ನಿರ್ಭಯಾ ಪ್ರರಕರಣ: ನಾಲ್ಕು ಅಪರಾಧಿಗಳಿಗೆ ಗಲ್ಲು
ಹೊಸದಿಲ್ಲಿ: ನಿರ್ಭಯಾ ಸಾಮೂಹಿಕ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣದ ನಾಲ್ವರು ಅಪರಾಧಿಗಳು ಗಲ್ಲು ಶಿಕ್ಷೆಯಿಂದ ಪಾರಾಗಲು ಎಲ್ಲ ಕಾನೂನು ತಂತ್ರಗಳು ನಡೆಸಿ ಕೊನೆಗೆ ಶುಕ್ರವಾರ ಬೆಳಗ್ಗೆ ಸುಮಾರು 5.30ಕ್ಕೆ ದಿಲ್ಲಿಯ ತಿಹಾರ್ ಜೈಲಿನಲ್ಲಿ ನೇಣುಗಂಬಕ್ಕೆ ಕೊರಳೊಡ್ಡಿದ್ದಾರೆ.
ಬೆಳಗ್ಗೆ 8.35ಕ್ಕೆ ತಿಹಾರ್ ಜೈಲಿನಿಂದ ನಾಲ್ವರ ಮೃತದೇಹಗಳನ್ನು ದೀನ ದಯಾಳ್ ಉಪಾಧ್ಯಾಯ ಆಸ್ಪತ್ರೆಗೆ ಆ್ಯಂಬುಲೆನ್ಸ್ನಲ್ಲಿ ಕೊಂಡೊಯ್ದರು. ನಾಲ್ವರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಅವರ ಕುಟುಂಬದವರಿಗೆ ಹಸ್ತಾಂತರಿಸಲಾಗುವುದು ಎಂದು ತಿಹಾರ್ ಜೈಲಿನ ಡಿಜಿ ಮಾಹಿತಿ ನೀಡಿದರು.
ಗಲ್ಲು ಶಿಕ್ಷೆ ಜಾರಿಗೆ ಕೆಲವೇ ಗಂಟೆಗಳು ಬಾಕಿಯಿರುವಂತೆ ನಿರ್ಭಯಾ ಪ್ರಕರಣದ ಅಪರಾಧಿಗಳು ದೆಹಲಿ ಹೈಕೋರ್ಟ್ಗೆ ಮರುಪರಿಶೀಲನಾ ಅರ್ಜಿ ಸಲ್ಲಿಸಿದ್ದರು. ಅಪರಾಧಿಗಳ ಅರ್ಜಿ ಹೈಕೋರ್ಟ್ನಲ್ಲಿ ವಜಾ ಆದ ನಂತರ ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು. ಮಧ್ಯರಾತ್ರಿ ನ್ಯಾಯಮೂರ್ತಿ ಭಾನುಮತಿ ನೇತೃತ್ವದ ನ್ಯಾಯಪೀಠ ವಿಚಾರಣೆ ನಡೆಸಿ, ಅಪರಾಧಿಗಳ ಅರ್ಜಿ ತಳ್ಳಿ ಹಾಕಿ, ಗಲ್ಲು ಶಿಕ್ಷೆ ಕಾಯಂಗೊಳಿಸಿತ್ತು.
ನಿರ್ಭಯಾ ಹಂತಕರಿಗೆ ಮರಣದಂಡನೆ ಜಾರಿ ಮಾಡಿದ ಬೆನ್ನಲ್ಲೇ ಸಾಮಾಜಿಕ ಮಾಧ್ಯಮಗಳಲ್ಲಿ ಸಾವಿರಾರು ಮಂದಿ ಸಂಭ್ರಮ ವ್ಯಕ್ತಪಡಿಸಿ ಸಂದೇಶಗಳನ್ನು ಪ್ರಕಟಿಸಿದ್ದಾರೆ.
ಗಲ್ಲು ಶಿಕ್ಷೆ ಜಾರಿಯಿಂದ ಸಂತ್ರಸ್ತೆಗೆ ನ್ಯಾಯ ದೊರೆತಂತಾಗಿದೆ’, ವಿಳಂಬವಾಗಿಯಾದರೂ ನ್ಯಾಯ ದೊರೆತಿದೆ’, ಇತ್ಯಾದಿ ಸಂದೇಶಗಳು ಟ್ವಿಟರ್ನಲ್ಲಿ ಹರಿದಾಡುತ್ತಿವೆ. #NirbhayaVerdict, #NirbhayaCaseConvicts, #NirbhayaNyayDivas, #Justice ಹ್ಯಾಷ್ಟ್ಯಾಗ್ಗಳು ಮುಂಜಾನೆಯೇ ಟ್ರೆಂಡ್ ಆಗಿವೆ.