ಶಾಲಾ‌ ಕೊಠಡಿ ಅಡಿಪಾಯದಲ್ಲಿ ಬಿದ್ದು ಮೂವರು ಮಕ್ಕಳು ಸಾವು

Share

ಬ್ಯಾಡಗಿ: ಪಟ್ಟಣದ ಹನುಮನ ಹೊಂಡದಲ್ಲಿರುವ ಉರ್ದು ಹಿರಿಯ ಪ್ರಾಥಮಿಕ ಶಾಲೆಯ ನೂತನ ಶಾಲಾ ಕೊಠಡಿಯ ಅಡಿಪಾಯದ (ಕಾಲಂ)ಲ್ಲಿ ಬಿದ್ದು ಮೂವರು ಮಕ್ಕಳು ಮೃತಪಟ್ಟ ಘಟನೆ ಶನಿವಾರ ಸಂಜೆ ನಡೆದಿದೆ.

ಪಟ್ಟಣದ ಮಹ್ಮದ್‌ಜಾಫರ್ ಅಮಾನಿ ಸವಣೂರ (10), ಹಾವೇರಿ ತಾಲೂಕಿನ ದೇವಿಹೊಸೂರ ಗ್ರಾಮದ ಸೈಯದ್‌ಅಜ್ಮಲ್ ಇನಾಯತ್ ಹಾವಣಗಿ (10), ಸೈಯದ್‌ಅಕ್ಮಲ್ ಇನಾಯತ್ ಹಾವಣಗಿ (8) ಮೃತ ದುರ್ದೈವಿಗಳು. ಹನುಮನ ಹೊಂಡದಲ್ಲಿನ ಉರ್ದು ಶಾಲೆಯ ಆವರಣದಲ್ಲಿ ನೂತನ ಕೊಠಡಿ ನಿರ್ಮಾಣ ಮಾಡಲು ಸುಮಾರು 6 ಅಡಿ ಆಳದ ಅಡಿಪಾಯದ (ಕಲಾಂ) ಗುಂಡಿ ತೆಗೆಯಲಾಗಿದೆ. ಶಾಲಾ ಮೈದಾನದಲ್ಲಿ ಸಂಗ್ರಹವಾದ ನೀರಿನಲ್ಲಿ ಆಟವಾಡಲು ತೆರಳಿದ ವೇಳೆ ಮೂವರು ಮಕ್ಕಳು ಗುಂಡಿಯಲ್ಲಿ ಇಳಿದಾಗ ಮೃತಪಟ್ಟಿದ್ದಾರೆ.

ಎರಡು ಮಕ್ಕಳು ಸ್ಥಳದಲ್ಲಿ ಮೃತಪಟ್ಟಿದ್ದು, ಒಂದು ಮಗು ಹಾವೇರಿಯ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದೆ. ಘಟನೆ ಸಂಭವಿಸುತ್ತಿದ್ದಂತೆ ಸ್ಥಳೀಯರು ರಸ್ತೆತಡೆ ನಡೆಸಿ, ಘಟನೆ ತಪ್ಪಿತಸ್ಥರ ಮೇಲೆ ಕ್ರಮ ಜರುಗಿಸುವಂತೆ ಆಗ್ರಹಿಸಿದರು.