ವಿಧಾನ ಪರಿಷತ್ ಉಪಸಭಾಪತಿ ಎಸ್. ಎಲ್ ಧರ್ಮೇಗೌಡ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ..!
ಬೆಂಗಳೂರು: ವಿಧಾನ ಪರಿಷತ್ ಉಪಸಭಾಪತಿ ಎಸ್.ಎಲ್.ಧರ್ಮೇಗೌಡ (64) ಅವರ ಮೃತದೇಹ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲ್ಲೂಕಿನ ಗುಣಸಾಗರ ಬಳಿಯ ರೈಲು ಹಳಿಯಲ್ಲಿ ರಕ್ತ ಸಿಕ್ತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ.
ಸಖರಾಯಪಟ್ಟಣದ ಬಳಿ ತೋಟದ ಮನೆಯಿಂದ ಸೋಮವಾರ ಸಂಜೆ ಕಾರಿನಲ್ಲಿ ತೆರಳಿದ್ದ ಧರ್ಮೇಗೌಡ ಅವರು ವಾಪಾಸಾಗಿರಲಿಲ್ಲ. ರಾತ್ರಿಯಾದರೂ ವಾಪಸ್ ಬಾರದಿದ್ದರಿಂದ ಮನೆಯವರು ಹುಡುಕಾಡಿದ್ದಾರೆ. ಗುಣಸಾಗರ – ಕಬ್ಳಿ ಮಾರ್ಗದ ನಡುವೆ ತಡರಾತ್ರಿ ಶವ ಪತ್ತೆಯಾಗಿದೆ.
ಧರ್ಮೇಗೌಡ ಅವರ ಮೃತದೇಹದ ಜತೆ ಡೆತ್ ನೋಟ್ ಸಿಕ್ಕಿದೆ. ವಿಧಾನ ಪರಿಷತ್ನಲ್ಲಿ ಈಚೆಗೆ ನಡೆದ ಘಟನೆಯ ಉಲ್ಲೇಖ ಅದರಲ್ಲಿ ಇದೆ ಎನ್ನಲಾಗಿದೆ.
ಧರ್ಮೇಗೌಡ ಅವರು ಬೀರೂರಿನ ಪರಿಚಯಸ್ಥರೊಬ್ಬರಿಗೆ ಸೋಮವಾರ ಸಂಜೆ ಫೋನ್ ಮಾಡಿ ಜನ ಶತಾಬ್ಧಿ ರೈಲಿನ ಸಮಯವನ್ನು ವಿಚಾರಿಸಿದ್ದರು. ಹುಬ್ಬಳಿಯಿಂದ ಸ್ನೇಹಿತರೊಬ್ಬರು ರೈಲಿನ್ಲಲಿ ಬರುತ್ತಿದ್ದಾರೆ ಎಂದು ಅವರಿಗೆ ತಿಳಿಸಿದ್ದರು ಎಂದು ಆಪ್ತರೊಬ್ಬರು ತಿಳಿಸಿದ್ದಾರೆ.
ವಿಧಾನ ಪರಿಷತ್ನಲ್ಲಿ ಈಚೆಗೆ ನಡೆದ ಘಟನೆಯಿಂದ ಧರ್ಮೇಗೌಡ ಅವರು ಮನನೊಂದಿದ್ದರು ಎಂದು ಆಪ್ತರು ತಿಳಿಸಿದ್ದಾರೆ.
ಧರ್ಮೇಗೌಡ ಅವರು ಮನೆಯಿಂದ ಕಾರಿನಲ್ಲಿ ತೆರಳಿದ್ದಾರೆ. ಗುಣಸಾಗರ ಸಮೀಪದ ರೈಲು ಹಳಿ ಕಾರು ನಿಲ್ಲಿಸುವಂತೆ ಚಾಲಕ ಧರ್ಮರಾಜ್ಗೆ ಹೇಳಿದ್ದಾರೆ. ಖಾಸಗಿಯಾಗಿ ಒಬ್ಬರೊಂದಿಗೆ ಮಾತನಾಡುವುದಿದೆ ಎಂದು ಚಾಲಕನಿಗೆ ತಿಳಿಸಿ ಕಾರಿನಿಂದಿಳಿದು ಹೋದವರು ವಾಪಸ್ ಬಂದಿಲ್ಲ ಎಂದು ಧರ್ಮೇಗೌಡ ಅವರ ಆಪ್ತರೊಬ್ಬರು ತಿಳಿಸಿದರು.