ಯಡಿಯೂರಪ್ಪ ಅವರನ್ನ ಮುಖ್ಯಮಂತ್ರಿ ಮಾಡಿದ್ದು ನಾನೇ: ಚಂದ್ರಕಾಂತ ಬೆಲ್ಲದ​

Share

ಧಾರವಾಡ, ಜೂನ 17: ಬಿ‌.ಎಸ್‌.ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡಿದ್ದು ನಾನೇ. ಇದು ರಾಜ್ಯದ ಎಲ್ಲ ನಾಯಕರಿಗೂ ಗೊತ್ತಿದೆ ಎಂದು ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ​ ಹೇಳಿದ್ದಾರೆ.

ಧಾರವಾಡದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ, ಬಿಎಸ್​ವೈ ಅವರನ್ನ ಸಿಎಂ ಮಾಡಿದ್ದು ನಾನೇ. ಈ ಬಗ್ಗೆ ಯಡಿಯೂರಪ್ಪ ಆತ್ಮ ಶೋಧನೆ ಮಾಡಿಕೊಳ್ಳಲಿ. ಅದರ ಮೂಲಕ ನ್ಯಾಯಯುತವಾಗಿ ನಡೆದುಕೊಳ್ಳಲಿ. ಬೆಳೆಸಿದ ಪಕ್ಷದೊಂದಿಗೆ ನಿಷ್ಠೆಯಿಂದ ನಡೆದುಕೊಳ್ಳಲಿ. ಪಕ್ಷ ಹೇಳಿದ್ದನ್ನು ಕೇಳಿಕೊಂಡು ಕೆಲಸ ಮಾಡಲಿ ಎಂದರು.

ನಾನು ಬಿಜೆಪಿಗೆ ಬಂದಾಗ ಬಿಎಸ್‌ವೈ ಒಬ್ಬರೇ ಶಾಸಕರಿದ್ದರು. ಪಕ್ಷದ ಬೆಳವಣಿಗೆಗೆ ನಾನೇ ಕಾರಣ. ನಾನು ಬಿಜೆಪಿ ಬೆಳೆಸಿದ್ದು ನಾಯಕರಿಗೂ ಗೊತ್ತಿದೆ. 1991ರಲ್ಲಿ ಲೋಕಸಭೆಗೆ ಸ್ಪರ್ಧಿಸಿದ್ದೆ. ಆಗ ಧಾರವಾಡ ಕ್ಷೇತ್ರದಲ್ಲಿ ಒಬ್ಬ ಬಿಜೆಪಿ ಶಾಸಕನೂ ಇರಲಿಲ್ಲ. ಅಂದು ಕಾಂಗ್ರೆಸ್ ವಿರುದ್ಧ ಸೋತಿದ್ದೆ. ಆಗ ಬಿಜೆಪಿ ಕಾರ್ಯಕರ್ತರೂ ಇರಲಿಲ್ಲ. ಆದರೂ ನಾನು ವೈಯಕ್ತಿಕ ವ್ಯಕ್ತಿತ್ವದಿಂದ ಮತ ಪಡೆದಿದ್ದೆ. ಬಳಿಕ ಐದು ಬಾರಿ ಶಾಸಕನಾಗಿದ್ದೆ. ತಮ್ಮನ್ನು ಸಿಎಂ ಮಾಡಿದ್ದು ಯಾರು ಅನ್ನೋದು ಬಿಎಸ್‌ವೈಗೂ ಗೊತ್ತಿತ್ತು. ಆದರೂ ನನಗೆ ಅವರು ಸಚಿವ ಸ್ಥಾನ ಕೊಡಲಿಲ್ಲ ಎಂದು ಚಂದ್ರಕಾಂತ ಬೆಲ್ಲದ ಅಸಮಾಧಾನ ಹೊರಹಾಕಿದರು.

ಇನ್ನು ತನ್ನ ಪುತ್ರ ಅರವಿಂದ ಬೆಲ್ಲದಗೆ ಸಚಿವ ಸ್ಥಾನ ಕೊಡುವ ಬಗ್ಗೆ ಪ್ರತಿಕ್ರಿಯಿಸಿದ ಚಂದ್ರಕಾಂತ ಬೆಲ್ಲದ, ಅದು ಪಕ್ಷಕ್ಕೆ ಬಿಟ್ಟ ವಿಚಾರ. ಸಚಿವ ಸ್ಥಾನ ನೀಡಬೇಕು ಅನ್ನೋದು ಜನರ ಆಶಯ ಎಂದರು.