೂತನ ಉಪಾಧ್ಯಕ್ಷೆಯಾಗಿ ತುಮ್ಮಿನಕಟ್ಟೆ ಜಿ.ಪಂ.ಕ್ಷೇತ್ರದ ಗಿರಿಜವ್ವ ಹನುಮಂತಪ್ಪ ಬ್ಯಾಲದಹಳ್ಳಿ ಮಂಗಳವಾರ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ದೀಪಾ ಅತ್ತಿಗೇರಿ ಅವರ ರಾಜೀನಾಮೆಯಿಂದ ತೆರವಾಗಿದ್ದ ಜಿಲ್ಲಾ ಪಂಚಾಯತಿಯ ಉಪಾಧ್ಯಕ್ಷರ ಉಳಿದ ಅವಧಿಗೆ ಮಂಗಳವಾರ ನಿಗಧಿಯಾಗಿದ್ದ ಚುನಾವಣೆಯಲ್ಲಿ ತುಮ್ಮಿನಕಟ್ಟೆ ಕ್ಷೇತ್ರದ ಗಿರಿಜವ್ವ ಹನುಮಂತಪ್ಪ ಬ್ಯಾಲದಹಳ್ಳಿ ಹಾಗೂ ಹುರಳಿಕೊಪ್ಪಿ ಮತ ಕ್ಷೇತ್ರದ ಜಿ.ಪಂ.ಸದಸ್ಯೆ ಸಹನಾ ಶ್ರೀಧರ ದೊಡ್ಡಮನಿ ಅವರು ನಾಮಪತ್ರ ಸಲ್ಲಿಸಿದ್ದರು.

ಮಧ್ಯಾಹ್ನ 1 ಗಂಟೆಗೆ ಚುನಾವಣೆ ಪ್ರಕ್ರಿಯೆ ಆರಂಭಿಸಿದ ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತೆ ಎಂ.ದೀಪಾ ನಾಮಪತ್ರದ ಕ್ರಮಬದ್ಧತೆ ಪ್ರಕಟಿಸಿ ನಾಮಪತ್ರ ಹಿಂಪಡೆಯಲು ಐದು ನಿಮಿಷ ಕಾಲಾವಕಾಶ ನೀಡಿದರು. ಈ ಸಂದರ್ಭದಲ್ಲಿ ಉಪಾಧ್ಯಕ್ಷ ಸ್ಥಾನಕ್ಕೆ ಉಮೇದುವಾರಿಕೆ ಸಲ್ಲಿಸಿದವರ ಪೈಕಿ ಸಹನಾ ಶ್ರೀಧರ ದೊಡ್ಡಮನಿ ನಾಮಪತ್ರ ಹಿಂಪಡೆದರು.

ಅಂತಿಮವಾಗಿ ಕಣದಲ್ಲಿ ಉಳಿದಿದ್ದ ತುಮ್ಮಿನಕಟ್ಟೆ ಮತಕ್ಷೇತ್ರದ ಗಿರಿಜವ್ವ ಹನುಮಂತಪ್ಪ ಬ್ಯಾಲದಹಳ್ಳಿ ಅವರು ಅವಿರೋಧ ಆಯ್ಕೆಯಾಗಿರುವುದಾಗಿ ಘೋಷಿಸಿದರು. ವೇದಿಕೆಗೆ ಆಹ್ವಾನಿಸಿ ನೂತನ ಉಪಾಧ್ಯಕ್ಷರಿಗೆ ಪುಷ್ಪಗುಚ್ಛ ನೀಡಿ ಅಭಿನಂದಿಸಿದರು.

ಜಿಲ್ಲಾ ಪಂಚಾಯತಿಯ 34 ಸದಸ್ಯ ಬಲದ ಪೈಕಿ ಚುನಾವಣೆ ಪ್ರಕ್ರಿಯೆ ನಡೆಸಲು 18 ಜನರ ಹಾಜರಾತಿ ಅವಶ್ಯವಿದ್ದು, ಸಭೆಯಲ್ಲಿ 23 ಜನ ಸದಸ್ಯರು ಭಾಗವಹಿಸಿದ್ದರು.

ಬೆಳಿಗ್ಗೆ 11 ರಿಂದ ಅಪರ ಜಿಲ್ಲಾಧಿಕಾರಿ ಎನ್.ತಿಪ್ಪೇಸ್ವಾಮಿ ಅವರು ನಾಮಪತ್ರ ಸ್ವೀಕರಿಸಿದರು. ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ, ಬೆಳಗಾವಿ ವಿಭಾಗದ ಉಪ ಪ್ರಾದೇಶಿಕ ಆಯುಕ್ತರಾದ ಶಶಿಧರ ಕುರೇರ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಜಿ.ಗೋವಿಂದಸ್ವಾಮಿ ಇದ್ದರು.