ಹರಿಯಾಣ ಹರಿಕೇನ್, ಖ್ಯಾತ ಕ್ರಿಕೆಟಿಗ ಕಪಿಲ್ ದೇವ್ ಗೆ ಹೃದಯಾಘಾತ, ಆಸ್ಪತ್ರೆಗೆ ದಾಖಲು

Share

ನವದೆಹಲಿ: ಭಾರತಕ್ಕೆ ಚೊಚ್ಚಲ ವಿಶ್ವಕಪ್ ತಂದು ಕೊಟ್ಟ ಮಾಜಿ ನಾಯಕ ಕಪಿಲ್ ದೇವ್ ಹೃದಯಾಘಾತಕ್ಕೆ ಒಳಗಾಗಿದ್ದು, ದೆಹಲಿಯ ಫೋರ್ಟೀಸ್ ಎಸ್ಕಾರ್ಟ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸದ್ಯಕ್ಕೆ ಕಪಿಲ್ ದೇವ್ ಅವರಿಗೆ ಆಂಜಿಯೋಪ್ಲಾಸ್ಟಿ ಚಿಕಿತ್ಸೆ ನೀಡಲಾಗುತ್ತಿದ್ದು, ಇನ್ನಷ್ಟು ಚೇತರಿಸಿಕೊಳ್ಳಲಿ ಎಂದು ಕಪಿಲ್ ದೇವ್ ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ. ಹರಿಯಾಣ ಹರಿಕೇನ್ ಎಂದೇ ಹೆಸರುವಾಸಿಯಾಗಿದ್ದ ಕಪಿಲ್​​​ದೇವ್ ಅವರು 1978 ಅಕ್ಟೋಬರ್ 1 ರಂದು ಪಾಕಿಸ್ತಾನದ ವಿರುದ್ಧ ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿ ಜೀವನಕ್ಕೆ ಪದಾರ್ಪಣೆ ಮಾಡಿದ್ದರು.

ಪ್ರಸ್ತುತ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2020 ರಲ್ಲಿ ಕಪಿಲ್ ದೇವ್ ಕ್ರಿಕೆಟ್ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಳ್ಳುವ ಮೂಲಕ ಸಾಕಷ್ಟು ಸಕ್ರಿಯರಾಗಿದ್ದರು. ಭಾರತದ ಮಾಜಿ ನಾಯಕ ಮಧುಮೇಹ ಸಂಬಂಧಿತ ಆರೋಗ್ಯ ಸಮಸ್ಯೆಗಳನ್ನೂ ಹೊಂದಿದ್ದು, ಅವರು ಶೀಘ್ರವಾಗಿ ಚೇತರಿಸಿಕೊಳ್ಳಬೇಕೆಂದು ಅಭಿಮಾನಿಗಳು ಪ್ರಾರ್ಥಿಸಿದ್ದಾರೆ.

ಲಾರ್ಡ್ಸ್‌ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಭಾರತದ ಶ್ರೇಷ್ಠ ಆಲ್‌ರೌಂಡರ್‌ಗಳಲ್ಲಿ ಒಬ್ಬರಾದ ಕಪಿಲ್ ದೇವ್ 1983 ರಲ್ಲಿ ಭಾರತವನ್ನು ಮರೆಯಲಾಗದ ವಿಶ್ವಕಪ್ ಗೆಲ್ಲುವುದಕ್ಕೆ ಕಾರಣವಾಗಿದ್ದರು.

ಕಪಿಲ್ ದೇವ್ ಅವರು ಕೆಲವು ತಿಂಗಳ ಹಿಂದೆ, ಲಾಕ್ ಡೌನ್ ಸಮಯದಲ್ಲಿ ಹೊಸ ಲುಕ್ ಹಂಚಿಕೊಂಡಾಗ ಸಾಮಾಜಿಕ ಮಾಧ್ಯಮದಲ್ಲಿ ಹಾಟ್ ಟ್ರೆಂಡ್ ಆಗಿ ಹೊರಹೊಮ್ಮಿದ್ದರು. ಅವರು ಕ್ರಿಕೆಟ್​​ನಲ್ಲಿ ಭಾರತದ ಪರ 131 ಟೆಸ್ಟ್ ಪಂದ್ಯಗಳಲ್ಲಿ 5,248 ರನ್ ಗಳು ಹಾಗೂ 434 ವಿಕೆಟ್​ಗಳು, 225 ಏಕದಿನ ಪಂದ್ಯಗಳಿಂದ 3,783 ರನ್ ಮತ್ತು 253 ವಿಕೆಟ್​ಗಳನ್ನು ಕಬಳಿಸಿದ್ದರು.