ಮದುವೆ ನಿರಾಕರಿಸಿದ ತಂಗಿಗೆ ಅಣ್ಣನ ಕೊಡಲಿ ಏಟು..

Share

ರಾಯಚೂರು, ಜುಲೈ 11: ನಿಶ್ಚಯವಾಗಿದ್ದ ಮದುವೆ ನಿರಾಕರಿಸಿದ ತಂಗಿಯನ್ನು ಅಣ್ಣನೇ ಕೊಡಲಿಯಿಂದ ಕೊಚ್ಚಿ ಕೊಂದಿರುವ ಘಟನೆ ಶನಿವಾರ ದೇವದುರ್ಗ ತಾಲೂಕಿನ ಗಬ್ಬೂರು ಗ್ರಾಮದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಚಂದ್ರಕಲಾ (22) ಕೊಲೆಯಾದ ಯುವತಿ. ಶ್ಯಾಮಸುಂದರ ಎಂಬಾತ ತಂಗಿಯನ್ನು ಕೊಲೆ ಮಾಡಿರುವ ಆರೋಪಿ. ಕೊಲೆಯಾದ ಚಂದ್ರಕಲಾಗೆ ಮಾನವಿ ತಾಲೂಕಿನ ಮದ್ಲಾಪುರ ಗ್ರಾಮದ ಯುವಕನೊಂದಿಗೆ ಮದುವೆ ನಿಶ್ಚಯವಾಗಿತ್ತು, ಜು.23ರಂದು ಮದುವೆ ನಡೆಯಬೇಕಿತ್ತು.

ಕೊಲೆ ಆರೋಪಿ ಶ್ಯಾಮ್ಸುಂದರ್

ಮನೆಯವರು ಮದುವೆಗೆ ಬೇಕಾದ ಎಲ್ಲಾ ತಯಾರಿ ಮಾಡಿಕೊಳ್ಳುತ್ತಿದ್ದರು. ಈ ನಡುವೆ, ಯುವತಿ ಚಂದ್ರಕಲಾ ಹುಡುಗ ಕಪ್ಪಗಿದ್ದಾನೆ ಎನ್ನುವ ಕಾರಣಕ್ಕೆ ಮದುವೆ ಮಾಡಿಕೊಳ್ಳಲು ನಿರಾಕರಿಸಿದ್ದಳು. ಇದರಿಂದ ಕುಪಿತಗೊಂಡ ಆಕೆಯ ಅಣ್ಣ ಶ್ಯಾಮಸುಂದರ ಕೊಡಲಿಯಿಂದ ಕೊಚ್ಚಿ ತಂಗಿಯನ್ನು ಕೊಂದಿದ್ದಾನೆ. ಕೊಲೆ ಆರೋಪಿಯನ್ನು ಗಬ್ಬೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.